ಚಳ್ಳಕೆರೆ: ಪರಶುರಾಮಪುರ ಹೋಬಳಿಯ ದೊಡ್ಡಚೆಲ್ಲೂರು, ಚಿಕ್ಕಚೆಲ್ಲೂರು, ಗೋಸಿಕೆರೆ, ಓಬಳಾಪುರ, ಟಿ.ಎನ್.ಕೋಟೆ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಮೂರು ಚಿರತೆಗಳು ಓಡಾಟ ನಡೆಸುವುದನ್ನು ಕುರಿಗಾಯಿಗಳು ಕಂಡು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರಾದ ಮಹಲಿಂಗಪ್ಪ, ಇಂದ್ರಕುಮಾರ್, ಸಂಜೆ ವೇಳೆ ಗ್ರಾಮದಿಂದ ದೂರದ ಪ್ರದೇಶದಲ್ಲಿ ಚಿರತೆ ಓಡಾಡುವುದನ್ನು ಕಂಡು ಕೂಡಲೇ ಈ ಬಗ್ಗೆ ಗ್ರಾಮದ ಜನರನ್ನು ಎಚ್ಚರಿಸಿದ್ದಲ್ಲದೆ, ಕುರಿ, ದನಗಳ ಮೇಲೆ ಚಿರತೆ ದಾಳಿ ನಡೆಸದಂತೆ ರಾತ್ರಿ ವೇಳೆ ಕಾವಲು ಕಾಯಲಾಗುತ್ತಿದೆ.

ಸಾಮಾಜಿಕ ಅರಣ್ಯ ಅಧಿಕಾರಿ ಎಸ್.ವಿ.ಮಂಜುನಾಥ ಮತ್ತು ಸಿಬ್ಬಂದಿ ವರ್ಗ ಗ್ರಾಮಗಳಿಗೆ ತೆರಳಿ ಸಾರ್ವಜನಿಕರಿಗೆ ಹಾಗೂ ಕುರಿಗಾಯಿಗಳಿಗೆ ನಿರ್ದೇಶನ ನೀಡಿದ್ದಾರೆ. ರಾತ್ರಿ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುತ್ತಿದ್ದು, ಗ್ರಾಮಸ್ಥರು ಸಂಜೆ ವೇಳೆ ಓಡಾಟ ನಡೆಸದಂತೆ ತಿಳಿಸಿದ್ದಾರೆ, ಚಿರತೆಯ ಚಲನವಲನ ಕಂಡರೆ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಚಿರತೆಯನ್ನು ಜೀವಂತ ಸೆರೆಹಿಡಿಯಲು ಈಗಾಗಲೇ ಮೂರು ಕಡೆ ಬೋನು ಇಡಲಾಗಿದೆ ಎಂದು ತಿಳಿಸಿದ್ದಾರೆ.

--

ಪೋಟೋ: ಚಳ್ಳಕೆರೆ ತಾಲೂಕಿನ ದೊಡ್ಡಚೆಲ್ಲೂರು ಗ್ರಾಮದಲ್ಲಿ ಅರಣ್ಯ ಸಿಬ್ಬಂದಿಯಿಂದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಯಿತು.


೨೮ಸಿಎಲ್‌ಕೆ೨