ಸಾರಾಂಶ
ಸವಣೂರು: ಕಾಯಕವೇ ಕೈಲಾಸ ಎಂದು ನುಡಿದಂತೆ ನಡೆದ ಬಸವೇಶ್ವರರ ಜಯಂತಿ ನಿಮಿತ್ತ ರಕ್ತದಾನಕ್ಕೆ ಮುಂದಾದ ಗ್ರಾಮದ ಯುವಜನತೆ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹುಬ್ಬಳ್ಳಿ ಕಿಮ್ಸ್ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ. ಕವಿತಾ ಎ. ತಿಳಿಸಿದರು.ಬಸವ ಜಯಂತಿ ಅಂಗವಾಗಿ ಶ್ರೀ ಸ್ವಾಮಿ ವಿವೇಕಾನಂದ ಯುವಕ ಮಂಡಳ ಚಳ್ಳಾಳ, ಜೆಸಿಐ ನಮ್ಮ ಸವಣೂರು ಇವರ ಸಹಯೋಗದಲ್ಲಿ ತಾಲೂಕಿನ ಚಳ್ಳಾಳ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಕ್ತದಾನದಿಂದ ಕೇವಲ ಇನ್ನೊಂದು ಜೀವಕ್ಕೆ ಜೀವ ನೀಡುವುದು ಅಷ್ಟೇ ಅಲ್ಲದೇ ಇತರರಿಗೂ ಪ್ರೇರಣೆಗೆ ಮುಂದಾಗಬಹುದು. ಆದ್ದರಿಂದ ರಕ್ತದಾನ ಮಹತ್ವದ ಕಾರ್ಯವಾಗಿದೆ ಎಂದರು.ಸವಣೂರು ರಕ್ತ ಭಂಡಾರದ ವ್ಯವಸ್ಥಾಪಕ ಮಹಾಂತೇಶ ಹೊಳೆಮ್ಮನವರ 19ನೇ ಬಾರಿ, ಸಾಮಾಜಿಕ ಕಾರ್ಯಕರ್ತ ಸುರೇಶ ಕಳ್ಳಿಮನಿ 15ನೇ ಬಾರಿ ರಕ್ತದಾನ ಮಾಡಿದರು. ಶಿಬಿರದಲ್ಲಿ ಒಟ್ಟು 24 ಯುವ ಜನತೆ ರಕ್ತದಾನ ಕೈಗೊಂಡು ಇತರರಿಗೆ ಪ್ರೇರಣೆಯಾದರು. ಚಳ್ಳಾಳ ಶ್ರೀ ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ನವೀನ ಸವಣೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೆಸಿಐ ನಮ್ಮ ಸವಣೂರು ಘಟಕದ ನಿಕಟಪೂರ್ವ ಅಧ್ಯಕ್ಷ ಬಸವರಾಜ ಚಳ್ಳಾಳ ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಪ್ರಮುಖರಾದ ಸತೀಶ ನಾಯಕ, ಸಂಜೀವ್ ಯರೇಸಿಮಿ, ವಸಂತ ಯರೇಸಿಮಿ, ಎಸ್.ಎಸ್. ಮನಿಯಾರ, ಗಿರೀಶ ಸವಣೂರ, ಧರ್ಮನಗೌಡ ಪಾಟೀಲ, ಬಸನಗೌಡ ಜಿಡ್ಡಿಗೌಡ್ರ, ಗುರುನಾಥ ಸಂಗೂರ, ಶಿವಾನಂದ ಹಡಪದ, ಹುಬ್ಬಳ್ಳಿ ಕಿಮ್ಸ್ ರಕ್ತ ಭಂಡಾರ ಸಿಬ್ಬಂದಿ ದಯಾನಂದ ಸಾಗರ, ಅಶೋಕ ಪಾಟೀಲ, ಅಸ್ಲಾಂ ಇತರರು ಪಾಲ್ಗೊಂಡಿದ್ದರು.ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಇಂದುಬ್ಯಾಡಗಿ: ಪಟ್ಟಣದ ಬಿಇಎಸ್ ಪ್ರೌಢಶಾಲೆಯಲ್ಲಿ ಮೇ 2ರಂದು ಬೆಳಗ್ಗೆ 10 ಗಂಟೆಗೆ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಲಾಗಿದೆ. ಜಿಲ್ಲಾ ರಕ್ತನಿಧಿ ಕೇಂದ್ರ ಹಾವೇರಿ, ವೈದ್ಯಕೀಯ ವಿಜ್ಞಾನ(ಹಿಮ್ಸ್) ಹಾವೇರಿ ಹಾಗೂ ಬಿಇಎಸ್ ಶಾಲೆಯ 2003- 04ನೇ ಸಾಲಿನ ವಿದ್ಯಾರ್ಥಿಗಳ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ.
ನಿವೃತ್ತ ಶಿಕ್ಷಕ ದಿ. ಬಿ.ಎಚ್. ಬಡ್ಡಿಯರವ ಸ್ಮರಣಾರ್ಥವಾಗಿ ರಕ್ತದಾನ ಶಿಬಿರ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸಹ ಅಂದೇ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.