ಸಾರಾಂಶ
ಶಿಕ್ಷಣವಂತನಿಗೆ ವಿನಯ ಬೇಕು. ಶಿಕ್ಷಣದ ಮೂಲ ಉದ್ದೇಶವೇ ಸಂಸ್ಕಾರ, ಧರ್ಮಪಾಲನೆ.
ಯಲ್ಲಾಪುರ: ಸಂಸ್ಕಾರಯುತ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯದಿರುವುದರಿಂದ ಸಮಾಜದಲ್ಲಿ ಯುವಕರು ದಾರಿ ತಪ್ಪುತ್ತಿದ್ದಾರೆ ಎಂದು ವಿಶ್ವದರ್ಶನ ಪುರಸ್ಕಾರ ಪಡೆದ ಹಿರಿಯ ಸಹಕಾರಿ, ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನ ಅಧ್ಯಕ್ಷ ಹರನಾಥ ರಾವ್ ಮತ್ತಿಕೊಪ್ಪ ತಿಳಿಸಿದರು.ಡಿ. ೨೧ರಂದು ಸಂಜೆ ನಡೆದ ವಿಶ್ವದರ್ಶನ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ, ತಾಂತ್ರಿಕ ನೈಪುಣ್ಯತೆ ಅಗತ್ಯ ಎಂದರು. ಆ ನಿಟ್ಟಿನಲ್ಲಿ ವಿಶ್ವದರ್ಶನ ಸಮೂಹ ಉತ್ತಮವಾದ ಕೆಲಸ ಮಾಡುತ್ತಿದೆ ಎಂದರು.
ಹಿರಿಯ ನ್ಯಾಯವಾದಿ ನಾರಾಯಣ ಯಾಜಿ ಆಶಯ ನುಡಿಗಳನ್ನಾಡಿ, ಶಿಕ್ಷಣದಲ್ಲಿ ಸಂಸ್ಕಾರ ಬೇಕು. ಶಿಕ್ಷಣವಂತನಿಗೆ ವಿನಯ ಬೇಕು. ಶಿಕ್ಷಣದ ಮೂಲ ಉದ್ದೇಶವೇ ಸಂಸ್ಕಾರ, ಧರ್ಮಪಾಲನೆ. ೧೯೩೫ರಲ್ಲಿ ಮೆಕಾಲೆ ಶಿಕ್ಷಣ ಪದ್ಧತಿ ಪ್ರಾರಂಭವಾಯಿತು. ಅದರಿಂದ ಕೇವಲ ಡಿಗ್ರಿಗಳು ಸಿಗುತ್ತಿದೆಯೇ ವಿನಾ ಸಂಸ್ಕಾರ, ಮೌಲ್ಯ, ನೈತಿಕತೆ, ಮಾನವೀಯತೆ ಇದಾವುದನ್ನೂ ನೀಡುತ್ತಿಲ್ಲ. ಅದರಿಂದ ನಾವು ದಾರಿ ತಪ್ಪುವುದಕ್ಕೆ ಕಾರಣವಾಗುತ್ತಿದೆ ಎಂದರು.ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಇಂದು ಯುವಜನಾಂಗ ಹಳ್ಳಿ ಬಿಟ್ಟು, ಪಟ್ಟಣಕ್ಕೆ ವಲಸೆ ಹೋಗುತ್ತಿದ್ದಾರೆ. ಆದರೆ ಪಟ್ಟಣದಲ್ಲಿ ಎಲ್ಲ ರೀತಿಯ ಅವಕಾಶಗಳಿದ್ದು, ಅದನ್ನು ಬಿಟ್ಟು ಈ ನೆಲದಲ್ಲಿ ಮಾದರಿ ಶಿಕ್ಷಣ ವ್ಯವಸ್ಥೆ ರೂಪಿಸುವ ಹಂಬಲದಿಂದ ಹರಿಪ್ರಕಾಶ ಉಮೇಶ ಭಟ್ಟರ ನಂತರ ಈ ಸಂಸ್ಥೆಯನ್ನು ವಹಿಸಿಕೊಂಡು ಮುನ್ನಡೆಸುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಇಂದು ಲಕ್ಷಾಂತರ ವೆಚ್ಚ ಮಾಡಿ, ತಮ್ಮ ಮಕ್ಕಳನ್ನು ದೂರದೂರದ ಊರಿಗೆ ಕಳಿಸುವ ಪರಿಪಾಠವಿತ್ತು. ಆದರೆ, ವಿಶ್ವದರ್ಶನದ ಪಿಯು ಕಾಲೇಜಿಗೆ ಅನೇಕ ಪಾಲಕರು ವಿಶ್ವಾಸವಿಟ್ಟು ಮಕ್ಕಳನ್ನು ಕಳಿಸಿದ್ದಾರೆ. ಅವರ ನಂಬಿಕೆಗೆ ನಮ್ಮ ಸಂಸ್ಥೆ ನಿರೀಕ್ಷೆ ಮೀರಿ ಮಕ್ಕಳ ಪ್ರಗತಿಗೆ ಕಾರಣರಾಗಿದ್ದೇವೆಎಂದರು.ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಮಾತನಾಡಿದರು. ನಿರ್ದೇಶಕ ವಿಘ್ನೇಶ್ವರ ಗಾಂವ್ಕರ ಉಪಸ್ಥಿತರಿದ್ದರು. ವಿದ್ಯಾರ್ಥಿ ಬಳಗದಿಂದ ಪ್ರಾರ್ಥನೆ, ಪಿಯು ಪ್ರಾಚಾರ್ಯ ಡಾ. ಡಿ.ಕೆ. ಗಾಂವ್ಕರ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ನರಸಿಂಹ ಕೋಣೆಮನೆ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.