ಸಾರಾಂಶ
ಹಿಂದೂ ಯುವ ಸೇನೆ ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಪ್ರಸಿದ್ಧ ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಬುರ್ಖಾ - ಹಿಜಾಬ್ ಮಹಿಳೆಯರು ಹಾಗೂ ಗೋಮಾಂಸ ಭಕ್ಷಕರು ಪ್ರವೇಶ ಮಾಡಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದು, ಅವರನ್ನು ದೇವಸ್ಥಾನಕ್ಕೆ ಕರೆತಂದ ಮಾಜಿ ಶಾಸಕ ರಘುಪತಿ ಭಟ್ ತಕ್ಷಣ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಹಿಂದೂ ಯುವ ಸೇನೆ ಉಡುಪಿ ನಗರ ಅಧ್ಯಕ್ಷ ಸುನೀಲ್ ಪೂಜಾರಿ ನೇಜಾರ್ ಆಗ್ರಹಿಸಿದ್ದಾರೆ.ಹಿಂದೂ ಸಮಾಜದ ಪವಿತ್ರ ದೇವಸ್ಥಾನಕ್ಕೆ ಬರಮಾಡಿಕೊಂಡು ನೇತೃತ್ವ ವಹಿಸಿದ ರಘುಪತಿ ಭಟ್ ಅದೇ ದೇವಸ್ಥಾನದ ಮೊಕ್ತೇಸರರಾಗಿ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದು ಅಕ್ಷಮ್ಯ ಎಂದಿದ್ದಾರೆ.ಅಂದು ಹಿಜಾಬ್ ಹೋರಾಟ ಸಂದರ್ಭದಲ್ಲಿ ಖಟ್ಟರ್ ಹಿಂದುತ್ವವಾದಿಯಂತೆ ಹೇಳಿಕೆ ನೀಡುತ್ತಿದ್ದ ರಘುಪತಿ ಭಟ್, ಇದೀಗ ಅದೇ ಹಿಜಾಬ್ ಮಹಿಳೆಯರ ನೆಚ್ಚಿನ ನಾಯಕರಾಗಿ ಹೇಳಿಕೆ ನೀಡುತ್ತಿರುವುದು ಅವರನ್ನು ಮೂರು ಬಾರಿ ಶಾಸಕರಾಗಿ ಆಯ್ಕೆ ಮಾಡಿದ ಹಿಂದೂಗಳಿಗೆ ಮಾಡಿದ ಅಪಮಾನ ಎಂದು ಸುನಿಲ್ ಪೂಜಾರಿ ಆರೋಪಿಸಿದ್ದಾರೆ.ಇದೇ ರೀತಿ ಮತೀಯ ಶಕ್ತಿಗಳೊಂದಿಗೆ ಕೈ ಜೋಡಿಸಿ ಹಿಂದೂ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮುಂದುವರಿದರೆ ಸಮಸ್ತ ಹಿಂದೂ ಕಾರ್ಯಕರ್ತರು ಜೊತೆಗೂಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.