ಉದ್ಯಮ ಎಂಜಿನಿಯರಿಂಗ್ ಮಕ್ಕಳ ಗುರಿಯಾಗಲಿ

| Published : Nov 11 2025, 01:30 AM IST

ಉದ್ಯಮ ಎಂಜಿನಿಯರಿಂಗ್ ಮಕ್ಕಳ ಗುರಿಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ನಾವೀನ್ಯತೆಯ ಆಲೋಚನೆ, ಸಾಮಾಜಿಕ ಕಳಕಳಿಯೊಂದಿಗೆ, ಉದ್ಯಮಶೀಲತೆಯನ್ನು ರೂಪಿಸಿ ನಿರ್ವಹಿಸುವ ಗುರಿ ಮೂಡಲಿ ಎಂದು ಹೊಸೂರಿನ ಅಧಿಯಮಾನ್‌ ಎಂಜಿನಿಯರಿಂಗ್‌ ಕಾಲೇಜಿನ ನಿರ್ದೇಶಕ, ದಿ ಇನ್ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌ ಮಾಜಿ ಅಧ್ಯಕ್ಷ ಡಾ.ಜಿ.ರಂಗನಾಥ ಅಭಿಪ್ರಾಯಪಟ್ಟರು.

ಶಿವಮೊಗ್ಗ: ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ನಾವೀನ್ಯತೆಯ ಆಲೋಚನೆ, ಸಾಮಾಜಿಕ ಕಳಕಳಿಯೊಂದಿಗೆ, ಉದ್ಯಮಶೀಲತೆಯನ್ನು ರೂಪಿಸಿ ನಿರ್ವಹಿಸುವ ಗುರಿ ಮೂಡಲಿ ಎಂದು ಹೊಸೂರಿನ ಅಧಿಯಮಾನ್‌ ಎಂಜಿನಿಯರಿಂಗ್‌ ಕಾಲೇಜಿನ ನಿರ್ದೇಶಕ, ದಿ ಇನ್ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌ ಮಾಜಿ ಅಧ್ಯಕ್ಷ ಡಾ.ಜಿ.ರಂಗನಾಥ ಅಭಿಪ್ರಾಯಪಟ್ಟರು.

ನಗರದ ಜೆ‌.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ - ‘ಟೆಕ್‌ಝೋನ್‌ ನ್ಯಾಷನಲ್ಸ್‌ 2025’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಂನಿಯರಿಂಗ್ ಪದವಿ ತನ್ನದೇ ವಿಶೇಷತೆ ಪಡೆದಿದೆ. ಉದ್ಯೋಗ ನೀಡುವ ಸಂಸ್ಥೆಯು ಪ್ರತಿ ಎಂಜಿನಿಯರ್ ಪದವೀಧರರಿಂದ, ಅಂಕಗಳ ಜತೆಗೆ ಕೌಶಲ್ಯತೆಗಳನ್ನು ನಿರೀಕ್ಷಿಸುತ್ತಿದೆ. ಯುವ ಸಮೂಹ ತಮ್ಮಲ್ಲಿರುವ ಕೌಶಲ್ಯತೆಗಳನ್ನು ನಿರೂಪಿಸಲು, ನಾವೀನ್ಯ ಯೋಜನೆಗಳನ್ನು ರೂಪಿಸುವತ್ತ ಗಮನ ಹರಿಸಿ. ಅಂಕಗಳೊಂದೆ ಉನ್ನತಿಕರಣದ ಮಾನದಂಡವಲ್ಲ ಎಂಬ ವಾಸ್ತವತೆಯನ್ನು ಅರಿಯಿರಿ ಎಂದು ಸಲಹೆ ನೀಡಿದರು.

ಯುವ ಸಮೂಹ ಆಧುನಿಕತೆಯ ಜಾಲದೊಳಗೆ ಸಿಲುಕಿ ನೈತಿಕ ಮೌಲ್ಯಗಳನ್ನು ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳು ಸಾಮಾನ್ಯರ ಭಾವನಾತ್ಮಕತೆಯ ಆಧಾರದಲ್ಲಿ ತಂತ್ರ ರೂಪಿಸುತ್ತಿದೆ. ಅಂತಹ ಅಂಧತ್ವಕ್ಕೆ ಒಳಗಾಗದೆ, ಪ್ರಬುದ್ಧವಾದ ಚಿಂತನೆಗಳನ್ನು ರೂಡಿಸಿಕೊಳ್ಳಿ. ಇಂಜಿನಿಯರಿಂಗ್ ಕ್ಷೇತ್ರದ ಸಂಶೋಧನೆ ಮತ್ತು ವೃತ್ತಿ ಅಭಿವೃದ್ಧಿಗೆ ಉತ್ತೇಜನೆ ನೀಡಲು ದಿ ಇನ್ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌, ಪೂರಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಸಮಯ ನಮಗಿರುವ ದೊಡ್ಡ ಗುರಿ. ಇಂದು ತಂತ್ರಜ್ಞಾನ ಕ್ಷೇತ್ರ ಉದ್ಯೋಗ ಕಡಿತ ಎಂಬ ಸವಾಲುಗಳನ್ನು ಎದುರಿಸುತ್ತಿದೆ. ಸವಾಲು ಸಮಯ ಕಲಿಸುವ‌ ಸಹಜತೆಯ ಪಾಠವಾಗಿದ್ದು, ಎದುರಿಸುವ ಅಂತಃಶಕ್ತಿ ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಸಂಯೋಜಕ ಡಾ.ಈ.ಬಸವರಾಜ್, ಡಾ.ಎಸ್.ಎಂ.ಶರತ್, ಥಸೀನ್ ಬಶೀತ್, ಡಾ.ವೀರೇಶ್, ಡಾ.ಶ್ವೇತ, ಅನಿರುದ್ದ, ಎಂ.ಕೆ.ಶ್ರೀನಿವಾಸಮೂರ್ತಿ, ಅರುಣ್ ಕುಮಾರ್, ಶಾಜಿಯಾ ಬಾನು, ರಶ್ಮಿ ವಿ, ನವೀನ್.ಎಂ.ಆರ್, ಬಿಂದಿಯ, ಅಶ್ವಿನಿ ಎಸ್.ಪಿ. ಮತ್ತಿತರರು ಹಾಜರಿದ್ದರು. ಇದೇ ವೇಳೆ ಕಾಲೇಜಿನ ಕ್ರಿಯಾಶೀಲ ಚಟುವಟಿಕೆಗಳನ್ನು ಒಳಗೊಂಡ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

ವಿದ್ಯಾರ್ಥಿಗಳಿಂದ ನಾವೀನ್ಯತೆಯ ಮ್ಯಾರಥಾನ್

ದೇಶದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಆಗಮಿಸಿದ್ದ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ನಾವೀನ್ಯ ಆಲೋಚನೆಗಳ ಮೂಲಕ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಗಣಕ ವಿಜ್ಞಾನ, ಸಿವಿಲ್, ಮೆಕ್ಯಾನಿಕಲ್, ರೋಬೊಟಿಕ್ಸ್, ಕೃತಕ ಬುದ್ದಿಮತ್ತೆಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳಾದ ಪೇಪರ್ ಪ್ರೆಸೆಂಟೇಶನ್, ಅಲ್ಗೋ ಒಲಿಂಪಿಕ್ಸ್, ಎಐ ಪ್ರಾಂಪ್ಟ್ ಎಂಜಿನಿಯರಿಂಗ್, ಬಗ್ ಬೌಂಟಿ, ಕೋಡಿಂಗ್ ರಿಲೇ, ಆರ್‌ಸಿ ಪ್ಲೇನ್ ರೇಸ್, ರೋಬೋ ಸಾಕರ್, ಹಾರ್ಡ್‌ವೇರ್ ಹ್ಯಾಕಥಾನ್, ಲೈನ್ ಫಾಲೋವರ್, ಡೈವೆಸ್ಟ್ ಇನ್‌ವೆಸ್ಟ್, ಮಾದರಿ ಮ್ಯಾನಿಯಾ, ಮೆಕ್ ಕ್ವಿಜ್, ವೆಲ್ಡ್ ವಿಜಾರ್ಡ್ಸ್, ಕೋಡ್ ಟು ಪ್ಲಾಟ್ , ಕ್ಯಾಡ್ ಕ್ಲ್ಯಾಶ್, ಸರ್ವೇಯರ್ಸ್ ರೇಸ್, ಬ್ರಿಡ್ಜ್ ಮ್ಯಾನಿಯಾ, ಸಿವಿಲ್ ಟಾಪ್ ಗನ್ ಮತ್ತು ಆಧುನಿಕ ಕಟ್ಟಡ ಮಾದರಿ ಪ್ರದರ್ಶನಗಳು ನಡೆದವು.