ಕೊಡವ ಧಾರ್ಮಿಕ ಭಾವನೆಗೆ ಗೌರವ ನೀಡುವ ಕಾರ್ಯವಾಗಲಿ: ಯು. ನಾಚಪ್ಪ

| Published : Nov 13 2023, 01:16 AM IST / Updated: Nov 13 2023, 01:17 AM IST

ಕೊಡವ ಧಾರ್ಮಿಕ ಭಾವನೆಗೆ ಗೌರವ ನೀಡುವ ಕಾರ್ಯವಾಗಲಿ: ಯು. ನಾಚಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ ನಾಡು ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ನಾಪೋಕ್ಲು ವತಿಯಿಂದ ಇಲ್ಲಿನ ಚೆರಿಯ ಪರಂಬುವಿನ ಕೆಎಸ್ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಮೂರನೇ ವರ್ಷದ ರಾಜ್ಯಮಟ್ಟದ ಮುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕೋವಿಗಳಿಗೆ ಪೂಜೆ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡವ ಜನಾಂಗ ಅನಾಧಿಕಾಲದಿಂದ ವೈವಿಧ್ಯಮಯ ಸಂಸ್ಕೃತಿಯನ್ನು ರೂಢಿಸಿಕೊಂಡು ಬಂದಿದ್ದು, ಕೊಡವರ ಧಾರ್ಮಿಕ ಭಾವನೆಗಳಿಗೆ ಗೌರವ ಕೊಡಬೇಕಾದದ್ದು ಅತ್ಯಗತ್ಯ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಹೇಳಿದರು.

ನಾಲ್ ನಾಡು ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ನಾಪೋಕ್ಲು ವತಿಯಿಂದ ಇಲ್ಲಿನ ಚೆರಿಯ ಪರಂಬುವಿನ ಕೆಎಸ್ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಮೂರನೇ ವರ್ಷದ ರಾಜ್ಯಮಟ್ಟದ ಮುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕೋವಿಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು.ಈ ದೇಶ ನಾನಾ ಜನಾಂಗ, ಧರ್ಮ, ಸಂಸ್ಕೃತಿಯ ಬೀಡು. ಇಲ್ಲಿ ಎಲ್ಲರಿಗೂ ಬದುಕಲು ಅವಕಾಶ ಕಲ್ಪಿಸಿಕೊಟ್ಟಿದೆ. ಕೊಡವರ ಬಗ್ಗೆ ಕೀಳು ಭಾವನೆಯನ್ನು ಬೆಳೆಸಿಕೊಳ್ಳಬಾರದು. ಜನಾಂಗದ ಧಾರ್ಮಿಕ ನಂಬಿಕೆಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದರಷ್ಟೇ ಸರ್ಕಾರದ ಗಮನಸೆಳೆಯಲು ಸಾಧ್ಯ ಎಂದ ಅವರು, ಕೊಡವರ ಸಾಂವಿಧಾನಿಕ ಹಕ್ಕುಗಳನ್ನು ಗೌರವಿಸಬೇಕು. ಪ್ರಕೃತಿಯಲ್ಲಿ ಹೇಗೆ ವೈವಿಧ್ಯತೆ ಇದೆಯೋ ಅದೇ ರೀತಿ ಜನಾಂಗದಲ್ಲೂ ವೈವಿಧ್ಯತೆ ಇದೆ. ಇಲ್ಲಿನ ಭೂಮಿ, ನೆಲ, ಜಲ, ಕೋವಿಗಳನ್ನು ಪೂಜಿಸುವುದರ ಮೂಲಕ ಕೊಡವರು ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತಿದ್ದು, ಒಂದು ಕಿರಿಯ ಜನಾಂಗದ ಸಂಸ್ಕೃತಿಗೆ ರಕ್ಷಣೆ ಕೊಡುವಂತಹ ಕೆಲಸ ಆಗಬೇಕಿದೆ. ಇಲ್ಲಿನ ವೈವಿಧ್ಯಮಯ, ಆಚಾರ, ವಿಚಾರ, ಸಂಸ್ಕೃತಿ ಕೊಡವರಿಗೆ ಪ್ರಕೃತಿದತ್ತವಾದ ಕೊಡುಗೆಯಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉದ್ಯಮಿ, ದಾನಿ ಚಿಳ್ಳವಂಡ ದರ್ಶನ್ ಚಿನ್ನಪ್ಪ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿ, ತೆಂಗಿನಕಾಯಿ ಗುಂಡು ಹೊಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾಫಿ ಬೆಳೆಗಾರ, ದಾನಿ ನಂಬುಡಮಂಡ ಶಂಭು ಅಪ್ಪಯ್ಯ ಮಾತನಾಡಿ, ತಾನು ಕಾಡಾನೆಯಿಂದ ಜೀವವನ್ನು ರಕ್ಷಿಸಿಕೊಂಡ ತನ್ನ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.

ಕ್ಲಬ್ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ನೆನೆಸಿಕೊಂಡರು.

ಈ ಸಂದರ್ಭ ಕುಂಜಿಲದ ಕಾಫಿ ಬೆಳೆಗಾರ, ದಾನಿ, ಬಾಚಮಂಡ ವಿಠಲ ಕಾವೇರಪ್ಪ, ಬಲ್ಲಮಾವಟಿಯ ಕಾಫಿ ಬೆಳೆಗಾರ, ದಾನಿ ಅಪ್ಪಚೆಟ್ಟೋಳಂಡ ಶ್ಯಾಮ್ ಕಾಳಯ್ಯ, ಜಿಲ್ಲಾ ಆಫ್ಕಾಂ ಅಧ್ಯಕ್ಷ, ಜಿಲ್ಲಾ ಹಿರಿಯ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಬಿದ್ದಾಟಂಡ ರಮೇಶ್ ಚಂಗಪ್ಪ, ಅಸೋಸಿಯೇಷನ್ ಉಪಾಧ್ಯಕ್ಷ ಅರೆಯಡ ರತ್ನ ಪೆಮ್ಮಯ್ಯ, ಕಾರ್ಯದರ್ಶಿ ಚೇಕ್ ಪುವಂಡ ಅಪ್ಪಚ್ಚು, ಸಹ ಕಾರ್ಯದರ್ಶಿ ಕೇಟೋಳಿರ ಹರೀಶ್ ಪೂವಯ್ಯ, ಖಜಾಂಚಿ ಕರವಂಡ ಬೆಲ್ಲು ಬೆಳ್ಳಿಯಪ್ಪ ಹಾಗೂ ನಿರ್ದೇಶಕರು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.ಕೇಟೋಳಿರ ತಂಗಮ್ಮ ಮತ್ತು ದೇಚಮ್ಮ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ನಿರ್ದೇಶಕ ಬೊಳ್ಳಚೆಟ್ಟೀರ ಸುರೇಶ್ ಸ್ವಾಗತಿಸಿದರು. ಶಿವಚಳಿಯಂಡ ನಿತ್ಯ ಕಾರ್ಯಪ್ಪ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಚೇನಂಡ ಸುರೇಶ್ ನಾಣಯ್ಯ ವಂದಿಸಿದರು.ಬಳಿಕ ಸ್ಪರ್ಧಾ ಕಾರ್ಯಕ್ರಮಗಳು ಆರಂಭಗೊಂಡವು.