ಜನ ಸುರಕ್ಷಾ ಆಂದೋಲನ ಸದುಪಯೋಗವಾಗಲಿ: ಬ್ಯಾಂಕ್‌ ಪ್ರಬಂಧಕ ಬಿ.ಚಂದ್ರಶೇಖರ್

| Published : Aug 08 2024, 01:45 AM IST

ಜನ ಸುರಕ್ಷಾ ಆಂದೋಲನ ಸದುಪಯೋಗವಾಗಲಿ: ಬ್ಯಾಂಕ್‌ ಪ್ರಬಂಧಕ ಬಿ.ಚಂದ್ರಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಶಿಕಾರಿಪುರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆರ್ಥಿಕ ಸಾಕ್ಷರತೆಯ ಅರಿವು ಮತ್ತು ಜನ ಸುರಕ್ಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಕುಟುಂಬದಲ್ಲಿನ ಸರ್ವ ಸದಸ್ಯರ ಸುರಕ್ಷತೆಯ ಹಿತದೃಷ್ಟಿಯಿಂದ ಜನ ಸುರಕ್ಷಾ ಆಂದೋಲನವನ್ನು ಜಾರಿಗೊಳಿಸಲಾಗಿದ್ದು, ಸರ್ವರೂ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಪ್ರಬಂಧಕ ಬಿ.ಚಂದ್ರಶೇಖರ್ ತಿಳಿಸಿದರು.

ಬುಧವಾರ ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಡಿಸಿಸಿ ಬ್ಯಾಂಕ್, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಂಯುಕ್ತಾ ಶ್ರಯದಲ್ಲಿ ಆರ್ಥಿಕ ಸಾಕ್ಷರತೆಯ ಅರಿವು ಮತ್ತು ಜನ ಸುರಕ್ಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಕೂಲಿ ಕಾರ್ಮಿಕರು, ಮಹಿಳೆಯರ ಸಹಿತ ಪ್ರತಿಯೊಬ್ಬರೂ ಅತೀ ಸಣ್ಣ ಮೊತ್ತದ ರು.20 ಹಾಗೂ ರು.436 ಪ್ರತಿ ವರ್ಷಕ್ಕೆ ಪಾವತಿಸಿದಲ್ಲಿ ರು.4 ಲಕ್ಷದವರೆಗೆ ಆರ್ಥಿಕ ಭದ್ರತೆ ಕುಟುಂಬಕ್ಕೆ ದೊರೆಯಲಿದೆ. ಅಟಲ್ ಪೆನ್ಷನ್ ಯೋಜನೆ ಮಾಡಿಸಿದರೆ 60 ವರ್ಷದ ನಂತರ ಸ್ವಾವಲಂಬಿಯಾಗಿ ಜೀವನ ಸಾಗಿಸಲು ಅವಕಾಶವಿದೆ. ಸರ್ಕಾರದ ಎಲ್ಲ ಯೋಜನೆಗಳು ಜೀವನ ನಿರ್ವಹಣೆಗೆ ಸೂಕ್ತವಾದ ಯೋಜನೆಗಳಾಗಿದ್ದು, ಪ್ರತಿಯೊಬ್ಬರೂ ಈ ಯೋಜನೆಯ ಲಾಭ ಪಡೆಯಲು ಕರೆ ನೀಡಿದರು.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಗಣಪತಿ ಮಾತನಾಡಿ, ಸ್ವ-ಸಹಾಯ ಗುಂಪುಗಳು ಶಿಸ್ತುಬದ್ಧವಾಗಿ ನಿಯಮಿತವಾಗಿ ಸಭೆ ನಡೆಸಿ ಪುಸ್ತಕಗಳ ನಿರ್ವಹಣೆ ಸಮರ್ಪಕವಾಗಿದ್ದಲ್ಲಿ ಅಂತಹ ಗುಂಪಿಗೆ ಸಾಲ ಸೌಲಭ್ಯ ಡಿಸಿಸಿ ಬ್ಯಾಂಕ್‌ನಲ್ಲಿ ದೊರೆಯಲಿದೆ ಎಂದರು.

ಅಮೂಲ್ಯ ಆರ್ಥಿಕ ಸಾಕ್ಷರತ ಕೇಂದ್ರದ ಸಮಾಲೋಚಕ ಗುಡದಯ್ಯ ಉಡುಗಣಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ದೈನಂದಿನ ಜೀವನ ನಿರ್ವಹಣೆಗೆ ಹಣದ ಅಗತ್ಯ ಹೆಚ್ಚಾಗಿದೆ. 2015 ರಲ್ಲಿ ಜನಸುರಕ್ಷ ಯೋಜನೆ ಜಾರಿಗೊಳಿಸಿದ್ದು ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕ್ ಜತೆ ಸೇರಿ ಯೋಜನೆಯನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕಾರ್ಯದಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ನಿರತವಾಗಿದೆ ಎಂದರು.

ವೇದಿಕೆಯಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಪ್ರಭಂದಕ ಶಿವಮೂರ್ತಿ,ಸ್ಥಳೀಯ ಶಾಖೆ ಪ್ರಭಂದಕ ಜಿ ರವೀಂದ್ರ , ಹೊಳಲೂರು ಆರ್ ಸಿ ಟಿ ನಿರ್ದೇಶಕ ಕಾಂತೇಶ್,ಸಮಾಲೋಚಕ ಶಂಕ್ರಪ್ಪ,ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಶಿವಮೊಗ್ಗದ ನಟರಾಜ್, ಕ್ಷೇತ್ರಾಧಿಕಾರಿ ಮೃತ್ಯುಂಜಯ ಮತ್ತಿತರರು ಉಪಸ್ಥಿತರಿದ್ದರು.