ಕರ್ನಾಟಕ ವಿದ್ಯಾವರ್ಧಕ ಸಂಘ ಇಡೀ ಕರ್ನಾಟಕ ಪ್ರತಿನಿಧಿಸಲಿ

| Published : Jun 01 2025, 11:53 PM IST

ಸಾರಾಂಶ

ಸಂಘವು ಧಾರವಾಡಕ್ಕೆ ಸೀಮಿತಗೊಳಿಸಿದೆ. ರಾಜ್ಯದ ಉದ್ದಗಲಕ್ಕೂ ವಿಸ್ತರಿಸುವ ಸಂಘದ ಸದಸ್ಯರ ಸಲಹೆಗೂ ಪದಾಧಿಕಾರಿಗಳು ಸಹಮತ ವ್ಯಕ್ತಪಡಿಸಿದರು. ಅಲ್ಲದೇ, ಸಂಘದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಮತ್ತು ಕನ್ನಡ ಪರ ಚಟುವಟಿಕೆಯನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಸಂಘಟಿಸಬೇಕು ಎಂಬ ಸಲಹೆಗಳು ಬಂದವು.

ಧಾರವಾಡ: ಸಂಘದ ತ್ರೈವಾರ್ಷಿಕ ಚುನಾವಣೆಯ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಟೀಲ ಪುಟ್ಟಪ್ಪ ಭವನದಲ್ಲಿ ಭಾನುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಹಿಂದಿನ ಅವಧಿಯಲ್ಲಿ ನಾಡು-ನುಡಿ, ನೆಲ-ಜಲ, ಕನ್ನಡ ಪರ ಕೆಲಸಗಳಿಂದ ಪುನರಾಯ್ಕೆ ಮಾಡಿದ ಮತದಾರರಿಗೆ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಬಣದ ಸರ್ವರು ಕೃತಜ್ಞತೆ ಸಲ್ಲಿಸಿದರು.

ಸಂಘವು ಧಾರವಾಡಕ್ಕೆ ಸೀಮಿತಗೊಳಿಸಿದೆ. ರಾಜ್ಯದ ಉದ್ದಗಲಕ್ಕೂ ವಿಸ್ತರಿಸುವ ಸಂಘದ ಸದಸ್ಯರ ಸಲಹೆಗೂ ಪದಾಧಿಕಾರಿಗಳು ಸಹಮತ ವ್ಯಕ್ತಪಡಿಸಿದರು. ಅಲ್ಲದೇ, ಸಂಘದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಮತ್ತು ಕನ್ನಡ ಪರ ಚಟುವಟಿಕೆಯನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಸಂಘಟಿಸಬೇಕು ಎಂಬ ಸಲಹೆಗಳು ಬಂದವು.

ಸದಸ್ಯ ಎಂ.ಎಸ್. ಕೋರಿಶೆಟ್ಟರ್ ಮಾತನಾಡಿ, ಸಾಕಷ್ಟು ಟೀಕೆ- ಟಿಪ್ಪಣಿಗಳ ನಡುವೆಯೂ ಚಂದ್ರಕಾಂತ ಬೆಲ್ಲದ ಬಣಕ್ಕೆ ಮತ ನೀಡಿರುವುದು ಸಂತಸ ತಂದಿದೆ. ಇಂದು ಕನ್ನಡ ಭಾಷೆಗೆ ಕುತ್ತು ಬಂದಿದೆ. ಕನ್ನಡ ರಕ್ಷಿಸಬೇಕಾದ ಸರ್ಕಾರವೇ ಗ್ರಾಮೀಣ ಭಾಗದಲ್ಲಿ ಇಂಗ್ಲಿಷ್ ಶಾಲೆಗಳ ಆರಂಭಕ್ಕೆ ಅನುಮತಿ ನೀಡುವುದಕ್ಕೆ ಬೇಸರಿಸಿದರು. ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿದ ಅವರು, ಹಾವೇರಿಯಲ್ಲೂ ಕರ್ನಾಟಕ ವಿದ್ಯಾವರ್ಧಕ ಸಂಘದ ರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆಗೆ ಕೋರಿದರು.

ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಜಗತ್ತಿನ ಭಾಷೆಗಳು ಅಳಿದು ಹೋಗಬಹುದು. ಆದರೆ, ಕನ್ನಡ ಭಾಷೆ ಎಂದಿಗೂ ಅಳಿಯಲು ಸಾಧ್ಯವೇ ಇಲ್ಲ ಎಂದರು.

ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಅತ್ಯಂತ ಶಿಸ್ತಿನಿಂದ ಚುನಾವಣೆ ನಡೆಸಿಕೊಟ್ಟ ಚುನಾವಣಾಧಿಕಾರಿ ನೇಗಿಹಾಳ ಹಾಗೂ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಚುನಾವಣೆಯಲ್ಲಿ ಟೀಕೆ-ಟಿಪ್ಪಣಿ ಸಹಜ. ಅದೆಲ್ಲವೂ ಮರೆತು ಕನ್ನಡ ಕಟ್ಟುವ, ಸಾಹಿತ್ಯ, ಕಲೆ ಮತ್ತು ಸಂಗೀತ ಬೆಳೆಸುವ ಕೈಂಕರ್ಯಕ್ಕೆ ಕೈಜೋಡಿಸುವಂತೆ ಸದಸ್ಯರಿಗೆ ಕರೆ ನೀಡಿದರು. ಸಂಘದ ಸಂಪನ್ಮೂಲ ಮತ್ತು ಇತಿಮಿತಿ ಅರಿತು ಎಚ್ಚರಿಕೆಯಿಂದ ಭವಿಷ್ಯದಲ್ಲಿ ಬಹಳ ಶಿಸ್ತಿನಿಂದ ಸಂಘ ಮುನ್ನಡೆಸಲು ಸಂಕಲ್ಪ ಮಾಡಿದೆ. ಇದಕ್ಕೆ ಸದಸ್ಯರ ಸಹಕಾರ ಕೋರಿದರು.

ಇದೇ ವೇಳೆ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಚುನಾವಣಾಧಿಕಾರಿ ನೇಗಿಹಾಳ ಪ್ರಮಾಣಪತ್ರ ವಿತರಣೆ ಮಾಡಿದರು.

ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕೋಶಾಧ್ಯಕ್ಷ ಸತೀಶ ತುರಮತಿ, ಸಹ ಕಾರ್ಯದರ್ಶಿ ಶಂಕರ ಕುಂಬಿ, ಸದಸ್ಯರಾದ ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ, ಡಾ. ಜಿನದತ್ತ ಹಡಗಲಿ, ಶಶಿಧರ ತೋಡ್ಕರ್, ಡಾ. ಧನವಂತ ಹಾಜವಗೋಳ, ಡಾ. ಶೈಲಜಾ ಅಮರಶೆಟ್ಟಿ ಇದ್ದರು.