ಸಂಸ್ಕೃತಿ ಆಚಾರ ವಿಚಾರದ ಕುರಿತು ಸದಾ ಬೊಬ್ಬಿಡುವ ಬಿಜೆಪಿಯ ಮಹಿಳಾ ನಾಯಕರು ರಾಜ್ಯದ ಮುಖ್ಯಮಂತ್ರಿಯೊಬ್ಬರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯುತ್ತಿರುವಾಗ ಕಣ್ಣಿದ್ದು ಕುರುಡರಂತೆ ವರ್ತನೆ ಮಾಡಿರುವುದು ಇವರ ನಿಜವಾದ ಸಂಸ್ಕೃತಿ ಯಾವುದು ಎನ್ನುವುದು ಎದ್ದು ಕಾಣಿಸುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್ ಟೀಕಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಪ್ರತಿಭಟನೆಯ ನೆಪದಲ್ಲಿ ಶಾಸಕರ ಸಮ್ಮುಖದಲ್ಲೇ ನಾಡಿನ ಮುಖ್ಯಮಂತ್ರಿಯವರ ಪ್ರತಿಕೃತಿ ದಹಿಸಿ ಅದಕ್ಕೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ ಬಿಜೆಪಿಗರ ಗೂಂಡಾ ವರ್ತನೆ ಖಂಡನೀಯ. ಜನರಿಂದ ಆಯ್ಕೆಯಾದ ಶಾಸಕ ಯಶ್ಪಾಲ್ ಸುವರ್ಣ ಅವರು ಕೂಡಲೇ ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್ ಆಗ್ರಹಿಸಿದ್ದಾರೆ.ಈಗಾಗಲೇ ಬಿಜೆಪಿಗರ ಪುಂಡಾಟಕ್ಕೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಶಾಸಕರು, ನಗರಸಭಾ ಅಧ್ಯಕ್ಷರು, ಸದಸ್ಯರು ಹಾಗೂ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನಾಡಿನ 6 ಕೋಟಿ ಜನರ ಮುಖ್ಯಮಂತ್ರಿಗೆ ಮಾಡಿದ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಕೇವಲ ಕಾಂಗ್ರೆಸ್ ಮುಖ್ಯಮಂತ್ರಿಗಳಲ್ಲ ಬದಲಾಗಿ ಇಡೀ ಕರ್ನಾಟಕದ ಮುಖ್ಯಮಂತ್ರಿಗಳು ಎನ್ನುವ ಕನಿಷ್ಠ ಜ್ಞಾನ ಬಿಜೆಪಿಗರಿಗೆ ಇಲ್ಲದಿರುವುದು ನಾಚೀಕೆಗೇಡಿನ ಸಂಗತಿಯಾಗಿದೆ ಎಂದವರು ಹೇಳಿದ್ದಾರೆ.ಸಂಸ್ಕೃತಿ ಆಚಾರ ವಿಚಾರದ ಕುರಿತು ಸದಾ ಬೊಬ್ಬಿಡುವ ಬಿಜೆಪಿಯ ಮಹಿಳಾ ನಾಯಕರು ರಾಜ್ಯದ ಮುಖ್ಯಮಂತ್ರಿಯೊಬ್ಬರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯುತ್ತಿರುವಾಗ ಕಣ್ಣಿದ್ದು ಕುರುಡರಂತೆ ವರ್ತನೆ ಮಾಡಿರುವುದು ಇವರ ನಿಜವಾದ ಸಂಸ್ಕೃತಿ ಯಾವುದು ಎನ್ನುವುದು ಎದ್ದು ಕಾಣಿಸುತ್ತದೆ. ಕೇವಲ ರಾಜಕೀಯ ದುರುದ್ದೇಶದಿಂದ ಸಭ್ಯತೆ ಮೀರುತ್ತಿರುವ ಬಿಜೆಪಿ ನಾಯಕರ ವಿರುದ್ಧ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕು ಪತ್ರಿಕಾ ಪ್ರಕಟಣೆಯಲ್ಲಿ ಅವರು ಆಗ್ರಹಿಸಿದ್ದಾರೆ.