ಕನ್ನಡಪ್ರಭ ವಾರ್ತೆ ಕುಣಿಗಲ್ ವಿರೋಧ ಪಕ್ಷದವರು ನನ್ನ ಬಗ್ಗೆ ಟೀಕೆ ಮಾತನಾಡುತ್ತಿದ್ದಾರೆ ನಾನು ಅಭಿವೃದ್ಧಿ ಮಾಡುತ್ತೇನೆ ಎಂದು ಕುಣಿಗಲ್ ಶಾಸಕ ಡಾ, ರಂಗನಾಥ್ ತಿಳಿಸಿದ್ದಾರೆ. ತಾಲೂಕಿನ ಗವಿಮಠದ ಖಾಸಗಿ ಸಮುದಾಯ ಭವನದಲ್ಲಿ ಡಿಕೆ ಚಾರಿಟೆಬಲ್ ಟ್ರಸ್ಟ್ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಶುಚಿ ಆಂದೋಲನ ದಡಿಯಲ್ಲಿ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಚುನಾವಣೆ ಬಂದಾಗ ನಾನು ನಿಮ್ಮನ್ನು ಮತ ಹಾಕಿ ಎಂದು ಕೇಳುವುದಿಲ್ಲ ನಾನು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದರೆ ಜನರು ನನ್ನನ್ನು ಗುರುತಿಸುತ್ತಾರೆ ಎಂಬ ನಂಬಿಕೆ ವಿಶ್ವಾಸ ಇದೆ.ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳ ಜೊತೆಗೆ ನನ್ನ ಮತದಾರರಿಗೆ ನಾನು ಕೊಡುವ ಉಡುಗೊರೆಗಳನ್ನು ಅವರು ಆಮಿಷ ಎಂದು ಹೇಳುತ್ತಾರೆ. ಈ ಬಗ್ಗೆ ನನಗೆ ಚಿಂತೆ ಇಲ್ಲ ಕರ್ನಾಟಕದಲ್ಲಿ ಇಂತಹ ವಿಶೇಷವಾದ ಕಾರ್ಯವನ್ನು ಮಾಡುತ್ತಿದ್ದೇನೆ ಎಂದು ನನಗೆ ಹೆಮ್ಮೆ ಸಂತೋಷ ಇದೆ ಎಂದರು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಹಕಾರ ಆಗುವಂಥ ಲ್ಯಾಪ್ಟಾಪ್ ಮಹಿಳೆಯರಿಗೆ ಆಟೋ ಸೇರಿದಂತೆ ಹಲವಾರು ಉಪಯುಕ್ತ ಉಡುಗೊರೆಗಳನ್ನು ನೀಡಲು ನಾನು ಸದಾ ಸಿದ್ಧನಿದ್ದೇನೆ ಎಂದರು. ರಾಜಕೀಯ ನನಗೆ ಸೀಮಿತವಲ್ಲ ಮುಂದಿನ ದಿನಗಳಲ್ಲಿ ಮಹಿಳಾ ಮೀಸಲಾತಿ ಕುಣಿಗಲ್‌ಗೆ ಆದಾಗ ನನ್ನ ಪತ್ನಿ ಸುಮಾ ರಂಗನಾಥ್ ಇಲ್ಲಿಗೆ ಅಭ್ಯರ್ಥಿ ಆದರು ಕೂಡ ನಾವು ಆಶ್ಚರ್ಯ ಪಡಬೇಕಾಗಿಲ್ಲ ಎಂದು ಹೇಳುವ ಮುಖಾಂತರ ಮಹಿಳಾ ಮೀಸಲಾತಿಗೆ ನನ್ನ ಸಹಕಾರ ಇದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ರಂಗನಾಥ್ ಅವರ ಪತ್ನಿ ಸುಮಾ ತನ್ನ ಮುಟ್ಟಿನ ಪ್ರಥಮ ಕಥೆಯನ್ನು ಸಾರ್ವಜನಿಕರಿಗೆ ವಿವರಣೆ ಮಾಡಿ ಹಲವಾರು ಸೋಂಕುಗಳು ಇತ್ತೀಚಿಗೆ ಬರುವ ರಾಸಾಯನಿಕ ಪ್ಯಾಡ್ ಗಳಿಂದ ರೋಗಗಳು ಹೆಚ್ಚಾಗುತ್ತವೆ ಮತ್ತು ಹಣದ ವ್ಯಯ ಹೆಚ್ಚಾಗುತ್ತದೆ ಅದನ್ನು ನಿಯಂತ್ರಿಸುವುದರ ಜೊತೆಗೆ ಉತ್ತಮ ಆರೋಗ್ಯವನ್ನು ಕಟ್ಟಿಕೊಳ್ಳುವ ಸಲುವಾಗಿ ಇಂತಹ ಕಪ್ ಬಳಸುವ ವಿಶೇಷವಾದ ಕಾರ್ಯಕ್ರಮ ಮಾಡುತ್ತಿರುವ ಕುಣಿಗಲ್ ಶಾಸಕ ಡಾ. ರಂಗನಾಥ್ ಅವರಿಗೆ ಮಹಿಳೆಯರ ಪರವಾಗಿ ಅಭಿನಂದಿಸಬೇಕು ಎಂದರು.ಚಲನಚಿತ್ರ ತಾರೆ ಮೇಘ ಶೆಟ್ಟಿ ಮಾತನಾಡಿ ಆಧುನಿಕತೆ ಬೆಳೆದಂತೆ ತಂತ್ರಜ್ಞಾನದ ಅಭಿವೃದ್ಧಿ ಪಟ್ಟ ಸಂದರ್ಭದಲ್ಲಿ ಇಂತಹ ಯೋಜನೆಗಳು ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕಿದೆ. ಈ ಮುಟ್ಟಿನ ಕಪ್ ಬಳಕೆಯಿಂದ ಎಲ್ಲರಿಗೂ ಕೂಡ ಉತ್ತಮ ಅನುಭವ ಆಗುತ್ತದೆ ವ್ಯಾಯಾಮ ಈಜು ಕೆಲಸ ಹೀಗೆ ದೈನಂದಿನ ಎಲ್ಲಾ ಚಟುವಟಿಕೆಗಳಲ್ಲಿ ಹೆಣ್ಣು ಮಕ್ಕಳು ಭಾಗವಹಿಸಬಹುದು ಯಾವುದೇ ರೀತಿ ಸಮಸ್ಯೆ ಸೋಂಕು ಬರುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಡಿಎಚ್ಒ ಡಾ.ಚಂದ್ರಶೇಖರ್, ತಾಲೂಕು ವೈದ್ಯಾಧಿಕಾರಿ ಮರಿಯಪ್ಪ, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಅಭಿಜಿತ್, ಡಾ.ಪಲ್ಲವಿ, ಡಾ.ಬಿಂದುಮಾದವನ್ ಡಾ.ಪಂಕಜ ಸೇರಿದಂತೆ ಇತರರು ಇದ್ದರು.