ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಶೋಕ್ ವಿಪಕ್ಷ ನಾಯಕ ಆಗುತ್ತಿದ್ದಂತೆ ಬಿಜೆಪಿಯಲ್ಲಿನ ಆಂತರಿಕ ಬೇಗುದಿ ಸ್ಫೋಟಗೊಂಡಿದೆ. ಶಾಸಕಾಂಗ ಪಕ್ಷದ ಸಭೆಯಿಂದ ಯತ್ನಾಳ್ ಹಾಗೂ ಜಾರಕಿಹೊಳಿ ಎದ್ದುಹೋಗಿದ್ದರೆ ಸೋಮಣ್ಣ, ಬೆಲ್ಲದ್ ಅಸಮಾಧಾನ ಹೊರಹಾಕುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಟೀಕಿಸಿದರು.ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಯಾಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯತ್ನಗಳಾಗುತ್ತಿವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಅವರ ಹೇಳಿಕೆ ಕಾಂಗ್ರೆಸ್ಗೆ ಅನ್ವಯಿಸಲ್ಲ. ಅದು ಬಿಜೆಪಿಗೆ ಅನ್ವಯವಾಗುತ್ತದೆ ಎಂದು ಕುಟುಕಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಹಾಗೂ ವಿಪಕ್ಷ ನಾಯಕನ ಆಯ್ಕೆಯ ಬಗ್ಗೆ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ನಾಯಕನ ಬದಲಾವಣೆಗಾಗಿ ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ. ಬಿಜೆಪಿ ಗುಂಪುಗಾರಿಕೆ ಹಿನ್ನೆಲೆ ದೆಹಲಿಗೆ ಅಸಮಾಧಾನ ಹೋಗುತ್ತಿದೆ. ಅಗ್ನಿಕುಂಡದಲ್ಲಿ ಬೇಯುತ್ತಿರುವ ಬಿಜೆಪಿ ನಾಯಕರು ಕಾಂಗ್ರೆಸ್ನಲ್ಲಿ ಹಾಗಾಗುತ್ತಿದೆ, ಹೀಗಾಗುತ್ತಿದೆ ಎಂದು ಸುಳ್ಳು ಕಥೆಗಳನ್ನು ಹೆಣಿಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರನ್ನು ಕೆಳಗಿಸಲು ಬಿಜೆಪಿ ನಾಯಕರು ಏನೆಲ್ಲ ಮಾಡಿದ್ದರೋ ಅದನ್ನು ಕಲ್ಪನೆ ಮಾಡಿಕೊಂಡಿಕೊಂಡು ಈಗ ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಿದ್ದಾರೆ. ಸರ್ಕಾರ ಎಂದ ಮೇಲೆ ಸಣ್ಣಪುಟ್ಟ ಸಂಗತಿಗಳು ಇರುತ್ತವೆ. ಯಡಿಯೂರಪ್ಪ ಅವರನ್ನು ನಾವು ಕೆಳಗಿಳಿಸಿದಂತೆ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರನ್ನು ಇಳಿಸುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಛೇಡಿಸಿದರು.
ಬೆಳಗಾವಿಯಲ್ಲಿ ಅಶೋಕ್ ಹೇಳಿದಂತೆ ಸ್ಕೆಚ್ ರೆಡಿಯಾಗುತ್ತಿದೆ. ಆದರೆ, ಅದು ಬಿಜೆಪಿಯಲ್ಲಿನ ನಾಯಕರನ್ನು ಬದಲಾವಣೆ ಮಾಡಲು. ರಮೇಶ್ ಜಾರಕಿಹೊಳಿ ಎಲ್ಲರೂ ಬೆಳಗಾವಿಯಲ್ಲಿ ಸೇರುತ್ತಾರೆ. ಕಾರಣ ಕಾಂಗ್ರೆಸ್ ಅನ್ನು ಕೆಡುವುದಕಲ್ಲ ಬಿಜೆಪಿಯನ್ನು ಹೇಗೆ ಕೆಡವಲು ಎಂದು ಟಾಂಗ್ ನೀಡಿದರು.ಅಶೋಕ್ಗೆ ಬೆಂಗಳೂರು ಹೊರತುಪಡಿಸಿ, ಬೆಳಗಾವಿ ಹಾಗೂ ಇತರ ಜಿಲ್ಲೆಗಳ ಪರಿಚಯ ಇಲ್ಲ. ಆರ್.ಅಶೋಕ್ ಮೊದಲು ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳುವುದರ ಬಗ್ಗೆ ಗಮನಹರಿಸಲಿ, ಬಿಜೆಪಿ ಅಧಿಕಾರ ಅವಧಿಯಲ್ಲಿ ಪೂರ್ತಿ ಮಂತ್ರಿಮಂಡಲವನ್ನೇ ಹೆಚ್ಚಿಸಲು ಇವರಿಂದ ಸಾಧ್ಯವಾಗಲಿಲ್ಲ. ಬಿಜೆಪಿ ನಾಯಕರು ಪರಸ್ಪರ ಘೋಷಣೆ ಮಾಡುತ್ತ ಸಿಎಂ ಕುರ್ಚಿ ₹2000 ಕೋಟಿಗೆ ಮಾರಾಟಕ್ಕಿದೆ ಎನ್ನುತ್ತಿದ್ದರು. ಅಂತಹ ಪ್ರಸಿದ್ಧ ವಾತಾವರಣದಲ್ಲಿ ಬಿಜೆಪಿ ಸರ್ಕಾರವಿತ್ತು. ಇಂಥಹ ಸ್ವಂತ ಅನುಭವವನ್ನು ಅಶೋಕ್ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಯಾವುದೇ ಘಟನೆಗಳು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿಲ್ಲ ಎಂದು ತಿರುಗೇಟು ನೀಡಿದರು.
- - - -26ಎಸ್ಎಂಜಿಕೆಪಿ02: ಆಯನೂರು ಮಂಜುನಾಥ್