ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಗ್ರಾಮೀಣ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲೀಕರಣಗೊಂಡು ಮುಂದೆ ಬರುವಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಕರೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೀದರ ಸಂಯುಕ್ತಾಶ್ರಯದಲ್ಲಿ ಬುಧವಾರ ನೀತಿ ಆಯೋಗ ಸಂಪೂರ್ಣತಾ ಅಭಿಯಾನದ ಸಮಾರೋಪ ಕಾರ್ಯಕ್ರಮವು ಮಹತ್ವಾಕಾಂಕ್ಷಿ ತಾಲ್ಲೂಕುಗಳು ಔರಾದ(ಬಿ), ಕಮಲನಗರ, ಹುಮನಾಬಾದ, ಚಿಟಗುಪ್ಪಾ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆ ಅಡಿಯಲ್ಲಿ ಸಮುದಾಯ ಬಂಡವಾಳ ನಿಧಿ ಹಾಗೂ ಸುತ್ತು ನಿಧಿ ಚೆಕ್ ವಿತರಣೆ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕೃಷಿ ಚಟುವಟಿಕೆ, ಗೃಹ ಉದ್ಯೋಗ, ಗುಡಿ ಕೈಗಾರಿಕೆ ಕರಕುಶಲ ವಸ್ತುಗಳ ಉದ್ಯೋಗದಿಂದ ಗ್ರಾಮೀಣ ಮಹಿಳೆಯರು ಉತ್ತಮ ಮಾರು ಕಟ್ಟೆ ದೊರಕಿಸಿಕೊಂಡು ಸ್ವಾವಲಂಬಿಗಳಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಆರ್ಥಿಕ ಆದಾಯ ಹೆಚ್ಚಿಸಿಕೊಂಡು ಬಲಿಷ್ಠರಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.ನಮ್ಮದು ನುಡಿದಂತೆ ನಡೆದ ಸರ್ಕಾರ, 5 ಗ್ಯಾರಂಟಿಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಕೋಟ್ಯಾಂತರ ಮಹಿಳೆಯರಿಗೆ ಸಹಾಯ ಮಾಡಲಾಗಿದೆ. ದಲ್ಲಾಳಿಗಳು ಇಲ್ಲದೇ, ಭ್ರಷ್ಟಾಚಾರ ಇಲ್ಲದೇ ಪಾರದರ್ಶಕವಾಗಿ ನೇರವಾಗಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಅನುದಾನ ತಲುಪುತ್ತಿದೆಯೆಂದರು. ರಾಜ್ಯದ ಮಹಿಳೆಯರಿಗೆ ಸರ್ಕಾರ ಶಕ್ತಿ ನೀಡಿದೆ ಎಂದರು.
ಇನ್ನು, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 2 ಸಾವಿರ ಸ್ವ ಸಹಾಯ ಸಂಘಗಳಿಗೆ ಸ್ವಯಂ ಉದ್ಯೋಗಕ್ಕೆ ಆದಾಯ ತರುವ ಚಟುವಟಿಕೆಗೆ ತರಬೇತಿ, ಬ್ಯಾಂಕ್ ಸಾಲ, ಬಂಡವಾಳ, ಸುತ್ತು ನಿಧಿ ನೀಡಿ ಆರ್ಥಿಕ ಸಮೃದ್ಧಿಯ ಬದಲಾವಣೆ ತರಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ- ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.ಶಾಸಕರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಮಾತನಾಡಿ, ಮಹಿಳೆಯರು ಉತ್ಪನ್ನಗಳಿಗೆ ಬ್ರಾಂಡಿಂಗ್ ಅತೀ ಮಹತ್ವವಾಗಿದೆ. ಮಾರುಕಟ್ಟೆಯಲ್ಲಿ ಬ್ರಾಂಡಿಂಗ್ ದೊರಕಿಸಿಕೊಂಡು ಆರ್ಥಿಕವಾಗಿ ಸದೃಢವಾಗುವಂತೆ ಕರೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ ಬದೋಲೆ ಪ್ರಾಸ್ತಾವಿಕ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅನುದಾನದಡಿ ಒಟ್ಟು 9715 ಸ್ವಸಹಾಯ ಗುಂಪುಗಳೊಂದಿಗೆ 8889 ಮಹಿಳೆಯರನ್ನು ಜೀವನೋಪಾಯ ಅಭಿಯಾನದಡಿ ಸದೃಢಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈವೆರೆಗೆ 2500 ಕ್ಕೂ ಕಿರು ಹಾಗೂ ಉದ್ದಿಮೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸಲಾಗಿದೆ. ಪ್ರಸಕ್ತ 2024-25ನೇ ಸಾಲಿನಲ್ಲಿ 546 ಗುಂಪುಗಳಿಗೆ 8.96 ಕೋಟಿ ಬಿಡುಗಡೆಯಾಗಿದ್ದು ಪ್ರತಿ ಗುಂಪಿಗೆ 1.50 ಲಕ್ಷ ಬಂಡವಾಳ ನಿಧಿ ನೀಡಲಾಗುತ್ತಿದೆ. 216 ಗುಂಪುಗಳಿಗೆ 43 ಲಕ್ಷ ಸುತ್ತು ನಿಧಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ 8 ಸ್ವ-ಸಹಾಯ ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿ ಚೆಕ್ ವಿತರಣೆ, 4 ಸ್ವ-ಸಹಾಯ ಗುಂಪುಗಳಿಗೆ ಸುತ್ತು ನಿಧಿ ಚೆಕ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್, ನಗರಸಭೆ ಅಧ್ಯಕ್ಷ ಎಂ.ಡಿ.ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಕಮಲನಗರ, ಔರಾದ, ಹುಮನಾ ಬಾದ, ಚಿಟ್ಟಗುಪ್ಪಾ ತಾಲೂಕು ಪಂಚಾಯತ್ ಇಓಗಳು ಸೇರಿದಂತೆ ವಿವಿಧ ಸ್ವ-ಸಹಾಯ ಸಂಘದ ಸದಸ್ಯರು, ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.