ಸಾರಾಂಶ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಇಚ್ಛಾಶಕ್ತಿಯಿಂದ ಹೈದರಾಬಾದ್ ಪ್ರಾಂತ್ಯವು ನಿಜಾಮರ ಆಳ್ವಿಕೆಯಿಂದ ವಿಮೋಚನೆಗೊಂಡು ಭಾರತದ ಭಾಗವಾಯಿತು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಬುಧವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಂದು ಹೈದರಾಬಾದ್ ನಿಜಾಮರ ಹಾವಳಿಯಿಂದ ನಮ್ಮ ಏಳು ಜಿಲ್ಲೆಗಳ ಜನರು ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದ್ದರು, ಇದರ ವಿರುದ್ಧ ನಾಗರಿಕರು ದಂಗೆ ಎದ್ದು ಹೋರಾಟ ಮಾಡಿದ ಫಲವಾಗಿ ನಮಗೆ ಸಂಪೂರ್ಣ ಸ್ವಾತಂತ್ರ್ಯ ದೊರಕಿತು ಎಂದರು.ಹಿಂದುಳಿದ ಹೈದರಾಬಾದ್ ಕರ್ನಾಟಕಕ್ಕೆ ಅಂದಿನ ಕೇಂದ್ರ ಸರ್ಕಾರ ೩೭೧ಜೆ ಕಾಯ್ದೆ ಜಾರಿ ಮಾಡಿದ ಪರಿಣಾಮವಾಗಿ ಈಗ ಕಲ್ಯಾಣ ಕರ್ನಾಟಕವಾಗಿ ಬದಲಾಗಿದ್ದು, ಈ ಭಾಗಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ಸೌಲಭ್ಯಗಳು ನೀಡುತ್ತಿದ್ದು, ಬರುವ ಅನುದಾನವನ್ನು ವ್ಯರ್ಥ ಮಾಡದೇ ಎಲ್ಲರೂ ಸೇರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸೋಣ ಎಂದರು.ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಕಲ್ಯಾಣ ಕರ್ನಾಟಕಕ್ಕೆ ೩೭೧ಜೆ ಸೌಲಭ್ಯದಡಿ ಶಿಕ್ಷಣ ಉದ್ಯೋಗ, ಅನುದಾನ ಸೇರಿದಂತೆ ಸಾಕಷ್ಟು ಸೌಲಭ್ಯಗಳಿದ್ದು, ಇವುಗಳ ಉಪಯೋಗ ಪಡೆದುಕೊಳ್ಳುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.ಹಾರಕನಾಳು ಶಾಲೆಯ ಶಿಕ್ಷಕಿ ಜಿ.ಶ್ವೇತಾ ಕಲ್ಯಾಣ ಕರ್ನಾಟಕ ವಿಮೋಚನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು, ಪುರಸಭೆ ಅಧ್ಯಕ್ಷೆ ಪಾತೀಮಾಬೀ ಶೇಕ್ಷಾವಲಿ, ಸ್ಥಾಯಿ ಅಧ್ಯಕ್ಷೆ ಟಿ.ವೆಂಕಟೇಶ, ಸದಸ್ಯರಾದ ಎಂ.ವಿ. ಅಂಜಿನಪ್ಪ, ಅಬ್ದುಲ್ ರೆಹಮಾನ್, ಲಾಟಿ ದಾದಪೀರ, ಗಣೇಶ, ಹೇಮಣ್ಣ, ಸಲೀಂ, ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ, ಇಒ ವೈ.ಎಚ್. ಚಂದ್ರಶೇಖರ, ಬಿಇಒ ಎಚ್.ಲೇಪಾಕ್ಷಪ್ಪ, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯ ನಿರ್ದೇಶಕ ಎಸ್.ಗಂಗಪ್ಪ, ಬಿಸಿಎಂ ಇಲಾಖೆಯ ಭೀಮಪ್ಪ, ಕೃಷಿ ಇಲಾಖೆಯ ಉಮ್ಮೇಶ, ಜಯಸಿಂಹ, ಪಿಎಸ್ಐ ಶಂಭುಲಿಂಗ ಸಿ.ಹಿರೇಮಠ, ಚಿಕ್ಕೇರಿ ಬಸಪ್ಪ ಜಯಲಕ್ಷ್ಮೀ ನೇತ್ರಾವತಿ ಸೇರಿದಂತೆ ಮತ್ತಿತರರು ಇದ್ದರು.