ಮತೀಯವಾದ ಬಿತ್ತುವ ಪರಕೀಯ ಮತಗ್ರಂಥಗಳ ಬಗ್ಗೆ ಚರ್ಚೆಯಾಗಲಿ: ಸಿ.ಟಿ.ರವಿ

| Published : Jun 08 2025, 02:11 AM IST

ಮತೀಯವಾದ ಬಿತ್ತುವ ಪರಕೀಯ ಮತಗ್ರಂಥಗಳ ಬಗ್ಗೆ ಚರ್ಚೆಯಾಗಲಿ: ಸಿ.ಟಿ.ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚೋದನೆ ಮಾಡುವವರ ಮೇಲೆ ಸರ್ಕಾರದ ಸೂಚನೆ ಮೇರೆಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಕೋಮುವಾದ ಬಿತ್ತುವ ಮತಗ್ರಂಥಗಳ ಮೇಲೆ ಯಾವಾಗ ಕ್ರಮ ಕೈಗೊಳ್ಳುತ್ತೀರಿ? ತಾಕತ್ತಿದ್ದರೆ‌ ಮತಗ್ರಂಥಗಳ ವಿರುದ್ದ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ. ಕಮ್ಯೂನಲ್ ಎನ್ನುವುದು ಭಾರತದ ಗ್ರಂಥಗಳಲ್ಲೇ ಇಲ್ಲ. ಆದರೆ ಪರಕೀಯ ಮತಗ್ರಂಥಗಳಲ್ಲಿ ಅದರ ಉಲ್ಲೇಖ ಇದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸಮಾಜದಲ್ಲಿ ಅಶಾಂತಿಗೆ ಗೋಹತ್ಯೆ, ಗೋ ಕಳ್ಳತನ, ಅಕ್ರಮ ಗೋ ಸಾಗಾಟ, ಲವ್‌ ಜಿಹಾದ್‌ ಮಾತ್ರವಲ್ಲ ಮತೀಯವಾದ ಬಿತ್ತುವ ಪರಕೀಯ ಮತಗ್ರಂಥಗಳೂ ಕಾರಣವಾಗಿವೆ. ಈ ಬಗ್ಗೆ ಸಮಾಜದಲ್ಲಿ ವ್ಯಾಪಕ ಚರ್ಚೆ ನಡೆಯಬೇಕು. ಇಂತಹ ಪರಕೀಯ ಮತಗ್ರಂಥಗಳ ವಿರುದ್ಧ ಸರ್ಕಾರ ಯಾವಾಗ ಕ್ರಮ ಕೈಗೊಳ್ಳತ್ತದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚೋದನೆ ಮಾಡುವವರ ಮೇಲೆ ಸರ್ಕಾರದ ಸೂಚನೆ ಮೇರೆಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಕೋಮುವಾದ ಬಿತ್ತುವ ಮತಗ್ರಂಥಗಳ ಮೇಲೆ ಯಾವಾಗ ಕ್ರಮ ಕೈಗೊಳ್ಳುತ್ತೀರಿ? ತಾಕತ್ತಿದ್ದರೆ‌ ಮತಗ್ರಂಥಗಳ ವಿರುದ್ದ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ. ಕಮ್ಯೂನಲ್ ಎನ್ನುವುದು ಭಾರತದ ಗ್ರಂಥಗಳಲ್ಲೇ ಇಲ್ಲ. ಆದರೆ ಪರಕೀಯ ಮತಗ್ರಂಥಗಳಲ್ಲಿ ಅದರ ಉಲ್ಲೇಖ ಇದೆ, ಅವುಗಳ ಮೇಲೆ ಕ್ರಮ ಕೈಗೊಳ್ಳಿ ಎಂದರು. ಮತಗ್ರಂಥಗಳಲ್ಲಿ ಕಾಫಿರರನ್ನು ಕೊಲ್ಲಿ ಎನ್ನುತ್ತಾರೆ. ಅದರ ಮೇಲೆ ಕ್ರಮ ಕೈಗೊಂಡರೆ ಜಗತ್ತಿನಲ್ಲೇ ಶಾಂತಿ‌ ನೆಲೆಸುತ್ತದೆ. ಅದು ಬಿಟ್ಟು ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣ ಮಾಡಬಾರದು. ಮತೀಯ ಭಾವ ಬಿತ್ತುವ ಮತ ಗ್ರಂಥಗಳನ್ನು ನಿಷೇಧಿಸುವ ಧೈರ್ಯ ರಾಜ್ಯ ಸರ್ಕಾರಕ್ಕೆ ಇದೆಯಾ ಎಂದು ಪ್ರಶ್ನಿಸಿದರು.

ಸಂಘರ್ಷದ ಮೂಲ ಪತ್ತೆ ಮಾಡಿ:

ಸೋಮವಾರ ಮಂಗಳೂರಿಗೆ ಬಿಜೆಪಿ ನಿಯೋಗ ಆಗಮಿಸಲಿದೆ. ದ. ಕ. ಜಿಲ್ಲೆಗೆ ಭೇಟಿ ನೀಡಿ ಸುಹಾಸ್ ಶೆಟ್ಟಿ ಹತ್ಯೆ, ರೆಹಮಾನ್ ಹತ್ಯೆ ಹಾಗೂ ಸರಣಿ ಘಟನೆಗಳ ಅಧ್ಯಯನ ನಡೆಸಲಿದೆ. ಜಿಲ್ಲೆಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ವಿಪಕ್ಷ ನಿಯೋಗ ಬರಲಿದೆ. ಜಿಲ್ಲೆಯಲ್ಲಿ ಶಾಂತಿ ನೆಲೆಸಲೇ ಬೇಕು, ಇತ್ತೀಚೆಗೆ ಕಾಂಗ್ರೆಸ್‌ನ ಹರಿಪ್ರಸಾದ್ ಹಾಗೂ ನಾಸಿರ್‌ ನೇತೃತ್ವದ ನಿಯೋಗ ಕೂಡ ಶಾಂತಿ ಪ್ರಸ್ತಾಪನೆ ಮಾಡಿದ್ದಾರೆ. ನಾಸಿರ್ ಹುಸೇನ್ ವರದಿ ಎಷ್ಟು ಪ್ರಾಮಾಣಿಕ ವರದಿಯಾಗಿರುತ್ತದೆ ಎನ್ನುವ ಸಂಶಯ ಇದೆ. ನಾಸಿರ್‌ ರಾಜ್ಯಸಭೆಗೆ ಆಯ್ಕೆಯಾದಾಗ ವಿಧಾನ ಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಎಂದು ಬೆಂಬಲಿಗರು ಘೋಷಣೆ ಕೂಗಿದ್ದರು ಎಂದರು.

ಗೋ ಹತ್ಯೆ ಮಾಡುವವರು ಮತ್ತು ತಡೆಯುವವರನ್ನು ಒಂದೇ ತಕ್ಕಡಿಯಲ್ಲಿ ಇರಿಸಿ ನೋಡಲಾಗುತ್ತದೆ. ಪೊಲೀಸ್ ಇಲಾಖೆ ಇಂತಹ ಕೆಲಸ ಮಾಡಬಾರದು, ಗೋ ಹತ್ಯೆ ಮಟ್ಟ ಹಾಕಿ, ಲವ್ ಜಿಹಾದ್ ಸಂಘಟಿತ ಕೃತ್ಯವನ್ನು ಸಂಪೂರ್ಣ ತಡೆಯಬೇಕು. ಅವರಿಗೆ ಸಂಘಟಿತ ಬೆಂಬಲ ಸಿಗುತ್ತಿದೆ. ಮತಾಂತರ ವ್ಯವಸ್ಥೆ ಮಟ್ಟ ಹಾಕಬೇಕು. ಹೀಗಾದಲ್ಲಿ ಜಗಳ ಮತ್ತು ಸಂಘರ್ಷ ನಿಂತು ಹೋಗಲಿದೆ ಎಂದರು.

ಇವರಿಗೆ ಹಣದ ಮೂಲ ಯಾವುದು?:

ಮತೀಯ ಕಾರಣಕ್ಕಾಗಿ ಕೆಲವರು ಇವರಿಗೆ ಹಣ ಪೂರೈಸುತ್ತಾರೆ. ಗಾಂಜಾ,‌ ಮರಳು ದಂಧೆ, ಬೆಟ್ಡಿಂಗ್ ದಂಧೆ, ಅನೈತಿಕ ಕಾರ್ಯಕ್ಕೆ ಹಣಕಾಸು ಸಹಾಯ ಮಾಡುತ್ತದೆ. ಎಸ್ಪಿ ಮತ್ತು ಕಮಿಷನರ್ ನಿಮ್ಮ ಇಲಾಖೆಯ ಕೆಲವರು ಇಂತಹವರ ಜೊತೆ ಕೈಜೋಡಿಸುತ್ತಿರುವುದನ್ನು ತಪ್ಪಿಸಿ, ಸಜ್ಜನರು ಮತ್ತು ದುರ್ಜನರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುತ್ತಿದ್ದೀರಿ. ಹೀಗೆ ಮಾಡಿದರೆ ಇದು ವರ್ತಮಾನ ಮತ್ತು ಭವಿಷ್ಯಕ್ಕೆ ಬಹಳ ಮಾರಕವಾಗುತ್ತದೆ ಎಂದರು.

ಕಾಂಗ್ರೆಸ್ ಸರ್ಕಾರ ದಿನನಿತ್ಯ ಹಗರಣ ಮಾಡುತ್ತಿದೆ. ಒಂದು ಹಗರಣ ಇನ್ನೊಂದು ಹಗರಣವನ್ನು ಬದಿಗೆ ಸರಿಸುತ್ತಿದೆ. ಸಂವೇದನೆ, ನೈತಿಕತೆ ಹೊತ್ತಿಕೊಳ್ಳಬೇಕಾದವರು ಹೊತ್ತಿಕೊಳ್ಳೋದಿಲ್ಲ. ಈಗ ಹಗರಣವನ್ನೇ ಜೀರ್ಣಿಸುವಷ್ಟು ಶಕ್ತಿ ಕಾಂಗ್ರೆಸ್‌ಗೆ ಇದೆ ಎಂದು ಸಿ.ಟಿ. ರವಿ ಲೇವಡಿ ಮಾಡಿದರು.

--------------------ಆರ್‌ಸಿಬಿ ಸನ್ಮಾನ ಆಯೋಜಿಸಿದ್ದು ಕಮಿಷನರ್‌!

ಆರ್‌ಸಿಬಿ ವಿಜಯೋತ್ಸವದ ವೇಳೆ‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಅಮಾನತಿನ ಬಗ್ಗೆ ಸಿ.ಟಿ.ರವಿ ವ್ಯಂಗ್ಯವಾಡಿದರು. ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿದ್ದು ಬೆಂಗಳೂರು ಕಮೀಷನರ್, ಸರ್ಕಾರ ರಾಜಕೀಯ ಲಾಭ ತೆಗೆದುಕೊಳ್ಳಬೇಕು ಎನ್ನುವುದು ಕಮೀಷನರ್ ಆಸೆಯಾಗಿತ್ತು. ಕ್ರಿಕೆಟ್ ಆಟಗಾರರ ಜೊತೆ ಕಾಂಗ್ರೆಸ್ ಪಕ್ಷದ ಮುಖಂಡರ ಮಕ್ಕಳು, ಮೊಮ್ಮಕ್ಕಳು ಸೆಲ್ಫಿ ತೆಗೆದುಕೊಳ್ಳಲಿ ಎಂದು ಕಮಿಷನರ್‌ ವ್ಯವಸ್ಥೆ ಮಾಡಿದ್ರು. ಹೀಗೆ ಕಮಿಷನರ್‌ರೇ ಎಲ್ಲವನ್ನೂ ಸಂಘಟಿಸಿದಂತೆ ಸರ್ಕಾರ ಅವರ ಮೇಲೆ ಕ್ರಮ ಕೈಗೊಂಡಿದೆ ಎಂದು ಸಿ.ಟಿ. ರವಿ ಆರೋಪಿಸಿದರು.

ಕಾಲ್ತುಳಿತ ಸಾವು ಘಟನೆ ಆದ ಬಳಿಕವೂ ಸಿಎಂ ಹೊಟೇಲಿಗೆ ತೆರಳಿ ದೋಸೆ ತಿಂದರೆ ಅವರಿಗೆ ಮನುಷ್ಯತ್ವ ಇಲ್ಲ. ಮುಖ್ಯಮಂತ್ರಿ ಆ ಕೆಲಸ ಮಾಡಿದರೆ ಭಗವಂತ ಅವರನ್ನು ಕ್ಷಮಿಸುವುದಿಲ್ಲ. ಅವರಿಗೆ ಮಕ್ಕಳನ್ನು ಕಳೆದುಕೊಂಡ ಹೆತ್ತವರ, ಸಮಾಜದ ಶಾಪ ತಟ್ಟುತ್ತದೆ. ಈ ಮಾಹಿತಿ ಸುಳ್ಳು ಆಗಲಿ ಎಂದು ಆಶಿಸುತ್ತೇನೆ. ಆದರೆ ಈ ಮಾಹಿತಿ ಸತ್ಯ ಆಗಿದ್ದರೆ ಸಿಎಂ ಒಂದು ಕ್ಷಣವೂ ಅಧಿಕಾರದಲ್ಲಿ ಇರಲೇ ಬಾರದು ಎಂದರು. ಹೊರಗಡೆ ಕಾಲ್ತುಳಿತಕ್ಕೊಳಗಾದ ಗಾಯಾಳುಗಳನ್ನು ಕೈಯಲ್ಲಿ ಹೆಗಲಮೇಲೆ ಹೊತ್ತುಕೊಂಡು ಹೋಗುತ್ತಿದ್ದರು. ಒಳಗಡೆ ಉಪಮುಖ್ಯಮಂತ್ರಿ ಟ್ರೋಫಿ ಎತ್ತಿಕೊಂಡಿದ್ದರು. ಹಾಗಾದರೆ ಈ ಎಲ್ಲ ಘಟನೆಗಳಿಗೆ ಹೊಣೆ ಯಾರು? ಕ್ರೆಡಿಟ್ ವಾರ್ ಮಾಡಿದವರು ಹೊಣೆಗಾರರು ಅಲ್ವಾ ಎಂದು ಸಿ.ಟಿ. ರವಿ ಪ್ರಶ್ನಿಸಿದರು.

ಶಾಸಕ ವೇದವ್ಯಾಸ್‌ ಕಾಮತ್‌, ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂತೋಷ್‌, ರಾಜಗೋಪಾಲ ರೈ, ಮನೋಹರ ಶೆಟ್ಟಿ, ಶೈಲೇಶ್‌, ಅರುಣ್‌ ಶೇಟ್‌ ಇದ್ದರು.