ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಒಳ ಮೀಸಲಾತಿ ವರ್ಗೀಕರಣದಲ್ಲಿ ಆಗಿರುವ ಸಣ್ಣಪುಟ್ಟ ಲೋಪಗಳನ್ನು ಸರ್ಕಾರ ಪರಿಷ್ಕರಣೆ ಮಾಡಬೇಕು ಹಾಗೂ ನಮಗೆ ತುಂಬ ನೋವಾಗಿದ್ದರೂ ಸಣ್ಣ ಸಮಾಧಾನ ಮಾತ್ರ ಆಗಿದೆ ಎಂದು ಮಾದಿಗ ದಂಡೋರ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯ್ ಕುಮಾರ್ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕಳೆದ ೩೨ ವರ್ಷಗಳಿಂದ ಒಳಮೀಸಲಾತಿ ವಿಚಾರವಾಗಿ ನಡೆಯುತ್ತಿರುವ ಹೋರಾಟವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತಾರ್ಕಿಕ ಅಂತ್ಯದತ್ತ ಕೊಂಡೊಯ್ದಿದೆ. ಒಳಮೀಸಲಾತಿ ವರ್ಗೀಕರಣವನ್ನು ಕಳೆದ ಒಂದು ದಿನಗಳ ಹಿಂದೆ ಕ್ಯಾಬಿನೆಟ್ನಲ್ಲಿ ಚರ್ಚೆಗೆ ತಂದು ಅನುಮೋದನೆ ತರಲಾಗಿದೆ. ನಮಗೆ ಗೊಂದಲವಿದ್ದರೂ ಸ್ವಾಗತ ಮಾಡುತ್ತೇವೆ. ಮುಖ್ಯಮಂತ್ರಿಗಳು, ಸಚಿವ ಸಂಪುಟದ ಎಲ್ಲಾ ಸದಸ್ಯರಿಗೂ ಒಂದಷ್ಟು ಗೊಂದಲ ಗೂಡಾಗಿದ್ದರೂ ಕೂಡ ಚರ್ಚೆ ಮಾಡಿದ್ದರೂ ಅದರ ಪ್ರತಿಗಳು ನಮಗೆ ಇನ್ನು ಲಭ್ಯವಾಗಿಲ್ಲ. ಮೀಸಲಾತಿ ವರ್ಗೀಕರಣ ಮಾಡುವ ಮೂಲಕ ನ್ಯಾಯ ಒದಗಿಸಿದೆ, ಇದಕ್ಕೆ ಸಮುದಾಯದ ಎಲ್ಲಾ ಮುಖಂಡರು ಧನ್ಯವಾದ ತಿಳಿಸಲಾಗುವುದು ಎಂದರು.
ಪರಿಶಿಷ್ಟ ಜಾತಿಯ ಸಮಾನ ಜಾತಿಯ ಜನಾಂಗವನ್ನು ಸಮಾನ ಗುಂಪಿಗೆ ಸೇರಿಸಬೇಕು ಎಂಬ ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿ ಇರುವ ಸಣ್ಣ ಸಣ್ಣ ಸಮುದಾಯಗಳನ್ನು ಹಾಗೂ ಆರ್ಥಿಕವಾಗಿ ಅತೀ ಹಿಂದುಳಿದ ಸಮುದಾಯವನ್ನು ಒಂದು ಗುಂಪಿಗೆ ಸೇರಿಸಬೇಕು ಎಂಬ ಉದ್ದೇಶದಿಂದ ಪ್ರ.ವರ್ಗ ಎ ಗೆ ಸೇರಿಸಿ ಮಾದಿಗ ಸಮುದಾಯ ಪ್ರವರ್ಗ ಬಿ ಗೆ ಸೇರಿಸಿ ನ್ಯಾಯ ಒದಗಿಸಬೇಕು. ಜೊತೆಗೆ ಅಲೆಮಾರಿ ಸಮುದಾಯವನ್ನೂ ಪ್ರವರ್ಗ ಬಿ ಯಿಂದ ತೆಗೆದುಹಾಕಿ ಅನ್ಯಾಯ ಮಾಡಿದೆ, ಇದರ ಬಗ್ಗೆಯೂ ಪುನರ್ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು. ಹೊಟ್ಟೆ ತುಂಬಿರುವವರು ಹೊಟ್ಟೆ ಹಸಿವು ಇರುವವರಿಗೆ ಕೊಡಬೇಕು ಎಂಬುದು ಸುಪ್ರೀಂಕೋರ್ಟಿನ ಆಶಯ. ನಾಗಮೋಹನ್ ದಾಸ್ ಅವರು ವರದಿಯಲ್ಲಿ ಸೇರಿದ್ದಾರೆ ಎಂದು ಹೇಳಿದರು.ನಮಗೆ ಅನ್ಯಾಯವಾಗಿದೆ. ಮಾದಿಗ ದಂಡೋರ ಪ್ರವರ್ಗ ಬಿಯಲ್ಲಿ ಇರುವುದನ್ನು ತೆಗೆದು ಹಾಕಿದ್ದಾರೆ. ಸರ್ಕಾರವು ನಮ್ಮ ಹೋರಾಟವನ್ನು ತುಂಬ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿತ್ತು. ಗುಂಪಿನಿಂದ ತೆಗೆದು ಹಾಕಿರುವುದಕ್ಕೆ ನಮಗೆ ತುಂಬ ನೋವಾಗಿದ್ದರೂ ಸಣ್ಣ ಸಮಾಧಾನ ಮಾತ್ರ ಆಗಿದೆ ಎಂದು ಹೇಳಿ ದಯಮಾಡಿ ಪರಿಷ್ಕರಣೆ ಮಾಡುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಜಾವಗಲ್ ಇಂದ್ರೇಶ್, ಜಿಲ್ಲಾಧ್ಯಕ್ಷ ರವೀಶ್ ಬಸವಾಪುರ ಇತರರು ಉಪಸ್ಥಿತರಿದ್ದರು.