ಪ್ರತಿಯೊಂದು ಕ್ಷೇತ್ರದ ಕುರಿತು ಸಮಗ್ರ ಜ್ಞಾನ ಹೊಂದಿರಬೇಕು. ತಾವು ಕಲಿತ ವಿದ್ಯೆ, ಜ್ಞಾನ ಬಲದಿಂದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗುವಂತಾಗಬೇಕು.

ರೋಣ: ವಿದ್ಯಾರ್ಥಿಗಳು ಸದಾ ಓದು- ಬರಹದಲ್ಲಿ ತೊಡಗಬೇಕು. ಈ ದಿಶೆಯಲ್ಲಿ ಪುಸ್ತಕಗಳೊಂದಿಗೆ ಸದಾ ನಂಟು ಹೊಂದುವ ಮೂಲಕ ಬುದ್ಧಿಶಕ್ತಿ ವೃದ್ಧಿಸಿಕೊಳ್ಳಬೇಕು. ಇದರಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಪ್ರಭುಗೌಡ ಪೊಲೀಸಪಾಟೀಲ ತಿಳಿಸಿದರು.

ಶನಿವಾರ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ರಾಜೀವಗಾಂಧಿ ಶಿಕ್ಷಣ(ಬಿಇಡಿ) ಮಹಾವಿದ್ಯಾಲಯದ 2025- 26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಲಿಕೆಗೆ ಅಂತ್ಯವಿಲ್ಲ, ಅದು ನಿರಂತರ ಪ್ರಕ್ರಿಯೆಯಾಗಿರಬೇಕು ಎಂದರು.

ಪ್ರತಿಯೊಂದು ಕ್ಷೇತ್ರದ ಕುರಿತು ಸಮಗ್ರ ಜ್ಞಾನ ಹೊಂದಿರಬೇಕು. ತಾವು ಕಲಿತ ವಿದ್ಯೆ, ಜ್ಞಾನ ಬಲದಿಂದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗುವಂತಾಗಬೇಕು. ದೇಶದ ಸಂವಿಧಾನದ ಆಶಯದಂತೆ ಬದುಕಬೇಕು. ಪ್ರಜಾಪ್ರಭುತ್ವದ ನಿರ್ಣಯಗಳು ಪಾಲನೆಯಾಗಬೇಕು ಎಂದರು.

ತೋಟಗಾರಿಕೆ ನಿವೃತ್ತ ಹಿರಿಯ ನಿರ್ದೇಶಕ ಸುರೇಶ ಕುಂಬಾರ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಜವಾಬ್ದಾರಿ ಗುರುತರವಾಗಿದೆ. ವಿದ್ಯಾರ್ಥಿಗಳನ್ನು ಶಿಕ್ಷಕರು ತಮ್ಮ‌ ಮನೆಯ ಮಕ್ಕಳಂತೆ ಕಂಡು, ಅವರ ಜೀವನವನ್ನು ಮೌಲ್ಯಯುತವಾಗಿ ರೂಪಿಸುವಲ್ಲಿ ಶ್ರಮಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ರಾಜೀವಗಾಂಧಿ ಶಿಕ್ಷಣ ಮಹಾವಿದ್ಯಾಲಯ ಚೇರಮನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ‌ ಸಮಿತಿ ತಾಲೂಕಾಧ್ಯಕ್ಷ ಮಿಥುನ ಜಿ. ಪಾಟೀಲ ಮಾತನಾಡಿ, ಜೀವನದಲ್ಲಿ ಶಿಸ್ತನ್ನು ಬೆಳಸಿಕೊಳ್ಳಬೇಕು. ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು. ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುವ ಆದರ್ಶಯುತ ಜೀವನ ರೂಪಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿ ಸಂಘದ ವಿವಿಧ ವಿಭಾಗಗಳ ನೂತನ ಪ್ರತಿನಿಧಿಗಳಿಗೆ ಪ್ರಾಚಾರ್ಯ ಡಾ. ವೈ.ಎನ್. ಪಾಪಣ್ಣವರ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಪ್ರೊ. ಬಿ.ಎಫ್. ಚೇಗರಡ್ಡಿ, ಪ್ರಾಚಾರ್ಯ ವೈ.ಎನ್. ಪಾಪಣ್ಣವರ, ಎಚ್.ಆರ್. ದೊಡ್ಡಮನಿ, ಎಸ್.ಎಸ್. ಗೋದಿ, ಜಿ.ಎನ್. ನಾಯಕ, ಮೀನಾಕ್ಷಿ ಗುಂಡಗೋಪುರಮಠ, ಜಿ.ಎ. ವೀರಾಪೂರ, ವಿದ್ಯಾರ್ಥಿ ಪ್ರತಿನಿಧಿ ರವಿಚಂದ್ರ ಗುರಿಕಾರ, ವಿದ್ಯಾರ್ಥಿನಿ ಪ್ರತಿನಿಧಿ ಕೀರ್ತಿ ಗಾಣಿಗೇರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಎಸ್.ಆರ್. ಐಹೊಳ್ಳಿ‌ ಸ್ವಾಗತಿಸಿದರು. ಸಹನಾ ನೆಗಲಿ, ಮಧು ಗಾಣಿಗೇರ ನಿರೂಪಿಸಿದರು. ರವಿಚಂದ್ರ ಗುರಿಕಾರ ವಂದಿಸಿದರು.