ಸಾರಾಂಶ
ಹುಬ್ಬಳ್ಳಿ: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಸಲಕರಣೆಗಳ ಕೊರತೆ ಕಾಡುತ್ತಿದೆ. ಮುಖ್ಯವಾಗಿ ವೈದ್ಯರ ಕೊರತೆ ನೀಗಿಸಬೇಕಾಗಿದೆ. ಭವಿಷ್ಯದ ಭಾರತ ನಿರ್ಮಾಣದಲ್ಲಿ ವೈದ್ಯರ ಕೊಡುಗೆ ಮಹತ್ತರವಾದುದಾಗಿದೆ. ಉತ್ತಮ ಚಿಕಿತ್ಸೆ ನೀಡುವತ್ತ ವೈದ್ಯರು ಗಮನಹರಿಸಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಎಸ್ಡಿಎಂ ಧಾರವಾಡ ಮತ್ತು ಕೆಎಲ್ಇ ಸಂಸ್ಥೆಗಳ ಸಹಯೋಗದೊಂದಿಗೆ ಕರ್ನಾಟಕ ವೈದ್ಯರ ಸಂಘ ಹುಬ್ಬಳ್ಳಿ - ಧಾರವಾಡ ಶಾಖೆ ವತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ 42ನೇ ಕಾಪಿಕಾನ್ 2025 ಸಮ್ಮೇಳನದಲ್ಲಿ ಮಾತನಾಡಿದರು.ದೇಶದಲ್ಲಿ ವೈದ್ಯಕೀಯ ಚಿಕಿತ್ಸೆ ಬಹಳ ಕಡಿಮೆ ಪ್ರಮಾಣದಲ್ಲಿದೆ. ಒಂದು ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯರಿದ್ದಾರೆ. ಹೀಗಾಗಿ, ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ದೇಶವಾಗಿ ಭಾರತ ಹೊರಹೊಮ್ಮಬೇಕಾಗಿದೆ ಎಂದು ಹೇಳಿದರು.
ಎಪಿಐ ಅಧ್ಯಕ್ಷ ಡಾ. ಜ್ಯೋತಿರ್ಮಯ ಪಾಲ್ ಮಾತನಾಡಿ, ವೈದ್ಯರು ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕು. ವಿಚಾರಧಾರೆಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಹಳ್ಳಿಗಳಲ್ಲಿ ವೈದ್ಯರ ಕೊರತೆ ತುಂಬಾ ಇದೆ. ವೈದ್ಯಕೀಯ ಸೇವೆಗಳು ಇಷ್ಟಾಗಿ ದೊರೆಯುವುದಿಲ್ಲ. ಯಾವುದೇ ರೀತಿಯ ಚಿಕಿತ್ಸೆ ನೀಡುವಾಗ ಬಹಳ ಎಚ್ಚರ ವಹಿಸಬೇಕು. ತಂತ್ರಜ್ಞಾನದಲ್ಲಿ ಭಾರತ ದೇಶ ಸಾಧನೆಗೈದಿದ್ದರೂ ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಲು ಮುಂದಾಗಬೇಕಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸ್ಫೂರ್ತಿ ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ಡಾ. ನರಸಿಂಹಲು, ಕೆಎಂಸಿಆರ್ಐನ ನಿರ್ದೇಶಕ ಎಸ್.ಎಫ್. ಕಮ್ಮಾರ, ಕಾಪಿಕಾನ್ ಆಯೋಜನಾ ಸಮಿತಿಯ ಮುಖ್ಯ ಸಲಹೆಗಾರ ಡಾ. ಜಿ.ಬಿ. ಸತ್ತೂರ, ಡಾ. ರಾಘವೇಂದ್ರ ಬೆಳಗಾಂವ್ಕರ್, ಡಾ. ಚಂದ್ರಶೇಖರ, ಡಾ. ಉದಯ ಬಂಡೆ, ಡಾ. ಕಿರಣ, ಡಾ. ಅವಿನಾಶ ಇಟಗಿ ಸೇರಿದಂತೆ ಇತರರು ಹಾಜರಿದ್ದರು. ಧನಶ್ರೀ ಮತ್ತು ಭಾರ್ಗವಿ ಪ್ರಾರ್ಥಿಸಿದರು. ಕಾಪಿಕಾನ್ ಆಯೋಜನಾ ಸಮಿತಿಯ ಅಧ್ಯಕ್ಷ ಡಾ. ಈಶ್ವರ ಹಸಬಿ ಸ್ವಾಗತಿಸಿದರು.