ಸಾರಾಂಶ
ಆರಗದಲ್ಲಿ ಮಂಗಳವಾರ ತೀರ್ಥಹಳ್ಳಿ ತಾಲೂಕು ಮತ್ತು ವಲಯ ಮಟ್ಟದ ಕ್ರೀಡಾಕೂಟ ಆರಂಭವಾಯಿತು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ದೈಹಿಕ ಶಿಕ್ಷಕರ ಕೊರತೆಯ ನಡುವೆಯೂ ಮಲೆನಾಡು ಭಾಗದ ಕ್ರೀಡಾಪಟುಗಳ ಸಾಧನೆ ಗಮನಾರ್ಹವಾಗಿದೆ. ರಾಜ್ಯ ಮಟ್ಟದ ಕ್ರೀಡಾಕೂಟದ ದೃಷ್ಟಿಯಿಂದ ಮಳೆಗಾಲದ ನಡುವೆ ಪ್ರತಿಕೂಲ ಹವಾಮಾನದಲ್ಲಿ ನಡೆಯವ ಪ್ರಾಥಮಿಕ ಹಂತದ ಶಾಲಾ ಕ್ರೀಡಾಕೂಟಗಳು ಪಶ್ಚಿಮ ಘಟ್ಟ ವ್ಯಾಪ್ತಿಯ ಮಕ್ಕಳ ಕ್ರೀಡಾ ಸಾಮರ್ಥ್ಯ ಪ್ರದರ್ಶನಕ್ಕೂ ಪೂರಕವಾಗಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಆರಗ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಡಶಾಲಾ ವಿಭಾಗದ ಆಶ್ರಯದಲ್ಲಿ ಮಂಗಳವಾರ ಆರಂಭಗೊಂಡ ಎರಡು ದಿನಗಳ ತಾಲೂಕು ಮತ್ತು ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ, ಒಲಿಂಪಿಕ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆಯ ಕನಸು ಇಲ್ಲಿಂದಲೇ ಆರಂಭವಾಗಬೇಕು. ಹೀಗಾಗಿ ಮಕ್ಕಳಿಗೆ ಪ್ರಾಥಮಿಕ ತರಗತಿ ಹಂತ ದಿಂದಲೇ ಸೂಕ್ತ ತರಬೇತಿ ಅಗತ್ಯ. ಆದರೆ ನಮ್ಮ ಶಾಲೆಗಳಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಕೊರತೆಯ ಕಾರಣದಿಂದಾಗಿ ದೈಹಿಕ ಶಿಕ್ಷಕರ ನೇಮಕ ಆಗುದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ನಡುವೆಯೂ ಬಡ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಶಾಲೆ ಯನ್ನು ಉಳಿಸಿಕೊಳ್ಳಲು ಊರಿನ ಪ್ರಮುಖರು ಮತ್ತು ದಾನಿಗಳ ಬೆಂಬಲ ಅನುಕರಣೀಯವಾಗಿದೆ. ಒಂದು ಕಾಲದಲ್ಲಿ ಕೇಳು ವಂತಿದ್ದ ಈ ಊರಿನ ಕೈಗಳು ಇಂದಿಗೆ ಕೊಡುವ ಕೈಗಳಾಗಿ ಪರಿವರ್ತನೆಗೊಂಡಿದ್ದು, ಈ ಶಾಲೆಯ ಬೆಂಬಲಕ್ಕೆ ನಿಂತಿರುವುದು ಸಂತಸದ ಸಂಗತಿಯಾಗಿದೆ. ಇಲ್ಲಿಗೆ ಅತೀ ಶೀಘ್ರದಲ್ಲಿ ಪಬ್ಲಿಕ್ ಶಾಲೆ ಆರಂಭಿಸಲು ಪ್ರಯತ್ನಿಸುವುದಾಗಿಯೂ ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ವೈ,ಗಣೇಶ್ ಮಾತನಾಡಿ, ಮಳೆಗಾಲದ ಪ್ರತಿಕೂಲ ವಾತಾವರಣದ ನಡುವೆಯೂ ತಾಲೂಕು ಮಟ್ಟದ ಒಂದು ಕ್ರೀಡಾಕೂಟ ಹೇಗಿರಬೇಕು ಎಂಬುದಕ್ಕೆ ಈ ಕ್ರೀಡಾಕೂಟ ಮಾದರಿಯಾಗಿದೆ. ಇದಕ್ಕೆ ಕಾರಣರಾದ ಹಳೇ ವಿದ್ಯಾರ್ಥಿ ಸಂಘಟನೆ, ಶಾಲೆಯ ಸಿಬ್ಬಂದಿ ವರ್ಗ ಮತ್ತು ದಾನಿಗಳು ಅಭಿನಂದನಾರ್ಹರಾಗಿದ್ದಾರೆ ಎಂದರು.
ಶಿಕ್ಷಕ ಕೆ.ಎನ್.ದಾನೇಶ್ ಸ್ವಾಗತಿಸಿ, ಹಿರಿಯ ವಿಧ್ಯಾರ್ಥಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಗ ಗ್ರಾ.ಪಂ. ಅಧ್ಯಕ್ಷ ಎನ್.ಎನ್.ಚಂದ್ರಶೇಖರ್, ಉಪಾಧ್ಯಕ್ಷೆ ರೇವತಿ ಗಣೇಶ್, ಸದಸ್ಯರಾದ ಮಹೇಶ್, ಮಾಜಿ ಅಧ್ಯಕ್ಷರಾದ ಜಗದೀಶ್ ಹಾಗೂ ರಾಜಶೇಕರ್ ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ ಶಾಲೆಯ ಅಭಿವೃದ್ದಿಗೆ ವಿವಿದ ರೀತಿಯಲ್ಲಿ ನೆರವು ನೀಡಿದ ದಾನಿಗಳನ್ನು ಗೌರವಿಸಲಾಯ್ತು.