ಎಂಜಿನಿಯರ್‌ ಸಮಾಜದ ಸಮಸ್ಯೆಗೆ ಸ್ಪಂದಿಸಲಿ

| Published : Jul 14 2024, 01:36 AM IST

ಸಾರಾಂಶ

5ಜಿ ತಂತ್ರಜ್ಞಾನ ಬಳಕೆ, ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾಂತರ, ಅತಿ ವೇಗದ ರೈಲುಗಳು, ಉತ್ಕೃಷ್ಟ ಸೌಲಭ್ಯಗಳು, ಅತ್ಯಾಧುನಿಕ ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನೆ ಭಾರತದ ಆತ್ಮವಿಶ್ವಾಸವನ್ನು ವೃದ್ಧಿಸಿವೆ.

ಧಾರವಾಡ:

ಎಂಜಿನಿಯರ್‌ ಸೇರಿದಂತೆ ತಾಂತ್ರಿಕ ಪದವಿ ಮುಗಿಸಿ ಬರೀ ತಮ್ಮ ಭವಿಷ್ಯಕ್ಕಾಗಿ ಮಾತ್ರ ಪದವಿ ಬಳಸದೇ ಸಮಾಜದ ಸಮಸ್ಯೆಗಳತ್ತ ಸಹ ಚಿತ್ತ ಹರಿಸಬೇಕು ಎಂದು ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ ಅಧ್ಯಕ್ಷ ಪ್ರೊ. ಅನಿಲ್ ಸಹಸ್ರಬುದ್ಧೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶನಿವಾರ ನಡೆದ ಇಲ್ಲಿಯ ಇಟಿಗಟ್ಟಿಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಐಟಿ) 6ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ದೇಶದ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಒಡಂಬಡಿಕೆ ಮಾಡಿಕೊಂಡು ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವ ದಿಸೆಯಲ್ಲಿ ಕಾರ್ಯೋನ್ಮುಖವಾಗಬೇಕು. ತಂತ್ರಜ್ಞಾನದ ವೇಗ ಮೊದಲಿಗಿಂತಲೂ ಈಗ ವೇಗವಾಗಿ ಬೆಳೆಯುತ್ತಿದೆ. ಈಗಿನ ಪೀಳಿಗೆಯೂ ಅದಕ್ಕೆ ತಕ್ಕಂತೆ ವೇಗವಾಗಿ ಅಧ್ಯಯನ ಹಾಗೂ ಪ್ರಯೋಗಳನ್ನು ಮಾಡುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬೇಕು. ಜತೆಗೆ ಸಮಾಜ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆಯೂ ಗಮನ ಹರಿಸಬೇಕೆಂದರು.

5ಜಿ ತಂತ್ರಜ್ಞಾನ ಬಳಕೆ, ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾಂತರ, ಅತಿ ವೇಗದ ರೈಲುಗಳು, ಉತ್ಕೃಷ್ಟ ಸೌಲಭ್ಯಗಳು, ಅತ್ಯಾಧುನಿಕ ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನೆ ಭಾರತದ ಆತ್ಮವಿಶ್ವಾಸವನ್ನು ವೃದ್ಧಿಸಿವೆ. ದೇಶದ 60 ಕಡೆಗಳಲ್ಲಿ ಜಿ20 ಶೃಂಗಸಭೆ ಆಯೋಜಿಸುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸಿದೆ. ಶಾಂತಿ ಮಾತುಕತೆ, ಸಾಫ್ಟವೇರ್‌, ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಸೇರಿದಂತೆ ಜಗತ್ತಿನ ರಾಷ್ಟ್ರಗಳು ಭಾರತದ ಮೇಲೆ ಅಗಾಧ ನಿರೀಕ್ಷೆ ಹೊಂದಿವೆ. ಇದನ್ನು ಮನಗಂಡು ಯುವ ಪದವೀಧರರು ತಮ್ಮ ಕೊಡುಗೆ ನೀಡಬೇಕು ಎಂದರು.

ಐಐಐಟಿ ಬೆಂಗಳೂರು ನಿರ್ದೇಶಕ ಪ್ರೊ. ಎಸ್. ಸದ್‌ಗೋಪನ್ ಮಾತನಾಡಿದರು. ಐಐಐಟಿ ಧಾರವಾಡ ನಿರ್ದೇಶಕ ಪ್ರೊ. ಎಸ್.ಆರ್. ಮಹದೇವ ಪ್ರಸನ್ನ, ಕುಲಸಚಿವ ರವಿ ವಿಟ್ಲಾಪುರ, ಆಡಳಿತ ಮಂಡಳಿ ಸದಸ್ಯರು ಇದ್ದರು.

ಘಟಿಕೋತ್ಸವದಲ್ಲಿ ಶೋಭನ್‌ಕುಮಾರ, ಅಭಿಲಾಷ್ ಸಿ.ಬಿ. ಪಿಎಚ್‌ಡಿ ಪಡೆದುಕೊಂಡರು. ಯಶಸ್ವಿ ಸಿಂಗ್, ಗೌರಂಗ ಬೇಲೆಕರ, ಸ್ಯಾಮ್ಯುಯೆಲ್ ಮಾಥ್ಯೂ, ರಾಕೇಶ್ ರೌಶನ್, ಪೂರ್ಣಿಮಾ ಚಿನ್ನದ ಪದಕಕ್ಕೆ ಭಾಜನರಾದರೆ, 248 ವಿದ್ಯಾರ್ಥಿಗಳು ಬಿಟೆಕ್ ಪದವಿ ಪಡೆದುಕೊಂಡರು.