ಜೀವನದ ಗುರಿ ಪೂರ್ವನಿರ್ಧರಿತ ಆಗಿರಲಿ: ಕರ್ನಲ್‌ ಜಗದೀಶ್‌

| Published : Feb 06 2025, 12:16 AM IST

ಸಾರಾಂಶ

ಹೆಬ್ರಿಯ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ವಿನೀಶ್ ಆಚಾರ್ಯ ಅವರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಭಾರತೀಯ ಸೇನೆಯ ನಿವೃತ್ತ ಸೈನ್ಯಾಧಿಕಾರಿ ಕರ್ನಲ್ ಜಗದೀಶ್ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ವಿದ್ಯಾರ್ಥಿಗಳು ಜೀವನದಲ್ಲಿ ಏನಾಗಬೇಕು. ಸಾಧನೆಯನ್ನು ಮಾಡಲು ಏನು ಮಾಡಬೇಕು. ಎಂಬುದನ್ನು ಮೊದಲು ನಿರ್ಧಾರ ಮಾಡಬೇಕು. ನೀವು ಏನಾಗಬೇಕೆಂದು ಬಯಸುತ್ತೀರೋ ಅದನ್ನು ದಿನನಿತ್ಯವೂ ಬರೆದು ನಿಮ್ಮ ಮನಸ್ಸಿಗೆ ಮತ್ತೆ ಅದನ್ನು ಸ್ಪಷ್ಟಪಡಿಸಿದಾಗ ನಿಮ್ಮ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆಗ ನಿಮ್ಮ ಬದುಕಿನ ದಾರಿ ಗೋಚರಿಸುತ್ತದೆ, ಬದುಕು ಸ್ಪಷ್ಟಗೊಳ್ಳುತ್ತದೆ ಎಂದು ಭಾರತೀಯ ಸೇನೆಯ ನಿವೃತ್ತ ಸೈನ್ಯಾಧಿಕಾರಿ ಕರ್ನಲ್ ಜಗದೀಶ್ ಹೇಳಿದ್ದಾರೆ.

ಹೆಬ್ರಿಯ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ವಿನೀಶ್ ಆಚಾರ್ಯ ಅವರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್ ನಾಗರಾಜ್ ಶೆಟ್ಟಿ ಮಾತನಾಡಿ, ನಿವೃತ್ತ ಸೈನ್ಯಾಧಿಕಾರಿ ಜಗದೀಶ್ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಸೈನ್ಯಾಧಿಕಾರಿ ಸ್ಥಾನಕ್ಕೆ ಏರಬೇಕಾದರೆ ಅದರ ಹಿಂದಿನ ಶ್ರಮ, ಸಾಧನೆ, ತ್ಯಾಗವನ್ನು ನಾವು ಗಮನಿಸಬೇಕು. ವಿದ್ಯಾರ್ಥಿಗಳು ಇಂತಹ ಸಾಧಕರನ್ನು ನಾವು ಮಾರ್ಗದರ್ಶಕರಾಗಿ, ಮಾದರಿಯಾಗಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಚಿತ್ರಕಲಾ ಸ್ಪರ್ಧೆಯಲ್ಲಿ ಸಾಧನೆ ಮಾಡಿ ರಕ್ಷಣಾ ಸಚಿವರಿಂದ ಸನ್ಮಾನ ಸ್ವೀಕರಿಸಿದ ವಿನೀಶ್ ಆಚಾರ್ಯ ಅವರಿಗೆ, ಪ್ರತೀ ವರ್ಷ 50 ಸಾವಿರ ರು. ನೆಲೆಯಲ್ಲಿ ಸ್ಕಾಲರ್‌ಶಿಪ್, ನಗದು ಬಹುಮಾನ ಹಾಗು ಎಂಟನೇ ತರಗತಿಯಿಂದ ಪಿಯುಸಿಯವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದರು.

ಸಂಸ್ಥೆಯ ಕಾರ್ಯದರ್ಶಿವರಾದ ಸಪ್ನಾ ಎನ್ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಆ ಪ್ರತಿಭೆ ಹೊರಹೊಮ್ಮುವುದೇ ಸಾಧನೆ. ಸಾಧನೆಗೆ ಪೋಷಕರ, ಶಿಕ್ಷಣ ಸಂಸ್ಥೆಯ ಎಲ್ಲರ ಸಹಕಾರ ಅಗತ್ಯ ಎಂದರು.

ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿ.ಬಿ.ಎಸ್.ಇ) ಮತ್ತು ಕೇಂದ್ರ ರಕ್ಷಣಾ ಸಚಿವಾಲಯ (ಎಂಓಡಿ) ಸಹಯೋಗದೊಂದಿಗೆ ಶಿಕ್ಷಣ ಸಚಿವಾಲಯ (ಎಂಇಒ)ಶೌರ್ಯ ಪ್ರಶಸ್ತಿಗಳ ಉಪಕ್ರಮದ ಭಾಗವಾಗಿ ವೀರ್ ಗಾಥಾ 4.0 ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾಗಿ ರಕ್ಷಣಾ ಸಚಿವರಿಂದ ಗೌರವ ಸ್ವೀಕರಿಸಿದ ಎಸ್ ಆರ್ ಪಬ್ಲಿಕ್ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿ ವಿನೀಶ್ ಆಚಾರ್ಯ ಹಾಗು ಅವರ ಪೋಷಕರಾದ ಪ್ರಕಾಶ್ ಆಚಾರ್ಯ ಹಾಗು ವಿನಯ ಅವರನ್ನು ಗೌರವಿಸಲಾಯಿತು.

ಪ್ರಾಂಶುಪಾಲ ಭಗವತಿ, ಉಪಪ್ರಾಂಶುಪಾಲ ದೀಪಕ್ ಎನ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗೋಪಾಲಾಚಾರ್ಯ ಇದ್ದರು.

ಸಂಸ್ಕೃತ ಉಪನ್ಯಾಸಕ ಆದಿತ್ಯ ನಿರೂಪಿಸಿದರು. ದೀಪಕ್ ಎನ್ ಸ್ವಾಗತಿಸಿ, ಭಗವತಿ ವಂದಿಸಿದರು.