ಸಾರಾಂಶ
ಮಹದಾಯಿ ಕಳಸಾ-ಬಂಡೂರಿ ರೈತ ಹೋರಾಟ ಪಕ್ಷಾತೀತ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವಲಗುಂದದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಬರಗಾಲ ಎಂದು ಘೋಷಣೆ ಮಾಡಿ ತಿಂಗಳು ಕಳೆದರೂ ಪರಿಹಾರ ನೀಡಿಲ್ಲ. ಶೀಘ್ರದಲ್ಲಿ ಬೆಳೆ ವಿಮೆ ಹಾಗೂ ಬರ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ನವಲಗುಂದ: ಬರಗಾಲ ಎಂದು ಘೋಷಣೆ ಮಾಡಿ ತಿಂಗಳು ಕಳೆದರೂ ಪರಿಹಾರ ನೀಡಿಲ್ಲ. ಶೀಘ್ರದಲ್ಲಿ ಬೆಳೆ ವಿಮೆ ಹಾಗೂ ಬರ ಪರಿಹಾರ ಬಿಡುಗಡೆಗೊಳಿಸಬೇಕು. ಇಲ್ಲದ್ದಿದ್ದರೆ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಮುಖಂಡ ಸುಭಾಶ್ಚಂದ್ರಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಅವರು ಗುರುವಾರ ಪಟ್ಟಣದ ಮಹದಾಯಿ ಕಳಸಾ-ಬಂಡೂರಿ ರೈತ ಹೋರಾಟ ಪಕ್ಷಾತೀತ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಮಾತನಾಡಿದರು.ಬಹುದಿನಗಳ ಬೇಡಿಕೆಯಾದ ಕಳಸಾ-ಬಂಡೂರಿ ಕಾಮಗಾರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಟೆಂಡರ್ ಕರೆದು ಕೆಲಸ ಪ್ರಾರಂಭಿಸಬೇಕು. ಮುಂಗಾರು ಬೆಳೆಯಾದ ಹೆಸರು ಬೆಳೆಯ ವಿಮೆಯನ್ನು ರೈತರು ತುಂಬಿದ್ದು, ಈ ವರೆಗೂ ರೈತರಿಗೆ ಬೆಳೆವಿಮೆ ಬಂದಿಲ್ಲ. ಶೀಘ್ರವಾಗಿ ಬಿಡುಗಡೆ ಮಾಡಬೇಕು. ಅದರೊಂದಿಗೆ ಬರ ಪರಿಹಾರ ಬಿಡುಗಡೆಗೂ ಕ್ರಮ ಕೈಗೊಳ್ಳಬೇಕು. ಬರಗಾಲದಿಂದಾಗಿ ರೈತರು ಬಹಳಷ್ಟು ತೊಂದರೆಯಲ್ಲಿದ್ದು, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಸಾಲಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಸಿದ್ದಪ್ಪ ಮುಪ್ಪಯ್ಯನವರ, ಬಸನಗೌಡ ಹುಣಸಿಕಟ್ಟೆ, ಮಲ್ಲಪ್ಪ ಬಸೆಗೊಣ್ಣವರ, ಗೋವಿಂದರೆಡ್ಡಿ ಮೊರಬದ, ಸಿದ್ದಲಿಂಗಪ್ಪ ಹಳ್ಳದ ಹಾಗೂ ಹಲವು ರೈತರು ಇದ್ದರು.