ಕನಕಗಿರಿ: ನಿಜವಾದ ಫಲಾನುಭವಿಗಳಿಗೆ ಮಾತ್ರ ಗೃಹಜ್ಯೋತಿ ಯೋಜನೆ ತಲುಪಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಕ್ತ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.
ತಾಲೂಕಿನ ಸುಳೇಕಲ್ ಗ್ರಾಮದ ನಿವಾಸಿಯ ಮನೆ-ಮನೆಗೆ ಸೋಮವಾರ ತೆರಳಿ ಗೃಹಜ್ಯೋತಿ ಯೋಜನೆಯ ಅರ್ಜಿಗಳು, ವಿದ್ಯುತ್ ಬಿಲ್ ಹಾಗೂ ಅಗತ್ಯ ದಾಖಲೆಗಳನ್ನು ಸ್ಥಳದಲ್ಲೇ ತಪಾಸಣೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯು ಪ್ರತಿಯೊಬ್ಬ ಬಡ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಆಸರೆಯಾಗಿದೆ. ಈ ಯೋಜನೆಯು ಕೇವಲ ನಿಜವಾದ ಅರ್ಹರಿಗೆ ತಲುಪಬೇಕು ಎಂಬುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಯೋಜನೆಯ ದುರ್ಬಳಕೆ ತಡೆಯಲು ಮತ್ತು ಅರ್ಹರಿಗೆ ಮಾತ್ರ ಸೌಲಭ್ಯ ನಿರಂತರವಾಗಿ ಮುಂದುವರಿಸಲು ಈ ಮರು ಪರಿಶೀಲನಾ ಪ್ರಕ್ರಿಯೆಯನ್ನು ರಾಜ್ಯವ್ಯಾಪಿ ನಡೆಸಲಾಗುತ್ತಿದ್ದು, ಇದೀಗ ಜಿಲ್ಲೆಯಲ್ಲಿಯೂ ಆರಂಭಿಸಲಾಗಿದೆ ಎಂದರು.ಯಾವುದೇ ಕಾರಣಕ್ಕೂ ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ವಂಚಿತರಾಗಬಾರದು. ಜೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಪಾರದರ್ಶಕವಾಗಿ ಮನೆ-ಮನೆಗೆ ಭೇಟಿ ನೀಡಿ ನಿಖರ ಮಾಹಿತಿ ಸಂಗ್ರಹಿಸಬೇಕು. ಸಾರ್ವಜನಿಕರು ಸಹ ಅಧಿಕಾರಿಗಳು ಕೇಳುವ ಕೇಳುವ ದಾಖಲಾತಿಗಳ ಸಹಿತ ಮಾಹಿತ ನೀಡಬೇಕು ಎಂದು ಮನವಿ ಮಾಡಿದರು.
ಜೆಸ್ಕಾಂ ಎಡಬ್ಲ್ಯೂಇ ಮಂಜುನಾಥ, ತಾಪಂ ಇಒ ರಾಜಶೇಖರ, ಜೆಸ್ಕಾಂ ಶಾಖಾಧಿಕಾರಿ ಸಿದ್ದಲಿಂಗಪ್ಪ, ಎಂಜಿನಿಯರ್ ವೀರೇಶ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಜರತ್ ಹುಸೇನ್, ಸದಸ್ಯರಾದ ಜಗದೀಶ ಸೂಳೇಕಲ್, ಗ್ಯಾನಪ್ಪ ಗೌರಿಪುರ, ಮೈನುಸಾಬ, ಪ್ರಮುಖರಾದ ಈಶಪ್ಪ ಸೂಳೇಕಲ್, ವೀರೇಶ, ನಾಗರಾಜ ಇದ್ದರು.