ಸಾರಾಂಶ
Let the Kannada land, water, culture and language become Kannada
-ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ । ಗೋಕಾಕ್ ಚಳವಳಿಯ ಹಿನ್ನೋಟ- ಮುನ್ನೋಟ ಸಮಾರಂಭಕ್ಕೆ ಸಿಎಂ ಚಾಲನೆ
-----ಕನ್ನಡಪ್ರಭ ವಾರ್ತೆ ರಾಯಚೂರು
ಕರ್ನಾಟಕ ಸಂಪೂರ್ಣ ಕನ್ನಡಮಯವಾಗಲಿ. ಇಲ್ಲಿ ನೆಲೆಸಿರುವ ಎಲ್ಲರೂ ಕನ್ನಡಿಗರೇ. ಕನ್ನಡ ನೆಲ, ಜಲ, ಸಂಸ್ಕೃತಿ, ಭಾಷೆ, ಭೂಮಿ ಎಲ್ಲವೂ ಕನ್ನಡಮಯವಾಗಲಿ. ಮನೆ ಭಾಷೆ ಯಾವುದೇ ಇದ್ದರೂ ವ್ಯಾವಹಾರಿಕ ಭಾಷೆ ಕನ್ನಡವಾಗಲಿ. ಕನ್ನಡ ಅಗ್ರ ಭಾಷೆಯಾಗಲಿ, ಕನ್ನಡ ಮೊದಲ ಭಾಷೆಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶಯ ವ್ಯಕ್ತಪಡಿಸಿದರು.ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಯಚೂರು ಜಿಲ್ಲಾಡಳಿತದ ವತಿಯಿಂದ ಗೋಕಾಕ್ ಚಳವಳಿಯ ಹಿನ್ನೋಟ-ಮುನ್ನೋಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದ ಅವರು ಪ್ರತಿಯೊಂದು ಭಾಷೆಯನ್ನೂ ಕಲಿಯಿರಿ, ಆದರೆ ಆಡಳಿತ ಭಾಷೆ ಕನ್ನಡ ಆಗಿರಲಿ. ಎಲ್ಲಾ ಭಾಷೆಗಳ ಬಗ್ಗೆ ಗೌರವ ಇರಲಿ, ಎಷ್ಟು ಭಾಷೆಗಳನ್ನಾದರೂ ಕಲಿಯಿರಿ ಆದರೆ ಈ ನೆಲದ ಭಾಷೆ ಕನ್ನಡವನ್ನು ಬಿಟ್ಟು ಕೊಡುವಷ್ಟು ಧಾರಾಳತನ ಬೇಡ ಎಂದು ಸಲಹೆ ನೀಡಿದರು.ಗೋಕಾಕ್ ಚಳವಳಿಯು ಕರ್ನಾಟಕದಲ್ಲಿ ಭಾಷಾ ಚಳವಳಿ, ಕನ್ನಡ ಚಳವಳಿ ಆಗಿದೆ. ನಾನು ಯಾವ ಭಾಷೆಗೂ ವಿರೋಧವಿಲ್ಲ. ಮಾತೃಭಾಷೆ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳದೆ. ಮಾತೃಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಂಡು ಕನ್ನಡ ವಾತಾವರಣ ಸೃಷ್ಟಿ ಮಾಡಬೇಕಾಗಿದೆ ಎಂದರು.ಆಂಧ್ರ- ತೆಲಂಗಾಣದ ಪಕ್ಕದ ಜಿಲ್ಲೆ ರಾಯಚೂರು ಈ ಭಾಗದಲ್ಲಿ ಸ್ವಲ್ಪ ತೆಲುಗು, ಉರ್ದು ಭಾಷೆ ಪ್ರಭಾವ ಇದೆ. ಸ್ವಾಭಾವಿಕವಾಗಿ ತೆಲುಗು ಭಾಷೆ ಇರುವುದು ಸಹಜ ಕರ್ನಾಟಕ ಏಕೀಕರಣ ಆದ ಬಳಿಕ ಬೇರೆಬೇರೆ ರಾಜ್ಯದಲ್ಲಿ ಸೇರಿದ ಕನ್ನಡ ಮಾತನಾಡುವ ಜನರು ಒಂದೇ ರಾಜ್ಯದಲ್ಲಿ ಸೇರಬೇಕೆಂದು 1956, ನವಂಬರ್ 1ರಲ್ಲಿ ಕರ್ನಾಟಕ ಏಕೀಕರಣ ಆಯ್ತು ಅಲ್ಲದೆ ಮೊದಲು ಮೈಸೂರು ರಾಜ್ಯ ಅಂತಹ ನಾಮಕರಣ ಇತ್ತು ಇದನ್ನು 1973ರಲ್ಲಿ ಮೈಸೂರು ರಾಜ್ಯವನ್ನ ಕರ್ನಾಟಕ ಅಂತ ನಾಮಕರಣ ಮಾಡಲಾಯಿತು. ಇಂದು 50 ವರ್ಷ ತುಂಬಿ, 51ನೇ ವರ್ಷದಲ್ಲಿ ನಾವು ಇದ್ದೇವೆ. 2024ರ ನವಂಬರ್ 1ರಂದು ಸಮಾರೋಪ ಸಮಾರಂಭ ಮಾಡಬೇಕು. ಅದಕ್ಕಾಗಿ ರಾಜ್ಯದ ಮೈಸೂರು, ಬೆಳಗಾವಿ, ರಾಯಚೂರು, ಮಂಗಳೂರಿನಲ್ಲಿ ಕರ್ನಾಟಕ ಹೆಸರಾಯ್ತು, ಕನ್ನಡ ನಮ್ಮೆಲ್ಲರ ಉಸಿರಾಗಲಿ ಎಂಬ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಸಮಾರಂಭದಲ್ಲಿ ಸಚಿವರು,ಶಾಸಕರು,ವಿವಿಧ ನಿಗಮ ಮಂಡಳಿ, ಸ್ಥಳೀಯ ಸಂಸ್ಥೆ ಹಾಗೂ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು, ಇಲಾಖೆ ನಿರ್ದೇಶಖರು,ಅಧಿಕಾರಿಗಳು,ವಿದ್ಯಾರ್ಥಿಗಳು,ಕನ್ನಡಪರ ಸಂಘಟನೆ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.
--------------------------05ಕೆಪಿಆರ್ಸಿಆರ್ 10: ರಾಯಚೂರಿನ ಕೃಷಿ ವಿವಿಯಲ್ಲಿ ನಡೆದ ಗೋಕಾಕ್ ಚಳವಳಿ ಹಿನ್ನೋಟ-ಮುನ್ನೋಟ ಕಾರ್ಯಕ್ರಮದಲ್ಲಿ ಚಳವಳಿಯಲ್ಲಿ ಭಾಗವಹಿಸಿದ ಹಿರಿಯರು, ಸಂಘಟನೆಗಳ ಪ್ರಮುಖರನ್ನು ಸಿಎಂ ಸಿದ್ದರಾಮಯ್ಯ ಅವರು ಸನ್ಮಾನಿಸಿ ಗೌರವಿಸಿದರು.