ಮಾದಕ ದ್ರವ್ಯ ಸೇವನೆ ನಿಷೇಧ ಕಾನೂನು ಜಾರಿಗೆ ಬರಲಿ : ಕುಂ. ವೀರಭದ್ರಪ್ಪ

| N/A | Published : Jun 28 2025, 12:24 AM IST / Updated: Jun 28 2025, 12:26 PM IST

ಮಾದಕ ದ್ರವ್ಯ ಸೇವನೆ ನಿಷೇಧ ಕಾನೂನು ಜಾರಿಗೆ ಬರಲಿ : ಕುಂ. ವೀರಭದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವದ ಮುಸ್ಲಿಂ ರಾಷ್ಟ್ರಗಳಲ್ಲಿ ಮಾದಕ ದ್ರವ್ಯ ಮಾರಾಟ, ಸೇವನೆ ನಿಷೇಧ ಮಾಡಿರುವಂತೆ ನಮ್ಮ ರಾಷ್ಟ್ರದಲ್ಲೂ ನಿಷೇಧ ಕಾನೂನು ಜಾರಿಗೊಳಿಸಬೇಕು.

 ಕೊಟ್ಟೂರು :  ವಿಶ್ವದ ಮುಸ್ಲಿಂ ರಾಷ್ಟ್ರಗಳಲ್ಲಿ ಮಾದಕ ದ್ರವ್ಯ ಮಾರಾಟ, ಸೇವನೆ ನಿಷೇಧ ಮಾಡಿರುವಂತೆ ನಮ್ಮ ರಾಷ್ಟ್ರದಲ್ಲೂ ನಿಷೇಧ ಕಾನೂನು ಜಾರಿಗೊಳಿಸಬೇಕು ಎಂದು ಸಾಹಿತಿ ಕುಂ. ವೀರಭದ್ರಪ್ಪ ಒತ್ತಾಯಿಸಿದರು.

ಇಲ್ಲಿನ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು. ಪಠ್ಯಪುಸ್ತಕಗಳಲ್ಲಿ ಮಾದಕ ದ್ರವ್ಯಗಳ ಸೇವನೆಯಿಂದ ಆಗುತ್ತಿರುವ ಆರೋಗ್ಯ ಹಾನಿ ಮತ್ತು ಕೆಡುಕುಗಳ ಬಗ್ಗೆ ಸಮಗ್ರ ವಿವರದ ಬರಹಗಳು ಕಡ್ಡಾಯವಾಗಿ ಸೇರ್ಪಡೆಗೊಳ್ಳಬೇಕು. ಮಾದಕ ದ್ರವ್ಯಗಳ ಸೇವನೆಯತ್ತ ಯುವಕರು ರಾಷ್ಟ್ರ ಮತ್ತು ರಾಜ್ಯದಲ್ಲಿ ಮುಖ ಮಾಡುತ್ತಿರುವುದು ನಿಜಕ್ಕೂ ದುರಂತ. ಇದು ಕೂಡಲೇ ನಿಲ್ಲಬೇಕು ಎಂದರು.

ಮಾನಸಿಕ, ದೈಹಿಕವಾಗಿ ಬಳಲುವಂತಾಗುತ್ತಿದ್ದರೂ ಮಾದಕ ದ್ರವ್ಯಗಳ ಸೇವನೆಗೆ ದಾಸರಾಗುವ ಯುವಕ, ಯುವತಿಯರು ತಮ್ಮ ಬದುಕನ್ನು ಅನಾವಶ್ಯಕವಾಗಿ ಬಲಿಕೊಡುತ್ತಿರುವುದು ಸರಿಯಲ್ಲ. ಪ್ರೌಢಶಾಲೆ, ಕಾಲೇಜುಗಳು ಇಂತಹ ವಾತಾವರಣದಿಂದ ಮುಕ್ತವಾಗಲು ವಿದ್ಯಾರ್ಥಿಗಳಿಗೆ ಪ್ರೇರಣಾಶಕ್ತಿ ಆಗಬೇಕು ಎಂದರು.

ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶ ದೂಡ್ಡಮನಿ ಮಾತನಾಡಿ, ಮಾದಕ ದ್ರವ್ಯ ಸೇವನೆಯಿಂದ ಸಮಾಜದಲ್ಲಿ ಗೌರವಯುತವಾಗಿ ಜೀವಿಸಲು ಸಾಧ್ಯವಾಗುವುದಿಲ್ಲ. ಮಾರಕ ರೀತಿಯಲ್ಲಿ ಇದು ರೋಗವಾಗಿ ಹಬ್ಬದಂತೆ ನೋಡಿಕೊಳ್ಳಬೇಕಿರುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ ಎಂದರು.

ಪತ್ರಕರ್ತ ಉಜ್ಜಿನಿ ರುದ್ರಪ್ಪ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು. ಸರ್ಕಲ್ ಇನ್‌ಸ್ಪೆಕ್ಟರ್‌ ವೆಂಕಟಸ್ವಾಮಿ ಕೊಟ್ಟೂರು, ಪಿಎಸ್‌ಐ ಗೀತಾಂಜಲಿ ಸಿಂಧೆ, ಹೊಸಹಳ್ಳಿ ಸಿದ್ದರಮೇಶ ಮತ್ತಿತರರು ಜಾಥಾದಲ್ಲಿ ಭಾಗವಹಿಸಿದ್ದರು.

ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯ, ಸರ್ಕಾರಿ ಪಿಯು ಕಾಲೇಜು, ಸನ್ನಿಧಿ ಮತ್ತು ಗಂಗೋತ್ರಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಉಜ್ಜಯನಿ ಸರ್ಕಲ್‌ನಿಂದ ಮೆರವಣಿಗೆ ಸಾಗಿ ಬಸ್ ನಿಲ್ದಾಣದ ವೃತ್ತದ ವರೆಗೆ ಆಗಮಿಸಿ, ಅಲ್ಲಿ ಮಾನವನ ಸರಪಳಿ ನಿರ್ಮಿಸಲಾಯಿತು. ಆನಂತರ ಸಭೆ ನಡೆಯಿತು.

Read more Articles on