ಮನುಷ್ಯ ಪ್ರಯತ್ನದೊಂದಿಗೆ ಭಗವಂತನ ಅನುಗ್ರಹದಿಂದ ನಮ್ಮ ಬದುಕು, ಸತ್ಕರ್ಮಗಳು ಸಫಲವಾಗಲು ಸಾಧ್ಯ ಎಂದು ಉಡುಪಿ ಪೇಜಾವರ ಮಠದ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ತಿಳಿಸಿದರು.

ಹಾವೇರಿ: ಮನುಷ್ಯ ಪ್ರಯತ್ನದೊಂದಿಗೆ ಭಗವಂತನ ಅನುಗ್ರಹದಿಂದ ನಮ್ಮ ಬದುಕು, ಸತ್ಕರ್ಮಗಳು ಸಫಲವಾಗಲು ಸಾಧ್ಯ ಎಂದು ಉಡುಪಿ ಪೇಜಾವರ ಮಠದ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ತಿಳಿಸಿದರು. ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಶುಕ್ರವಾರ ಶ್ರೀ ರಾಮನವಮಿಯ ಶುಭ ಘಳಿಗೆಯಲ್ಲಿ ನೂತನವಾದ ಶ್ರೀ ವಿಶ್ವೇಶ ತೀರ್ಥ ಗುರುಕುಲದ ಉದ್ಘಾಟನೆ ನೆರವೇರಿಸಿ ಅವರು ಅನುಗ್ರಹ ಸಂದೇಶ ನೀಡಿದರು. ಆಧ್ಯಾತ್ಮಿಕ ನೆಲೆಯಲ್ಲಿ ಬದುಕನ್ನು ಗುರುತಿಸುವ ಸಾಮರ್ಥ್ಯ ಮಕ್ಕಳಲ್ಲಿ ರೂಪುಗೊಳ್ಳಬೇಕು. ಲೌಕಿಕ ವಿದ್ಯೆಯೊಂದಿಗೆ ಆಧ್ಯಾತ್ಮಿಕ ಬಲ ಸತ್ವ ಹೊಂದಿರಬೇಕು. ನೈತಿಕ ಶಿಕ್ಷಣ ಇಲ್ಲದ ಬದುಕು, ಆತ್ಮವಿಲ್ಲದ ದೇಹದಂತೆ ಎಂದರು.ಗುರುಕುಲದಲ್ಲಿ ಅಧ್ಯಯನ ಮಾಡಿ ಅತ್ಯುನ್ನತ ಸ್ಥಾನ ಪಡೆದಿರುವ ಅನೇಕರನ್ನು ಉದಾಹರಿಸಿದ ಶ್ರೀಗಳು, ಈ ನೆಲದ ಅನೇಕ ದಾಸರ, ಮಹನೀಯರ ಸ್ಮರಣೆ ಕೈಗೊಂಡರು. ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ವಾನ್ ವೆಂಕಟ ನರಸಿಂಹಾಚಾರ್ಯ ಅವರು, ಗುರುಕುಲದ ಮಹತ್ವ ಹಾಗೂ ಅಗತ್ಯತೆಯನ್ನು ತಿಳಿಸಿದರು. ಶ್ರೀ ಸತ್ಯಬೋಧ ತೀರ್ಥರ ನೆಲದಲ್ಲಿ ಗುಪ್ತಗಾಮಿನಿಯಾಗಿರುವ ಜ್ಞಾನದ ಹರಿವು ಪುನಃ ಪ್ರಕಟಗೊಳ್ಳಬೇಕಿದೆ ಎಂದರು. ಭಾರತೀಯ ಸನಾತನ ಪರಂಪರೆ ಸದಾಚಾರ ಮುನ್ನಡೆಸಲು ಗುರುಕುಲಗಳ ಅಗತ್ಯವಿದೆ ಎಂದರು.ಸಭಾ ಕಾರ್ಯಕ್ರಮದಲ್ಲಿ ಪ್ರಮುಖರಾದ ವಸಂತ ಮುಕ್ತಾಲಿ, ಸಂಜೀವಕುಮಾರ ನೀರಲಗಿ, ಮಲ್ಲಿಕಾರ್ಜುನ ಕೆ.ಬಿ., ರಮೇಶ್ ಗೌಡರ ಸೇರಿದಂತೆ ಶ್ರೀ ಹರಿ ವಿಠಲಾಶ್ರಮದ ಪ್ರಮುಖರು ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ಕರ್ಜಗಿ ಗ್ರಾಮದ ಶ್ರೀ ಪೇಜಾವರ ಮಠದ ಅಂಗ ಸಂಸ್ಥೆಯಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಂಸ್ಥಾನ ಪೂಜೆಯನ್ನು ಶ್ರೀಗಳು ನೆರವೇರಿಸಿದರು. ಮಠದ ಆವರಣದಲ್ಲಿ ಮುಖ್ಯಪ್ರಾಣ ದೇವರ ಪುನ: ಪ್ರತಿಷ್ಠಾಪನೆಯನ್ನು ಶ್ರೀಗಳು ಕೈಗೊಂಡರು. ಪಾದಪೂಜೆ, ಫಲಮಂತ್ರಾಕ್ಷತೆ ವಿತರಣೆ, ವಿವಿಧ ಹೋಮಗಳು, ತೀರ್ಥ ಪ್ರಸಾದ ನೆರವೇರಿತು. ಗುರುಕುಲದ ವ್ಯವಸ್ಥಾಪಕರಾದ ಅಕ್ಷಯ ಆಚಾರ್ಯ ಮನ್ನಾರಿ ಸ್ವಾಗತಿಸಿ, ವೇಣುಗೋಪಾಲ ಅಗ್ನಿ ಹೋತ್ರಿ ನಿರ್ವಹಿಸಿದರು. ಧೀರೇಂದ್ರ ಆಚಾರ್ಯ ವಂದಿಸಿದರು