ಗದಗ: ಈ ಬಾರಿಯ ಜಾತ್ರಾ ಕಾರ್ಯಕ್ರಮದಲ್ಲಿ ಮದ್ಯಪಾನ ಸೇರಿದಂತೆ ವ್ಯಸನಮುಕ್ತ ಸಮಾಜಕ್ಕಾಗಿ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿಗಳು ಪಾದಯಾತ್ರೆ ನಡೆಸಿದ್ದು ಅತ್ಯಂತ ಪ್ರಶಂಸನೀಯ ಕಾರ್ಯವಾಗಿದ್ದು, ಪ್ರಜ್ಞಾವಂತ ಸ್ವಾಮೀಜಿಗಳು ಸೇರಿದಂತೆ ಎಲ್ಲರೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಒಂದಾಗಬೇಕಿದೆ ಎಂದು ಮಾಜಿ ಶಾಸಕ ಡಿ.ಆರ್‌. ಪಾಟೀಲ ಮನವಿ ಮಾಡಿದರು.ನಗರದ ತೋಂಟದಾರ್ಯ ಮಠದ 2026ನೇ ಸಾಲಿನ ಜಾತ್ರಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸುತ್ತಲಿನ ಗ್ರಾಮಗಳ ಅನೇಕ ಮಹಿಳೆಯರು ಒಕ್ಕೊರಲಿನಿಂದ ಮದ್ಯಪಾನ ನಿಷೇಧಕ್ಕೆ ಆಗ್ರಹಿಸುತ್ತಿದ್ದು, ಮದ್ಯಪಾನ ನಿಷೇಧದಿಂದ ಅನೇಕ ಕುಟುಂಬಗಳ ಅಧೋಗತಿಯನ್ನು ತಪ್ಪಿಸಬಹುದು. ಸರ್ಕಾರ ಮದ್ಯದಿಂದ ಬರುವ ಆದಾಯಕ್ಕೆ ಪರ್ಯಾಯ ಹುಡುಕಿಕೊಳ್ಳಬೇಕಿದ್ದು, ಮದ್ಯಪಾನ ನಿಷೇಧವಾದರೆ ಅದಕ್ಕಿಂತ ಸಂತಸದ ಸಂಗತಿ ಬೇರೊಂದಿಲ್ಲ. ಮುಂದಿನ ಗಾಂಧಿ ಜಯಂತಿ ಒಳಗಾಗಿ ಮದ್ಯಪಾನ ನಿಷೇಧವಾಗುವಂತೆ ಚಳವಳಿ ಆರಂಭಿಸಬೇಕಿದ್ದು, ಇದರಿಂದ ಅಸಂಖ್ಯಾತ ಕುಟುಂಬಗಳು ಉಳಿಯುತ್ತವೆ ಎಂದರು.ಈ ವೇಳೆ ಸಂಯಮ ಪ್ರಶಸ್ತಿಗೆ ಭಾಜನರಾದ ಡಿ.ಆರ್‌. ಪಾಟೀಲ ಹಾಗೂ ರಾಷ್ಟ್ರಮಟ್ಟದ ವಿಕಸಿತ ಭಾರತ ಯುವ ಸಂಸತ್‌ ಮಹೋತ್ಸವದಲ್ಲಿ ಪ್ರಥಮ ಸ್ಥಾನ ಗಳಿಸಿದ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ ಮಾನ್ಯಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಮ್ಮುಖವನ್ನು ಮುಳ್ಳಹಳ್ಳಿ ವಿರಕ್ತಮಠದ ಶಿವಯೋಗಿ ಸ್ವಾಮಿಗಳು, ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮಿಗಳು, ಅನುಭವ ಮಂಟಪ ಆಳಂದದ ಕೋರಣೇಶ್ವರ ಸ್ವಾಮಿಗಳು, ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಪ್ರಭು ಸ್ವಾಮಿಗಳು, ಬಸವಬೆಳವಿಯ ಶರಣಬಸವ ದೇವರು ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್‌. ಪಾಟೀಲ, ಪ್ರೊ. ಎಸ್.ಎಸ್‌. ಪಟ್ಟಣಶೆಟ್ಟರ, ಡಾ. ಪ್ಯಾರಾ ಅಲಿ ನೂರಾನಿ ಸೇರಿದಂತೆ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಇದ್ದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ ಸ್ವಾಗತಿಸಿದರು.