ಬೇರೆ ಇಲಾಖೆಗಳಿಗಿಂತ ಪೊಲೀಸ್ ಇಲಾಖೆ ಕೆಲಸವು ಭಿನ್ನವಾಗಿದೆ. ಇಲ್ಲಿ ಕೆಲಸಕ್ಕೆ ನಿರ್ದಿಷ್ಟ ಸಮಯ ಇರುವುದಿಲ್ಲ, ಎಲ್ಲಾ ಸಂದರ್ಭದಲ್ಲೂ ತಯಾರಿರಬೇಕು. ಇದರಿಂದ ಪೊಲೀಸರಿಗೆ ಆರೋಗ್ಯ ಸಮಸ್ಯೆಗಳೂ ಬೇಗ ಬರುತ್ತವೆ. ಸರ್ಕಾರ ಮತ್ತು ಹಿರಿಯ ಅಧಿಕಾರಿಗಳು ಪೊಲೀಸ್‌ ಸಿಬ್ಬಂದಿಯ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನಿವೃತ್ತರ ಆರೋಗ್ಯ ಹಾಗೂ ಕಲ್ಯಾಣದ ಬಗ್ಗೆಯೂ ಪೊಲೀಸ್ ಇಲಾಖೆ ಹೆಚ್ಚಿನ ಗಮನಹರಿಸಬೇಕು ಎಂದು ನಿವೃತ್ತ ಡಿವೈಎಸ್ಪಿ ಶಾಂತಮಲ್ಲಪ್ಪ ತಿಳಿಸಿದರು.

ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್ ಕವಾಯತು ಮೈದಾನದಲ್ಲಿ ನಗರ ಮತ್ತು ಜಿಲ್ಲಾ ಪೊಲೀಸ್‌, ಅಶ್ವರೋಹಿ ದಳ, ಕರ್ನಾಟಕ ಪೊಲೀಸ್‌ ಅಕಾಡೆಮಿ, ದಕ್ಷಿಣ ವಲಯ, ಕೆಎಸ್ಆರ್‌ಪಿ 5ನೇ ಪಡೆ, ಪೊಲೀಸ್‌ ತರಬೇತಿ ಶಾಲೆ, ರಾಜ್ಯ ಗುಪ್ತವಾರ್ತೆ, ಡಿಸಿಆರ್ ಇ, ಲೋಕಾಯುಕ್ತ, ಸೆಸ್ಕ್ ಜಾಗೃತ ದಳ, ಐಎಸ್ ಡಿ, 4ನೇ ಪಡೆ ಕೆಎಸ್ಐಎಸ್ ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದ ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಬೇರೆ ಇಲಾಖೆಗಳಿಗಿಂತ ಪೊಲೀಸ್ ಇಲಾಖೆ ಕೆಲಸವು ಭಿನ್ನವಾಗಿದೆ. ಇಲ್ಲಿ ಕೆಲಸಕ್ಕೆ ನಿರ್ದಿಷ್ಟ ಸಮಯ ಇರುವುದಿಲ್ಲ, ಎಲ್ಲಾ ಸಂದರ್ಭದಲ್ಲೂ ತಯಾರಿರಬೇಕು. ಇದರಿಂದ ಪೊಲೀಸರಿಗೆ ಆರೋಗ್ಯ ಸಮಸ್ಯೆಗಳೂ ಬೇಗ ಬರುತ್ತವೆ. ಸರ್ಕಾರ ಮತ್ತು ಹಿರಿಯ ಅಧಿಕಾರಿಗಳು ಪೊಲೀಸ್‌ ಸಿಬ್ಬಂದಿಯ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಆರೋಗ್ಯ ಭಾಗ್ಯ, ವಸತಿ ಯೋಜನೆಗಳು ಸಿಬ್ಬಂದಿಯ ಆತ್ಮಸ್ಥೈರ್ಯ ಹೆಚ್ಚಿಸಿದೆ. ಅದೇ ರೀತಿ ನಿವೃತ್ತರಾದವರ ಆರೋಗ್ಯ, ಕಲ್ಯಾಣದ ಬಗ್ಗೆಯೂ ಇಲಾಖೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಈ ವೇಳೆ ಅಶ್ವದಳ, ಸಿಎಆರ್, ಡಿಎಆರ್, ನಗರ ಸಂಚಾರ, ಮಹಿಳಾ ಪೊಲೀಸ್‌, ಕೆಎಸ್‌ಆರ್‌ ಪಿ ತುಕಡಿಗಳ ಶಿಸ್ತುಬದ್ಧ ಪಥಸಂಚಲನ ಮೂಲಕ ಮುಖ್ಯಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ಪಥಸಂಚಲನಕ್ಕೆ ಪೊಲೀಸ್‌ ಬ್ಯಾಂಡ್ ಗಳು ಸಾಥ್ ನೀಡಿದವು.

ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ, ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸೆಸ್ಕ್ ಜಾಗೃತ ದಳದ ಎಸ್ಪಿ ಸವಿತಾ ಹೂಗಾರ್, ಕೆಎಸ್‌ಆರ್‌ ಪಿ 5ನೇ ಪಡೆ ಮುಖ್ಯಸ್ಥ ಜನಾರ್ಧನ್‌, ಕೆಪಿಎ ಉಪ ನಿರ್ದೇಶಕ ಎಸ್‌.ಎಲ್‌. ಚೆನ್ನಬಸವಣ್ಣ, ಡಿಸಿಪಿಗಳಾದ ಹರ್ಷಾ ಪ್ರಿಯಂವದ, ಕೆ.ಎಸ್‌. ಸುಂದರ್‌ ರಾಜ್‌, ಮಾರುತಿ, ಸಿದ್ದನಗೌಡ ಪಾಟೀಲ್‌, ಹೆಚ್ಚುವರಿ ಎಸ್ಪಿಗಳಾದ ಎಲ್. ನಾಗೇಶ್‌, ಸಿ. ಮಲ್ಲಿಕ್‌, ಮಹದೇವಪ್ರಸಾದ್ ಮೊದಲಾದವರು ಇದ್ದರು.

ನಿವೃತ್ತ ಪೊಲೀಸರಿಗೆ ಸನ್ಮಾನ

ನಗರದ ಸಿಎಆರ್ ಕವಾಯತು ಮೈದಾನದಲ್ಲಿ ಗುರುವಾರ ನಡೆದ ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಪೊಲೀಸ್ ಇಲಾಖೆಯಿಂದ ನಿವೃತ್ತರಾದ ತಿರುಮಲೇಶ್‌ (ಪಿಎಸ್‌ಐ), ಕೆ.ರಮೇಶ್‌ (ಎಆರ್ ಎಸ್‌ಐ), ಎಂ.ರಾಜು (ಸಹಾಯಕ ಕಮಾಂಡೆಂಟ್‌), ಎಂ.ಎಸ್‌.ಪ್ರಸನ್ನ (ಎಆರ್‌ ಎಸ್‌ಐ), ಎಂ.ಕುಮಾರ್‌ (ಆಂಗ್ಲ ವಾದ್ಯಗಾರರು), ಎಚ್‌.ಎಸ್‌. ತಾಂಡವಮೂರ್ತಿ (ಸಹಾಯಕ ವಾದ್ಯೋಪಾಧ್ಯಾಯರು), ಚಂದ್ರಶೇಖರ್‌ ರಾವ್‌ (ಪಿಎಸ್‌ಐ), ಪಿ.ಸಿದ್ದರಾಜು (ಎಎಸ್‌ಐ), ಎಚ್‌.ಸಿದ್ದರಾಜು (ಎಎಸ್‌ಐ), ಬಿ.ಲೋಕೇಶ್‌ (ಆರ್ ಎಸ್‌ಐ), ಆರ್‌.ರಾಮೇಗೌಡ (ಎಆರ್‌ ಎಸ್‌ಐ), ಬಿ.ಸರಳ (ನಿವೃತ್ತ ಸಹಾಯಕ ಆಡಳಿತಾಧಿಕಾರಿ), ಕೆ.ಸಿ.ರೇಣುಕಾ (ಹಿರಿಯ ಶೀಘ್ರ ಲಿಪಿಗಾರರು), ಜಿ.ವಿ.ರಾಮಪ್ರಸಾದ್‌ (ಹಿರಿಯ ಶೀಘ್ರ ಲಿಪಿಗಾರರು), ಕೆ.ಬಿ.ಮಹದೇವಯ್ಯ (ಪಿಎಸ್‌ಐ), ಅಶ್ವತ್‌ ಮೂರ್ತಿ (ಪಿಎಸ್‌ಐ), ಶೇಷಾದ್ರಿ (ಸಿಎಚ್‌ಸಿ), ಬಿಳಿಗಿರಿ ರಂಗಯ್ಯ (ಎಎಚ್‌ ಸಿ), ಆರ್‌. ನಾಗರಾಜು (ಪಿಎಸ್‌ಐ), ಎಂ.ಇ.ರೇವಪ್ಪ (ನಿಸ್ತಂತು ಪಿಎಸ್‌ಐ), ಬಿ. ಪಂಪಾಪತಿ (ಸಿಎಚ್‌ ಸಿ), ಜಬಿಯುಲ್ಲಾ ಖಾನ್‌ (ಎಆರ್‌ ಎಸ್‌ಐ) ಅವರನ್ನು ಗೌರವಿಸಲಾಯಿತು.