ಸಾರಾಂಶ
ಗಣಿಗಾರಿಕೆ ಅಕ್ರಮದ ಬಗ್ಗೆ ಹಿರಿಯ ಸಚಿವರಾದ ಎಚ್.ಕೆ.ಪಾಟೀಲ್ ಪತ್ರ ಬರೆದಿದ್ದು, 2010-2015ರ ಅವಧಿಯಲ್ಲಿ ಏನಾಗಿದೆ ಎಂಬುದು ಜನರಿಗೆ ಗೊತ್ತಾಗಲೆಂಬುದು ಪಾಟೀಲರ ಉದ್ದೇಶವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ.
- ಎಚ್.ಕೆ.ಪಾಟೀಲ ಪತ್ರ ಹಿನ್ನೆಲೆ ಉಪ ಸಮಿತಿ ರಚಿಸಿ, ಪರಿಶೀಲನೆಗೆ ಕ್ರಮ: ಸಚಿವ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಗಣಿಗಾರಿಕೆ ಅಕ್ರಮದ ಬಗ್ಗೆ ಹಿರಿಯ ಸಚಿವರಾದ ಎಚ್.ಕೆ.ಪಾಟೀಲ್ ಪತ್ರ ಬರೆದಿದ್ದು, 2010-2015ರ ಅವಧಿಯಲ್ಲಿ ಏನಾಗಿದೆ ಎಂಬುದು ಜನರಿಗೆ ಗೊತ್ತಾಗಲೆಂಬುದು ಪಾಟೀಲರ ಉದ್ದೇಶವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ಅಕ್ರಮದಲ್ಲಿ ಹಿಂದಿನ ಸರ್ಕಾರ ಏನು ಮಾಡಿದೆ ಎನ್ನುವುದು ಹೊರಬರಬೇಕೆಂಬ ಉದ್ದೇಶ ಎಚ್.ಕೆ. ಪಾಟೀಲರದಾಗಿದೆ. ರಾಜ್ಯದಲ್ಲಿ 2006ರಿಂದ 2015 ರವೆರೆಗೆ ಆಗಿರುವ ಗಣಿ ಅಕ್ರಮದ ಬಗ್ಗೆ ಉಪ ಸಮಿತಿ ಮಾಡಿ, ಏಕ ವ್ಯಕ್ತಿ ಆಯೋಗದಿಂದ ಪರಿಶೀಲಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ಅಕ್ರಮ ಗಣಿಗಾರಿಕೆಯು ಹಳೆ ಸರ್ಕಾರದ ತಪ್ಪುಗಳು. ಈ ಬಗ್ಗೆ ಕೂಲಂಕುಷವಾಗಿ ಜನರಿಗೆ ತಿಳಿಸಲು ಕ್ರಮ ಕೈಗೊಳ್ಳಲಾಗಿದೆ. ಸಂಪುಟ ಸಭೆಯಲ್ಲೇ ಈ ವಿಚಾರದ ಬಗ್ಗೆ ತೀರ್ಮಾನಿಸಿದೆ. ಇದಕ್ಕಾಗಿ ಉಪ ಸಮಿತಿ ರಚಿಸಿ, ನ್ಯಾಯಾಧೀಶರನ್ನೂ ನೇಮಿಸಲಾಗಿದೆ. ದಾವಣಗೆರೆ ಮಾಜಿ ಸಂಸದ ಸಹ ಜೈಲಿಗೆ ಹೋಗಬೇಕಾಗಿತ್ತು. ಆದರೆ, ಮಾಜಿ ಸಂಸದನ ಪಾಪದ ತಮ್ಮ ಜೈಲಿಗೆ ಹೋಗಿ ಬಂದ. ಗಣಿ ಅಕ್ರಮದ ಬಗ್ಗೆ ಶೀಘ್ರದಲ್ಲೇ ತನಿಖೆ ನಡೆಯಲಿದೆ ಎಂದು ತಿಳಿಸಿದರು.ಕಾಂಗ್ರೆಸ್ ಸರ್ಕಾರದಲ್ಲಿ ಯಾರನ್ನೂ ಜಾತಿ ಆಧಾರದಲ್ಲಿ ಟಾರ್ಗೆಟ್ ಮಾಡಿಲ್ಲ. ಕೆ.ಎನ್.ರಾಜಣ್ಣ ವಿರುದ್ಧ ಕ್ರಮ ಹೈಕಮಾಂಡ್ ತೀರ್ಮಾನವಾಗಿದೆ. ರಾಜಣ್ಣನವರನ್ನು ಏಕಾಏಕಾ ವಜಾ ಮಾಡಬಾರದಿತ್ತು ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಜಿಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲ ರಾವ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಎಸ್.ಮಲ್ಲಿಕಾರ್ಜುನ, ಅಯೂಬ್ ಪೈಲ್ವಾನ್ ಇತರರು ಇದ್ದರು.- - -
(ಸಾಂದರ್ಭಿಕ ಚಿತ್ರ)