ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಿಂದೂಗಳ ರಕ್ಷಣೆ ಮಾಡುವಂತೆ ಒತ್ತಾಯಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಕಚೇರಿ ಎದುರು ಜಮಾವಣೆಗೊಂಡ ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು ಬಾಂಗ್ಲಾದೇಶದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ನ.25 ರಂದು ಢಾಕಾ ವಿಮಾನ ನಿಲ್ದಾಣದಲ್ಲಿ ಹಿಂದೂ ಸಂತ ಚಿನೋಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಿದ ನಂತರ ಬೃಹತ್ ಪ್ರತಿಭಟನೆಗಳು ಬಾಂಗ್ಲಾದೇಶವನ್ನು ಬೆಚ್ಚಿಬೀಳಿಸಿದೆ. ಬಂಧಿತ ಹಿಂದೂ ಸನ್ಯಾಸಿ ಚಿನ್ನೋಯ್ ಬಿಡುಗಡೆಗೆ ಒತ್ತಾಯಿಸಿ ಚಿತ್ತಗಾಂಗ್ನ ನ್ಯಾಯಾಲಯದ ಹೊರಗೆ ಜಮಾಯಿಸಿದ ಸಾವಿರಾರು ಜನರು ವಕೀಲ ಸೈಫುಲ್ ಇಸ್ಲಾಂ ಅಲಿಫ್ ಅವರನ್ನು ಕೊಂದಿದ್ದಾರೆ. ನಂತರ ಚಿನೋಯ್ ಕೃಷ್ಣ ದಾಸ್ ಪ್ರಭು ಅವರಿಗೆ ಜಾಮೀನು ನಿರಾಕರಿಸಿ ದೇಶದ್ರೋಹದ ಆರೋಪದ ಮೇಲೆ ಜೈಲಿಗೆ ಕಳುಹಿಸಿರುವ ಕ್ರಮವನ್ನು ಖಂಡಿಸಿದರು.ಬಾಂಗ್ಲಾದೇಶದಲ್ಲಿ ಹಿಂದೂಗಳು ಅತಿ ದೊಡ್ಡ ಅಲ್ಪಸಂಖ್ಯಾತರ ಗುಂಪಾಗಿದೆ. ಜನಸಂಖ್ಯೆ ಸುಮಾರು ಶೇ. 8 ರಷ್ಟಿದ್ದಾರೆ. ಚಿತ್ತಗಾಂಗ್ನಲ್ಲಿ ದೇವಸ್ಥಾನವನ್ನು ಸುಟ್ಟು ಹಾಕಲಾಗಿದೆ. ಈ ಹಿಂದೆ ಅಹ್ಮದೀಯ ಸಮುದಾಯದ ಮಸೀದಿಗಳು, ದೇಗುಲಗಳು, ಚರ್ಚ್ ಗಳು, ಮರಗಳು ಮತ್ತು ಮನೆಗಳ ಮೇಲೆ ದಾಳಿ, ಧ್ವಂಸ, ಲೂಟಿ ಮತ್ತು ಬೆಂಕಿ ಹಚ್ಚಲಾಗಿತ್ತು. ಶಾಂತಿಯುತ ಸಭೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಸೇರಿದಂತೆ ಹಿಂದೂಗಳು ಹಾಗೂ ಎಲ್ಲಾ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು ನಾವು ಬಾಂಗ್ಲಾದೇಶದ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಶೀಘ್ರ ಭಾರತ ಸರ್ಕಾರದ ರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಗಳು ಅಲ್ಲಿನ ಹಿಂದೂಗಳಿಗೆ ರಕ್ಷಣೆ ನೀಡಲು ಬಾಂಗ್ಲಾದೇಶಕ್ಕೆ ಆಗ್ರಹಿಸುವಂತೆ ಒತ್ತಾಯಿಸಿ ತಾಲೂಕು ಆಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಎಸ್.ಪ್ರಕಾಶ್, ಮಾಜಿ ಸದಸ್ಯ ಕೃಷ್ಣಪ್ಪ, ಚಂದನ್, ಬೆಳಗೊಳ ಸುನಿಲ್, ವಕೀಲರಾದ ರವೀಶ್, ಬಾಲು, ಮುಖಂಡರಾದ ಹೇಮಂತ್ಕುಮಾರ್, ಸುಧಾಕರ್, ಅಭಿಷೇಕ್, ಶಂಕರ್, ಹೊಸ ಆನಂದೂರು ಬಸವರಾಜು ಸೇರಿದಂತೆ ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು ಇದ್ದರು.