ಕನ್ನಡಪ್ರಭ ವಾರ್ತೆ ಯಲ್ಲಾಪುರ
ಆರ್ಎಸ್ಎಸ್ನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಒಬ್ಬನೇ ನಾಶಪಡಿಸಬಹುದು. ಅದು ಆರ್ಎಸ್ಎಸ್ ಸ್ವಯಂ ಸೇವಕನಿಂದ ಮಾತ್ರ. ಆತ ಸ್ವಾರ್ಥಕ್ಕೆ ಬಲಿಯಾದರೆ ಮಾತ್ರ ಸಂಘದ ನಾಶವಾಗಲು ಸಾಧ್ಯ. ಹೀಗಾಗಿ, ಸಂಘದ ಸ್ವಯಂಸೇವಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಡಾ. ರವೀಂದ್ರ ಹೇಳಿದರು.ಪಟ್ಟಣದ ವೇದವ್ಯಾಸ ಸಭಾಭವನದಲ್ಲಿ ಭಾನುವಾರ ನಡೆದ ಗುರುಪೂಜಾ ಉತ್ಸವದ ಮುಖ್ಯ ವಕ್ತಾರರಾಗಿ ಮಾತನಾಡಿದರು.
ಸಂಘದಲ್ಲಿ ಆರು ಕಾರ್ಯಕ್ರಮ ನಡೆಯುತ್ತದೆ. ಇವುಗಳಲ್ಲಿ ಗುರುಪೂಜಾ ಉತ್ಸವಕ್ಕೆ ವಿಶೇಷ ಸ್ಥಾನವಿದೆ. ಇದು ಸಂಘ ಕೇಂದ್ರಿಕೃತ ಉತ್ಸವ. ಉಳಿದದ್ದು ಸಮಾಜ ಕೇಂದ್ರೀಕೃತ ಉತ್ಸವ. ಇಲ್ಲಿ ಭಗವಾಧ್ವಜವೇ ಗುರುವಾಗಿದೆ ಎಂದರು.ಆರ್.ಎಸ್.ಎಸ್. ಹೆಸರಿನಲ್ಲಿ ಯಾವುದೇ ಆಸ್ತಿಯೂ ಇಲ್ಲ. ಇರುವ ಕಟ್ಟಡಗಳೆಲ್ಲವೂ ಸ್ಥಳೀಯ ಟ್ರಸ್ಟ್ ಅಡಿಯಲ್ಲಿ ಇವೆ. ಅವು ರಜಿಸ್ಟರ್ ಆಗಿದ್ದು, ಸರಕಾರದ ಅಡಿಟ್ ನಡೆಯುತ್ತದೆ. ಕೇವಲ ಜಿಲ್ಲಾ ಮಟ್ಟದಲ್ಲಿ ಗುರುದಕ್ಷಿಣೆಯ ಲೆಕ್ಕ ಇಡಲು ಬ್ಯಾಂಕ್ ಖಾತೆ ಮಾತ್ರ ಇದೆ ಎಂದರು.ವೈ.ಟಿ.ಎಸ್.ಎಸ್. ಶಿಕ್ಷಕ ರವೀಂದ್ರ ಕೋಮಾರ ಅತಿಥಿಗಳಾಗಿ ಆಗಮಿಸಿದ್ದರು. ಸ್ವಯಂ ಸೇವಕ ಶಿವಪ್ರಸಾದ ನಿರೂಪಿಸಿದರು. ಪ್ರಸನ್ನ ಇಂಗಳೆ ವಂದಿಸಿದರು.ಆ.೧, ೨ರಂದು ಸಸ್ಯ ಸಂಭ್ರಮ, ಸಸ್ಯ ಪ್ರದರ್ಶನ, ಮಾರಾಟ:
ಯಲ್ಲಾಪುರ ಪಟ್ಟಣದ ಎಪಿಎಂಸಿ ಆವಾರದಲ್ಲಿರುವ ಶ್ರೀಮಾತಾ ರೈತ ಉತ್ಪಾದಕ ಕಂಪನಿಯ ನೂತನ ವ್ಯಾಪಾರಿ ಅಂಗಳದಲ್ಲಿ (ದುರ್ಗಾದೇವಿ ರೈಸ್ ಮಿಲ್ ಹತ್ತಿರ) ಆ. ೧ ಮತ್ತು ೨ರಂದು ಸಸ್ಯ ಸಂಭ್ರಮ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ, ಮಲೆನಾಡಿನ ತಿಂಡಿಗಳ ಪ್ರಾತ್ಯಕ್ಷಿಕೆ ಮತ್ತು ಮಾರಾಟ ಮುಂತಾದ ವಿಶೇಷ ಕಾರ್ಯಕ್ರಮಗಳನ್ನು ೨ ದಿನಗಳ ಕಾಲ ಹಮ್ಮಿಕೊಂಡಿದ್ದೇವೆ ಎಂದು ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜಾಹ್ನವಿ ಭಟ್ಟ ಮಣ್ಮನೆ ಹೇಳಿದರು.ಭಾನುವಾರ ಪಟ್ಟಣದ ಸಂಸ್ಕೃತಿ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ವರ್ಷ ೧೦ನೇ ವರ್ಷದ ಕಾರ್ಯಕ್ರಮವಾಗಿದೆ. ಕೃಷಿಗೆ ಪೂರಕವಾದ, ಮಹಿಳೆಯರಿಗೆ ಸ್ವ-ಉದ್ಯೋಗ ಬೆಳೆಸುವ ದೃಷ್ಟಿಯಿಂದ ನಮ್ಮ ತ್ರಿಪುರಾಂಬಿಕಾ ಒಕ್ಕೂಟ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮಹಿಳೆಯರಿಗೆ ಹಲವು ರೀತಿಯ ಸ್ಪರ್ಧೆಗಳು, ಬಹುಮಾನ, ಪ್ರೋತ್ಸಾಹ ನೀಡುವ ಉದ್ದೇಶವಿದೆ ಎಂದರು.೧ ರಂದು ಬೆಳಗ್ಗೆ ೧೦ ಗಂಟೆಗೆ ಸಸ್ಯ ಸಂಭ್ರಮವನ್ನು ಸಹಾಯಕ ಉಪಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಉದ್ಘಾಟಿಸುವರು. ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಅಧ್ಯಕ್ಷತೆ ವಹಿಸುವರು. ಅಲ್ಲದೇ, ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಗೀತಾ ರಾಜಾರಾಮ ವೈದ್ಯ ಇವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷೆ ಸಂಧ್ಯಾ ಕೊಂಡದಕುಳಿ, ಕಾರ್ಯದರ್ಶಿ ಗಾಯತ್ರಿ ಬೋಳಗುಡ್ಡೆ, ನಿರ್ದೇಶಕಿ ಮುಕ್ತಾ ಶಂಕರ ಉಪಸ್ಥಿತರಿದ್ದರು.