ಸಾರಾಂಶ
ಪೂರ್ವಭಾವಿ ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿಕನ್ನಡಪ್ರಭ ವಾರ್ತೆ ಯಲಬುರ್ಗಾ
ಕೊಪ್ಪಳ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಜನತೆ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ತಮ್ಮ ಮತದಾನದ ಹಕ್ಕನ್ನು ಮುಕ್ತವಾಗಿ ಚಲಾಯಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಟಿ.ಎಸ್. ರುದ್ರೇಶಪ್ಪ ಹೇಳಿದರು.ಪಟ್ಟಣದ ಕಂದಾಯ ಭವನದಲ್ಲಿ ಮಂಗಳವಾರ ೨೦೨೪ರ ೮-ಕೊಪ್ಪಳ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಸಿದ್ಧತೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಮಾದರಿ ನೀತಿಸಂಹಿತೆ ಜಾರಿಗೆ ಬಂದಿದ್ದು ಪ್ರತಿಯೊಬ್ಬರೂ ಚುನಾವಣಾ ನಿಯಮಗಳನ್ನು ಪರಿಪಾಲನೆ ಮಾಡಬೇಕು. ಚುನಾವಣೆಯಲ್ಲಿ ಹೆಚ್ಚಿನ ಮತದಾನಕ್ಕಾಗಿ ಎಲ್ಲರಲ್ಲಿ ಜಾಗೃತಿ ಮೂಡಿಸಬೇಕು ಎಂದರು.ಚುನಾವಣಾ ವೇಳೆ:
ಲೋಕಸಭಾ ಚುನಾವಣಾ ಹಿನ್ನೆಲೆ ಏಪ್ರಿಲ್ ೧೨ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಏ. ೧೯ಕ್ಕೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ, ಏ. ೨೦ ನಾಮಪತ್ರ ಪರಿಶೀಲನೆ, ೨೨ ಉಮೇದುವಾರಿಕೆ ಹಿಂತೆಗೆದುಕೊಳ್ಳುವ ಕೊನೆಯ ದಿನ, ಮೇ ೦೭ರಂದು ಮತದಾನ ನಡೆಯಲಿದೆ. ಜೂ. ೪ರಂದು ಮತ ಎಣಿಕೆ ಹಾಗೂ ಜೂನ್ ೬ಕ್ಕೆ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ.ಕ್ಷೇತ್ರದಲ್ಲಿ ಒಟ್ಟು ೨೫೬ ಮತಗಟ್ಟೆಗಳ ಇವೆ. ಇದರಲ್ಲಿ ೧೧೩೮೧೫ ಜನ ಪುರುಷ, ೧೧೪೦೬೩ ಮಹಿಳೆಯರು, ೫ ಜನ ಇತರೆ ಸೇರಿದಂತೆ ಒಟ್ಟು ೨೨೭೮೮೩ ಮತದಾರರಿದ್ದಾರೆ. ಈ ಚುನಾವಣೆಗಾಗಿ ಒಟ್ಟು ೧೪ ಅಧಿಕಾರಿಗಳನ್ನು ನಿಯೋಜನೆಗೊಳಿಸಲಾಗಿದೆ ಎಂದು ಹೇಳಿದರು.
ಕ್ಷೇತ್ರದ ಬಂಡಿಕ್ರಾಸ್, ಬನ್ನಿಕೊಪ್ಪ, ಸಂಕನೂರ ಕ್ರಾಸ್ನಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಇವುಗಳಿಗೆ ತಾಲೂಕು ಮಟ್ಟದ ನೋಡಲ್ ಅಧಿಕಾರಿಯಾಗಿ ತಾಪಂ ಇಒ ಸಂತೋಷ ಪಾಟೀಲರನ್ನು ನೇಮಿಸಲಾಗಿದೆ. ಪಟ್ಟಣದ ಕಂದಾಯ ಸಭಾಭವನದಲ್ಲಿ ಸಹಾಯಕ ಚುನಾವಣಾಧಿಕಾರಿಗಳ ಕಚೇರಿ ತೆರೆಯಲಾಗಿದೆ ಎಂದರು.ಮಾದರಿ ನೀತಿಸಂಹಿತೆ ಜಾರಿಗೊಂಡಿದ್ದು, ಎಲ್ಲ ರಾಜಕೀಯ ಪಕ್ಷಗಳು ನಿಯಮ ಪಾಲಿಸಬೇಕು. ಜತೆಗೆ ಚುನಾವಣಾ ಸಭೆ, ಸಮಾರಂಭ ಮಾಡಲು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಅಲ್ಲದೇ ಯಾವುದೇ ಆಸೆ ಆಮಿಷ ಒಡ್ಡಬಾರದು ಎಂದು ಸೂಚನೆ ನೀಡಿದರು. ಸಭೆ ನಡೆಸಲು ೪೮ ಗಂಟೆಗಳ ಪೂರ್ವದಲ್ಲೇ ಆನ್ಲೈನ್ ಮೂಲಕ ಸುವಿಧಾ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬಹುದು. ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಸಲು ಸ್ಥಳೀಯ ಸಂಸ್ಥೆಗಳಿಗೆ ಶುಲ್ಕ ಪಾಲಿಸಿ ಅನುಮತಿ ಪಡೆಯಬೇಕು ಎಂದು ರಾಜಕೀಯ ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು.
ಚುನಾವಣಾ ಪ್ರಚಾರಕ್ಕೆ ಧಾರ್ಮಿಕ ಕೇಂದ್ರ ಬಳಕೆ ಮಾಡಬಾರದು, ಜಾತಿ ಧರ್ಮದ ಹೆಸರಿನ ಆಧಾರ ಮೇಲೆ ಪ್ರಚಾರಕ್ಕೆ ಅವಕಾಶವಿಲ್ಲ, ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಅನುಮತಿ ಪಡೆಯಬೇಕು ಎಂದರು.ಈ ಸಂದರ್ಭದಲ್ಲಿ ಯಲಬುರ್ಗಾ ತಹಸೀಲ್ದಾರ್ ಬಸವರಾಜ ತೆನ್ನೆಳ್ಳಿ, ಕುಕನೂರ ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಚುನಾವಣಾ ಸಿಬ್ಬಂದಿ ವಿಜಯಕುಮಾರ ಗುಂಡೂರು ಹಾಗೂ ರಾಜಕೀಯ ನಾನಾ ಪಕ್ಷಗಳ ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ಸುಧೀರ್ ಕೊರ್ಲಳ್ಳಿ, ಮಾರುತಿ ಗಾವರಾಳ, ಬಸವರಾಜ ಗುಳಗುಳಿ, ರವಿ ಕಲಬುರಗಿ, ಶರಣು ಶೆಟ್ಟರ್ ಮತ್ತಿತರರಿದ್ದರು.