ಮಹಿಳಾ ಸಂಘಟನೆಗಳು ಗಟ್ಟಿಯಾಗಲಿ

| Published : Dec 30 2023, 01:15 AM IST

ಸಾರಾಂಶ

ಸಿದ್ದಾಪುರ ತಾಲೂಕಿನಲ್ಲಿ ಕೈಗಾರಿಕಾ ವಸಾಹತು ಪ್ರದೇಶ ನಿರ್ಮಿಸಿ ಉದ್ಯೋಗಾವಕಾಶ ದೊರೆಯಲಿವೆ. ಸೂಕ್ತ ಸ್ಥಳದಲ್ಲಿ ಗಾರ್ಮೆಂಟ್ಸ್ ಸ್ಥಾಪಿಸುವ ಪ್ರಯತ್ನ ನಡೆದಿದೆ.

ಸಿದ್ದಾಪುರ:

ಮಹಿಳಾ ಸಂಘಟನೆಗಳು ಗಟ್ಟಿಯಾಗಬೇಕು. ಸಂಘ-ಸಂಸ್ಥೆಗಳ ಮೂಲಕ ಮಹಿಳೆಯರ ಸ್ವಾವಲಂಬನೆ ಹೆಚ್ಚುತ್ತಿದೆ ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಶಿರಸಿಯ ಮನುವಿಕಾಸ ಸಂಸ್ಥೆ ಮತ್ತು ಇಡಲಗಿ ಫೌಂಡೇಶನ್‌ನಿಂದ ಇಲ್ಲಿನ ಶಂಕರಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಅತಿಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಬದುಕುವ ದಾರಿ ಹೇಳಿಕೊಡುವವರನ್ನು ಯಾರೂ ಮರೆಯಬಾರದು. ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಣ್ಣ ನಾಯ್ಕ, ರಾಜ್ಯದ ಕಾಂಗ್ರೆಸ್ ಸರ್ಕಾರ ಮಹಿಳೆಯರನ್ನು ಸಶಕ್ತರನ್ನಾಗಿಸಲು ಜನಪರ ಯೋಜನೆ ಅನುಷ್ಠಾನಗೊಳಿಸಿದ್ದು, ತಾಲೂಕಿನಲ್ಲಿ ಗಾರ್ಮೆಂಟ್ಸ್ ಉದ್ಯಮ ತೆರೆಯಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಲಾಗುವುದು. ಆರ್ಥಿಕವಾಗಿ ಸಬಲವಾಗಿದ್ದರೆ ಮಾತ್ರ ಸಂಸಾರವನ್ನು ಸುಸೂತ್ರವಾಗಿ ನಡೆಸಲು ಸಾಧ್ಯವಾಗುತ್ತಿದೆ. ಸರ್ಕಾರವು ಸಹ ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ ಪ್ರೋತ್ಸಾಹ ನೀಡುತ್ತಿದೆ. ಜತೆಗೆ ಮನುವಿಕಾಸ ಸಂಸ್ಥೆ ಸಹ ಮಹಿಳೆಯರ ಸ್ವಾವಲಂಬನೆಗೆ ದಾರಿ ಮಾಡಿಕೊಡುತ್ತಿರುವುದು ಸ್ತ್ರೀಯರಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು. ತಾಲೂಕಿನಲ್ಲಿ ಕೈಗಾರಿಕಾ ವಸಾಹತು ಪ್ರದೇಶ ನಿರ್ಮಿಸಿ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುವುದು. ಸೂಕ್ತಸ್ಥಳದಲ್ಲಿ ಗಾರ್ಮೆಂಟ್ಸ್ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ತಾಲೂಕಿನಲ್ಲಿ ಮಳೆ ಕಡಿಮೆಯಾಗಿದ್ದರಿಂದ ಬರದ ಬವಣೆ ಎದುರಾಗುವ ಹಿನ್ನೆಲೆಯಲ್ಲಿ ಎಲ್ಲ ತಾಯಂದಿರು ನೀರನ್ನು ಮಿತವಾಗಿ ಬಳಸಿ ಎಂದರು.

ಪ್ರಮುಖರಾದ ಕೆ.ಜಿ. ನಾಗರಾಜ, ಶಶಿಭೂಷಣ ಹೆಗಡೆ, ರವಿ ಹೆಗಡೆ ಹೂವಿನಮನೆ, ವಿ.ಎನ್. ನಾಯ್ಕ ಬೇಡ್ಕಣಿ ಮಾತನಾಡಿದರು. ವಸಂತ ನಾಯ್ಕ ಮನಮನೆ, ತಾಲೂಕು ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ, ಪ್ರಗತಿಮಿತ್ರ ಸೌಹಾರ್ದ ಸಿಇಒ ವಿನಯ ನಾಯ್ಕ, ಧನ್ವಂತರಿ ಆಯುರ್ವೇದ ಕಾಲೇಜಿನ ಡಾ. ರೂಪಾ ಭಟ್, ಉಷಾ ಪ್ರಶಾಂತ ನಾಯ್ಕ, ಉಮೇಶ ನಾಯ್ಕ ಕಡಕೇರಿ, ಪ್ರಶಾಂತ ನಾಯ್ಕ ಹೊಸೂರ ಉಪಸ್ಥಿತರಿದ್ದರು. ಮನು ವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕವಿಯತ್ರಿ ಉಷಾ ಪ್ರಶಾಂತ ನಾಯ್ಕ ಮನುವಿಕಾಸ ಸಂಸ್ಥೆ ಕುರಿತು ಸ್ವರಚಿತ ಕವನ ವಾಚಿಸಿದರು.