ಅಧಿಕಾರಿಗಳು, ಸಾರ್ವಜನಿಕರ ಮಧ್ಯೆ ಸಮನ್ವಯವಿರಲಿ: ಶಾಸಕ ಭೀಮಣ್ಣ ನಾಯ್ಕ

| Published : Jun 30 2024, 12:49 AM IST

ಸಾರಾಂಶ

ಜನರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಹಕ್ಕಿದ್ದು ಅದಕ್ಕೆ ಪರಿಹಾರ ಒದಗಿಸುವುದು ಸರಕಾರದ ಕರ್ತವ್ಯ. ಸರಕಾರಿ ಕಾರ್ಯಕ್ರಮಗಳು ಕೇವಲ ಅಧಿಕಾರಿಗಳದ್ದು ಆಗಬಾರದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ಸಮನ್ವಯವಿರಬೇಕು. ಜನರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಹಕ್ಕಿದ್ದು ಅದಕ್ಕೆ ಪರಿಹಾರ ಒದಗಿಸುವುದು ಸರಕಾರದ ಕರ್ತವ್ಯ. ಆ ಕುರಿತಾಗಿ ಜನಸ್ಪಂದನ ಸಭೆಯ ಮೂಲಕ ಅವಕಾಶ ಒದಗಿಸಲಾಗುತ್ತಿದೆ. ಸರಕಾರಿ ಕಾರ್ಯಕ್ರಮಗಳು ಕೇವಲ ಅಧಿಕಾರಿಗಳದ್ದು ಆಗಬಾರದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲೂಕು ಆಡಳಿತ ಹಾಗೂ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಶಂಕರಮಠದಲ್ಲಿ ಆಯೋಜಿಸಿದ್ದ ಜನಸ್ಪಂದನ ಸಭೆ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರು ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಮಾತ್ರ ಸಮಸ್ಯೆಗಳ ಬಗ್ಗೆ ಅರಿವು ಮೂಡಲು ಸಾಧ್ಯ. ಸರಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂಥವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಕಚೇರಿಗೆ ಬಂದು ಸಮಸ್ಯೆ ಹೇಳಿಕೊಳ್ಳುವ ಜನರಿಗೆ ಅಧಿಕಾರಿಗಳು, ಸಿಬ್ಬಂದಿ ಸಮರ್ಪಕವಾಗಿ ಸ್ಪಂದಿಸಬೇಕು. ಅನಾವಶ್ಯಕವಾಗಿ ಅಲೆದಾಡಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಹುದಿನಗಳಿಂದ ಮನವಿ ಸಲ್ಲಿಸಿದರೂ ಸಮಸ್ಯೆ ಬಗರಹರಿಸದ ಪಟ್ಟಣ ಪಂಚಾಯತ್ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದಾಗ ಸಂಬಂಧಿಸಿದ ಪಪಂ ಅಧಿಕಾರಿಯನ್ನು ಹಾಗೂ ದೊಡ್ಮನೆ ಪಿಡಿಒ ಅವರನ್ನು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.

ತಾಲೂಕಿನ ವಿವಿಧ ಭಾಗಗಳ ಸಾರ್ವಜನಿಕರು ರಸ್ತೆ, ಕಾಲುಸಂಕ, ಚರಂಡಿ ಅವ್ಯವಸ್ಥೆ, ವಿದ್ಯುತ್ ವ್ಯತ್ಯಯ, ಶಾಲಾ ಕಟ್ಟಡ, ಸಾರಿಗೆ ವ್ಯವಸ್ಥೆ ಮುಂತಾದ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು. ಅವರ ಅಹವಾಲುಗಳನ್ನು ಖುದ್ದಾಗಿ ಆಲಿಸಿದ ಭೀಮಣ್ಣ ನಾಯ್ಕ ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಿದರು.

ತಹಸೀಲ್ದಾರ್‌ ಎಂ.ಆರ್. ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ತಾಪಂ ಆಡಳಿತಾಧಿಕಾರಿ ಪಿ. ಬಸವರಾಜ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಎ.ಸಿ.ಎಫ್‌. ಪ್ರವೀಣ ಬಸರೂರು, ಸಿಪಿಐ ಕುಮಾರ ಕೆ., ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ ನಾಯ್ಕ ಉಪಸ್ಥಿತರಿದ್ದರು.

ಉಪ ತಹಸೀಲ್ದಾರ್‌ ಶ್ಯಾಮಸುಂದರ್‌ ಜಿ.ಎಲ್. ನಿರೂಪಿಸಿದರು. ಸಭೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಅರ್ಜಿಗಳಿಗೆ ಸೂಕ್ತ ಪರಿಹಾರ ಒದಗಿಸಲಾಯಿತು.