ಚೇಳೂರು: ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಒಳ ಮೀಸಲಾತಿ ವರ್ಗೀಕರಣದಿಂದ ಬಂಜಾರ ಸಮುದಾಯಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು ಎಂದು ಚಿತ್ರದುರ್ಗದ ಬಂಜಾರ ಪೀಠದ ಪೂಜ್ಯ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಪಟ್ಟಣದರೆಚ್.ವಿ.ಎನ್. ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಂಬಾಣಿ ಗೋರ್ ಬಂಜಾರ ಧರ್ಮಗುರು ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ 287ನೇ ಜಯಂತ್ಯುತ್ಸವ ಹಾಗೂ ನೂತನ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.ನಮ್ಮ ಸಮುದಾಯದ ಅನೇಕ ಕುಟುಂಬಗಳು ಇಂದಿಗೂ ಆರ್ಥಿಕವಾಗಿ ಹಿಂದುಳಿದಿದ್ದು ಜೀವನೋಪಾಯಕ್ಕಾಗಿ ವಲಸೆ ಹೋಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ಹಳೆಯ ಮೀಸಲಾತಿ ಪದ್ಧತಿಯನ್ನೇ ಮುಂದುವರಿಸಬೇಕು. ಒಳ ಮೀಸಲಾತಿಯ ಕುರಿತು ಜಾಗೃತಿ ಮೂಡಿಸಲು ಜ. 24 ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ''''''''ಬೆಂಗಳೂರು ಚಲೋ'''''''' ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಕರೆ ನೀಡಿದರು.ಬಳಿಕ ಸಂಘದ ನೂತನ ಅಧ್ಯಕ್ಷ ಹಾಗೂ ವಕೀಲ ಭೀಮ ನಾಯಕ್ ಮಾತನಾಡಿ, ಗಡಿ ಭಾಗದ ತಾಂಡಾಗಳ ಜನರ ಶೈಕ್ಷಣಿಕ ಮತ್ತು ಆರ್ಥಿಕ ಏಳಿಗೆಯೇ ನಮ್ಮ ಸಂಘದ ಪ್ರಮುಖ ಗುರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಗಾಯಕರಾದ ಗೋಪಿ ನಾಯಕ ಹಾಗೂ ಉಮೇಶ್ ಸಾಂಸ್ಕೃತಿಕ ಮೆರಗು ನೀಡಿದರು. ವೇದಿಕೆಯಲ್ಲಿ ರಂಗೇ ನಾಯಕ್, ಮುರಳಿನಾಯಕ್, ನಾನೊ ನಾಯಕ್, ವಿನೋದ್ ಕುಮಾರ್ ಹೆಚ್, ಮಹೇಶ್ ನಾಯಕ್ ಬಿ, ಸತ್ಯಪ್ಪ ನಾಯಕ್, ಶ್ರೀರಾಮ ನಾಯಕ್, ಲಚ್ಚಾ ನಾಯಕ್, ಶಂಕರ ನಾಯಕ್, ಮುರಳಿ ನಾಯಕ್ ಸೇರಿದಂತೆ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.