ನಿರುದ್ಯೋಗಿ ಯುವಕರು ಕೌಶಲ್ಯ ತರಬೇತಿ ಪಡೆದುಕೊಳ್ಳಲಿ: ನರಸಿಂಹಮೂರ್ತಿ

| Published : Feb 09 2024, 01:47 AM IST

ಸಾರಾಂಶ

ನಿರುದ್ಯೋಗಿ ಯುವಜನರು ಕೌಶಲ್ಯ ತರಬೇತಿ ಪಡೆದುಕೊಳ್ಳುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರು

ನಿರುದ್ಯೋಗಿ ಯುವಜನರು ಕೌಶಲ್ಯ ತರಬೇತಿ ಪಡೆದುಕೊಳ್ಳುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಸ್ಲಂ ಬೋರ್ಡ್‌ನಿಂದ ದಿಬ್ಬೂರಿನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಕೌಶಲ್ಯ ತರಬೇತಿ ಪಡೆದ ಯುವಜನರಿಗೆ ಪ್ರಮಾಣಪತ್ರ ವಿತರಣಾಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರ ನಿರುದ್ಯೋಗಿ ಯುವಕ ಯುವತಿಯರನ್ನು ಸಮಾಜಮುಖಿಯಾಗಿ ಬದುಕಲು ಮತ್ತು ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಇಂತಹ ಅವಕಾಶಗಳನ್ನು ಯುವಜನರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪ್ರಸಕ್ತ ಸಂದರ್ಭದಲ್ಲಿ ಜೀವನ ಮತ್ತು ಕುಟುಂಬದ ಜವಾಬ್ದಾರಿ ಯುವ ಜನರನ್ನು ಒತ್ತಡಕ್ಕೆ ಸಿಲುಕಿಸುವ ಸಾಂದರ್ಭಿಕತೆ ಹೆಚ್ಚಾಗಿದೆ ಎಂದರು.

ಹೆಚ್ಚು ಶಿಕ್ಷಣ ಮತ್ತು ಯುವಜನರ ಸರ್ವತ್ತೋಮುಖ ಅಭಿವೃದ್ಧಿ ಹೊಂದುವ ಕಡೆ ಗಮನಹರಿಸಬೇಕು. ಅದರಲ್ಲು ಸ್ಲಂಗಳಲ್ಲಿನ ಯುವಜನರ ಬಗ್ಗೆ ವ್ಯವಸ್ಥೆ ಕೀಳಾಗಿ ಕಾಣುವ ಮತ್ತು ಸೀಮಿತತೆಗೆ ತಳ್ಳುವಂತಹ ಮನಸ್ಥಿತಿಗಳಿಗೆ ಉತ್ತರಕೊಡಬೇಕೆಂದರೆ, ಯುವಜನರು ಜಾಗೃತರಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ 6ನೇ ವಾರ್ಡ್ ಮುಖಂಡ ಮನೋಹರ್‌ಗೌಡ, ದಿಬ್ಬೂರು ನಾಗರಿಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ಸ್ವಚ್ಛತೆ ಮುಖ್ಯವಾಗುತ್ತದೆ. ಸ್ವಚ್ಛತೆಗೆ ಹೆಚ್ಚು ಹೊತ್ತು ಕೊಡಬೇಕಾಗುತ್ತದೆ. ದಿಬ್ಬೂರಿನಲ್ಲಿ ನಿರುದ್ಯೋಗ ಯುವಕರು ಮತ್ತು ಮಹಿಳೆಯರು ಅತೀ ಹೆಚ್ಚಿನ ಪ್ರಮಾಣದಲ್ಲಿದ್ದು ನಿಮ್ಮಜೀವನದಲ್ಲಿ ದುಡಿಮೆಯ ಉಳಿತಾಯದಲ್ಲಿ ಶೂನ್ಯವಾಗುತ್ತಿದೆ. ಆದ್ದರಿಂದ ದುಡಿಮೆಯ ಆರ್ಧ ಭಾಗ ಉಳಿತಾಯ ಮಾಡಿ ನೀವು ನಿಮ್ಮ ಮಕ್ಕಳು ಉತ್ತಮ ನಾಗರಿಕರಾಗಬಹುದು, ಕೊಳಗೇರಿ ಅಭಿವೃದ್ಧಿ ಮಂಡಳಿ ನಿಮ್ಮಂತ ಯುವಜನರಿಗೆ ಕೌಶಲ್ಯತರಬೇತಿ ತಂದು ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿವೇಕಾನಂದಜಿ ವಾರ್ಕರ್‌, ಎಇ ಚೇತನ್‌ಕುಮಾರ್‌ ಯುವಜನರನ್ನುದ್ದೇಶಿಸಿ ಮಾತನಾಡಿದರು, ರಕ್ಷಿತ್ ಮತ್ತು ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ಚಕ್ರಪಾಣಿ, ಕಣ್ಣನ್, ಕೃಷ್ಣಮೂರ್ತಿ, ರಾಜು, ಸಿದ್ದಪ್ಪ, ಮುಬಾರಕ್, ಜಿಜಿವಿ ಸಂಸ್ಥೆಯ ದಯಾನಂದ್, ಶಿವಪ್ಪ, ಕುಮಾರ್‌ ಹಾಗೂ ಮಾದಿಗ ದಂಡೋರದ ಆಟೋ ಶಿವರಾಜ್, ಜಗದೀಶ್, ಎಸ್‌ಐಟಿ ಮುಖಂಡರಾದ ಬಿ.ಆರ್‌. ವೆಂಕಟೇಶ್, ವೈದ್ಯರಾದ ಜಯಂತ್, ಸಂಜಯ್‌ ಉದ್ದಾನಾಯಕ್, ಹರೀಶ್ ಮುಂತಾದವರು ಪಾಳ್ಗೊಂಡಿದ್ದರು.