ಸ್ವಾವಲಂಭಿಗಳಾಗಿ ಆರ್ಥಿಕವಾಗಿ ಕುಟುಂಬಕ್ಕೆ ಆಧಾರವಾಗಬೇಕು

ಗದಗ: ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಮುನ್ನಡೆ ಸಾಧಿಸಬೇಕೆಂದು ಮಹೇಶ್ವರಿ ವಿವಿದೋದ್ದೇಶಗಳ ಮಹಿಳಾ ಮಂಡಳದ ಅಧ್ಯಕ್ಷೆ ಜಯಶ್ರೀ ಹಿರೇಮಠ ಹೇಳಿದರು.

ಅವರು ನಗರದ ಮಹೇಶ್ವರಿ ವಿವಿದೋದ್ದೇಶಗಳ ಮಹಿಳಾ ಮಂಡಳದಲ್ಲಿ ರಿಲಾಯನ್ಸ್ ಫೌಂಡೇಶನ್ ಹಾಗೂ ಔಟ್‌ರಿಚ್ ಜಿಲ್ಲಾ ಸಂಸ್ಥೆಯಿಂದ ಗ್ರಾಮೀಣ ಪ್ರದೇಶದ ನಿರುದ್ಯೋಗ ಮಹಿಳೆಯರಿಗಾಗಿ ಏರ್ಪಡಿಸಿದ್ದ ವಿಸ್ತರಣಾ ಕೇಡರ್‌ನ ಸಾಮರ್ಥ್ಯ ವರ್ಧನೆ ಮತ್ತು ಕೌಶಲ್ಯ ವರ್ಧನೆ ಕಾರ್ಯಕ್ರಮದಡಿ ಟೇಲರಿಂಗ್ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದರು.

ನಿರುದ್ಯೋಗಿ ಮಹಿಳೆಯರು ಜೀವನೋಪಾಯಕ್ಕೆ ಸ್ವಯಂ ಉದ್ಯೋಗ ಕೈಗೊಳ್ಳಬೇಕು. ಆ ಮೂಲಕ ಸ್ವಾವಲಂಭಿಗಳಾಗಿ ಆರ್ಥಿಕವಾಗಿ ಕುಟುಂಬಕ್ಕೆ ಆಧಾರವಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದರು.

ಈ ವೇಳೆ ಜಿಲ್ಲಾ ಔಟ್‌ರಿಚ್ ಸಂಸ್ಥೆಯ ಜಿಲ್ಲಾ ಸಂಯೋಜಕ ಲೋಹಿತ್‌ಕುಮಾರ ಕಾಸಾರ ಮಾತನಾಡಿದರು.

ಜಿಲ್ಲೆಯ ಗದಗ, ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ 25 ಮಹಿಳೆಯರು 3 ದಿನಗಳವರೆಗೆ ಟೇಲರಿಂಗ್ ತರಬೇತಿ ಪಡೆದರು. ತರಬೇತಿಯ ಕೊನೆಯ ದಿನ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.