ಕೊಪ್ಪಳ: ಇಂದು ಆಧುನಿಕ ಮಹಿಳೆ ಸರ್ವಶಕ್ತಳಾಗಿದ್ದಾಳೆ. ಅಪಾರ ಶಕ್ತಿ ಹೊಂದಿರುವ ಮಹಿಳೆಯರು ಧೈರ್ಯವಾಗಿ ಮುನ್ನುಗ್ಗಬೇಕು. ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಜೀಂ ಪ್ರೇಮ್ಜೀ ಫೌಂಡೇಶನ್,ಇನ್ನರ್ವ್ಹೀಲ್ ಕ್ಲಬ್, ಶ್ರೀ ಮಹಿಳಾ ಪ್ರತಿಧ್ವನಿ ಸಾಮಾಜಿಕ, ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಶ್ರೀಅಕ್ಕಮಹಾದೇವಿ ಮಹಿಳಾ ಮಂಡಳ(ರಿ) ಹಾಗೂ ವಾಸವಿ ಕ್ಲಬ್ ಭಾಗ್ಯನಗರ ಪಾನಘಂಟಿ ಫೌಂಡೇಶನ್(ರಿ) ಕೊಪ್ಪಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆ ಎಲ್ಲ ರಂಗದಲ್ಲಿಯೂ ತನ್ನ ಛಾಪು ಮೂಡಿಸುತ್ತಿದ್ದಾಳೆ.ಅವಳಿಗೆ ಅರ್ಹತೆ ಇದೆ, ಅಗಾಧ ಅವಕಾಶ ಇವೆ, ಮಹಿಳೆ ಧೈರ್ಯವಾಗಿ ಮುನ್ನುಗ್ಗಬೇಕು. ಸಮಾಜದಲ್ಲಿ ಸಮಾನತೆ ಸಾಧಿಸಲು, ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಸುಶಿಕ್ಷಿತ ಸಮಾಜದಲ್ಲಿಯೇ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ಸುರಕ್ಷಿತವಾಗಿರುವ ಕುರಿತು ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುವುದಷ್ಟೇ ಅಲ್ಲ, ಹೆಣ್ಣುಮಕ್ಕಳನ್ನು ಹೇಗೆ ಗೌರವಿಸಬೇಕು ಎಂಬುದನ್ನು ಗಂಡುಮಕ್ಕಳಿಗೂ ಕಲಿಸಬೇಕು. ಮಹಿಳೆಯರ ರಕ್ಷಣೆಗೆ ಕಾನೂನಿನಲ್ಲಿ ಹಲವಾರು ರೀತಿಯ ಅವಕಾಶಗಳಿದ್ದು, ಸಂವಿಧಾನದಲ್ಲಿಯೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ ಮಾತನಾಡಿ, ಮಹಿಳೆಗೆ ಮಹಿಳೆಯೇ ಶತ್ರುವಾಗಿರುವ ಕಾಲ ಘಟ್ಟದಲ್ಲಿ, ಮಹಿಳೆ ಓದು ಬರಹದ ಕಡೆಗೆ, ಸ್ವಂತದ ಬೆಳವಣಿಗೆಯ ಕಡೆಗೆ ಗಮನ ಹರಿಸಬೇಕು. ಸಮಾಧಾನ ಮತ್ತು ಶಾಂತಚಿತ್ತತೆಯಿಂದ ಎಲ್ಲವನ್ನೂ ಅವಲೋಕಿಸಿ ಮುನ್ನಡೆಯಬೇಕು, ವಿಧವೆ ಮಹಿಳೆ ಬಗ್ಗೆ ಸಮಾಜ ಆಡುವ ಮಾತುಗಳು ಮತ್ತು ವಿಧುರ ಪುರುಷನ ಬಗ್ಗೆ ಸಮಾಜ ತೋರುವ ಅನುಕಂಪ ನಾವು ನೋಡಿದರೆ ಅಸಮಾನತೆ ಗಮನಿಸಬಹುದು. ಕೇವಲ ಹೆಣ್ಣುಮಕ್ಕಳಿಗೆ ಅಷ್ಟೇ ಅಲ್ಲದೇ ಗಂಡುಮಕ್ಕಳಿಗೆ ಸರಿಯಾದ ಸಂಸ್ಕಾರ ಕಲಿಸುವ ಅಗತ್ಯವಿದೆ. ಮಹಿಳೆಯ ತಮ್ಮ ಅಹಮಿಕೆ ಬಿಟ್ಟು ಸಮಾಜ ಕಟ್ಟುವ ಕಡೆಗೆ ಗಮನಹರಿಸಿದರೆ ಅಸಾಧಾರಣ ಪ್ರಗತಿ ಹೊಂದಬಹುದು ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪರಶುರಾಮ ಶೆಟ್ಟೆಪ್ಪನವರ ಮಾತನಾಡಿ, ಇಲಾಖೆ ಅನೇಕ ಯೋಜನೆಗಳ ಮೂಲಕ ಮಹಿಳೆ ಮತ್ತು ಮಕ್ಕಳ ಸಬಲೀಕರಣ ಮಾಡುತ್ತಿದೆ. ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಗೀವ್ ಟು ಗೇನ್ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಮಹಿಳೆಯರ ಶಕ್ತಿಯ ಬಗ್ಗೆ ಹೇಳಲು ಪದಗಳು ಸಾಲುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ನಟರಾಜ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ, ಜಯಶ್ರೀ ಆರ್.,ವಿರುಪಾಕ್ಷಿ, ಯಲ್ಲಮ್ಮ ಅಂಡಗಿ, ಬೆಟದೇಶ ಮಾಳೆಕೊಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಎಲಿಗಾರ, ವಿವಿಧ ಮಹಿಳಾ ಸಂಘಟನೆ ಡಾ.ರಾಧಾ ಕುಲಕರ್ಣಿ, ಗೀತಾ ಮುತ್ತಾಳ, ಮಧು ಶೆಟ್ಟರ್, ಸರೋಜಾ ಬಾಕಳೆ, ಕೋಮಲಾ ಕುದರಿಮೋತಿ ಸೇರಿದಂತೆ ಇತರರು ಇದ್ದರು. ಸುಜಾತಾ ರಾಯಕರ್ ಮತ್ತು ಪ್ರೀತಿ ಕೋರೆ ಕಾರ್ಯಕ್ರಮ ನಿರ್ವಹಿಸಿದರು.
ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಪ್ರದಾನ:
ಜಿಲ್ಲೆಯ ಆರು ಜನ ಮಕ್ಕಳಿಗೆ ಸಾಂಸ್ಕೃತಿಕ,ಕ್ರೀಡೆ, ಸಾಹಿತ್ಯ ಸೇವೆ ಗುರುತಿಸಿ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೆಟ್ಬಾಲ್ ಮತ್ತು ಪೆಂಕಾಕ್ ಸಿಲತ್ ನಲ್ಲಿ ರಾಷ್ಟ್ರೀಯ ಪದಕ ಪಡೆದ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಅಸಾಧಾರಣ ಸಾಧನೆ ಮಾಡಿರುವ ಸಾಹಿತ್ಯ ಎಂ.ಗೊಂಡಬಾಳ, ಕಲಾ ಸೇವೆಗೆ ಸಾಯಿ ಶೌರ್ಯ ಎಂ.ಕುಕನೂರ, ಕ್ರೀಡಾ ಕ್ಷೇತ್ರದ ಸಾಧನೆಗೆ ಅಖಿಲೇಶ ಯಾದವ್ ಕೊಪ್ಪಳ, ಆಫ್ರೀನ್ ಪೀರಸಾಬ್ ಗಂಗಾವತಿ, ಮೊಹಮ್ಮದ್ ಅಸದ್ ಗಂಗಾವತಿ ಹಾಗೂ ಪ್ರದ್ವಿಕಾ ಅಗಸಿಮುಂದಿನ ಕುಷ್ಟಗಿ ಅವರಿಗೆ ಹತ್ತು ಸಾವಿರ ನಗದು ಪುರಸ್ಕಾರದ ಜತೆಗೆ ಪ್ರಶಸ್ತಿ ನೀಡಲಾಯಿತು. ಅಲ್ಲದೇ ಇದೇ ವೇಳೆ ಉತ್ತಮ ಸೇವೆ ಮಾಡಿದ ಮೇಲ್ವಿಚಾರಕಿಯರಿಗೆ, ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.