ಕನ್ನಡಪ್ರಭ ವಾರ್ತೆ ಮಧುಗಿರಿ
ಗ್ರಾಮೀಣ ಮಹಿಳೆಯರ ಮತ್ತು ಕುಟುಂಬದ ಜೀವನ ಮಟ್ಟ ಸುಧಾರಣೆಗೆ ಉದ್ಯೋಗ ಒದಗಿಸುವ ಮೂಲಕ ಹಳ್ಳಿಗಾಡಿನ ಪ್ರದೇಶಗಳಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿಗಳು, ಕೈಗಾರಿಕೆಗಳನ್ನು ಪ್ರಾರಂಭಿಸಿ ಎಂದು ಯುವ ಉದ್ಯಮಿಗಳಿಗೆ ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.ತಾಲೂಕಿನ ಗಡಿಭಾಗದ ನೀಲಕಂಠಾಪುರದಲ್ಲಿ ನೂತನವಾಗಿ ಪ್ರಾರಂಭವಾದ ಗಾರ್ಮೆಂಟ್ಸ್ ನ 2 ನೇ ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹಳ್ಳಿಗಾಡಿನ ಮಹಿಳೆಯರು ಪ್ರಸ್ತುತ ಹೈನೋದ್ಯಮ ಆರಂಭಿಸಿದ್ದು ಕ್ಷೇತ್ರದಲ್ಲಿ ಗಾರ್ಮೆಂಟ್ಸ್ ಉದ್ಯಮ ಪ್ರಾರಂಭಿಸಿದರೆ ಮತ್ತಷ್ಟು ಮಹಿಳೆಯರಿಗೆ ಉದ್ಯೋಗ ಸಿಗುವ ನಿರೀಕ್ಷೆಯಿದೆ. ಈ ಭಾಗವು ಮಳೆಯಾಶ್ರಿತ ಭೂಪ್ರದೇಶವಾಗಿದ್ದು ಉದ್ಯೋಗವಿಲ್ಲದಾಗಿದೆ. ಪ್ರಸ್ತುತ ಗಡಿಭಾಗದಲ್ಲಿ ಆಂಧ್ರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ರಘವೀರ ರೆಡ್ಡಿ ಕುಟುಂಬ ಹಾಗೂ ಮಧುಗಿರಿಯ ಯುವ ಉದ್ಯಮಿ ದಿಲೀಪ್ ಸೇರಿ ಈ ಗಾರ್ಮೆಂಟ್ಸ್ ಪ್ರಾರಂಭಿಸಿದ್ದು ,ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗದ 300ಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗ ಸಿಗುತ್ತಿದೆ. ದಿಲೀಪ್ ಈಗಾಗಲೇ ಮಧುಗಿರಿಯಲ್ಲೂ ಒಂದು ಗಾರ್ಮೆಂಟ್ಸ್ ಪ್ರಾರಂಭಿಸಿ ಯಶಸ್ವಿಯಾಗಿದ್ದು ಈ ಭಾಗದಲ್ಲಿ ಇದೊಂದು ಮೈಲಿಗಲ್ಲಾಗಿದ್ದು, ಇಂತಹ ಮತ್ತಷ್ಟೂ ಗಾರ್ಮೆಂಟ್ಸ್ ಕೈಗಾರಿಕೆಗಳು ಹೆಚ್ಚು ಆರಂಭಗೊಂಡರೆ ನಿರುದ್ಯೋಗ ಸಮಸ್ಯ ನಿವಾರಣೆಗೆ ನಾಂದಿ ಹಾಡಿದಂತೆ. ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನದಿಂದ ಈಗಿರುವ 300 ಉದ್ಯೋಗವು 3 ಸಾವಿರದಷ್ಟಾಗಲಿ. ಈ ಭಾಗದ ಜನರ ಪ್ರೀತಿ ಸಂಪಾದಿಸಿ ಉತ್ತಮ ಉದ್ಯಮಿಯಾಗಿ ಅಭಿವೃದ್ಧಿ ಆಗುವಂತೆ ತಿಳಿಸಿದ ಅವರು, ಡಾ. ರಾಜ್ ಕುಮಾರ್ ಕುಟುಂಬದಿಂದ ಉದ್ಘಾಟನೆಗೊಂಡ ಪ್ರತಿಯೊಂದು ಉದ್ಯಮವೂ ಯಶಸ್ವಿಯಾಗಿರುವ ಉದಾಹರಣೆ ಸಾಕಷ್ಟಿದೆ. ಅದಕ್ಕಾಗಿ ಆ ಕುಟುಂಬದ ಹೆಣ್ಣುಮಗಳಿಂದ ಈ ಗಾರ್ಮೆಂಟ್ಸ್ ಉದ್ಘಾಟಿಸಿರುವುದು ಅರ್ಥಪೂರ್ಣವಾಗಿದೆ. ಈ ಉದ್ಯಮ ಮತ್ತಷ್ಟು ಗ್ರಾಮೀಣ ಮಹಿಳೆಯರ ಬಾಳು ಬೆಳಗುವಂತಾಗಲಿ ಎಂದು ಶುಭ ಕೋರಿದರು.ಗಾರ್ಮೆಂಟ್ಸ್ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಧರ್ಮಪತ್ನಿ ಅಶ್ವಿನಿ ಮಹಿಳೆಯರು ಸ್ವಾವಲಂಬಿ ಬದುಕನ್ನು ಬಯಸಲಿದ್ದು ಗ್ರಾಮದಲ್ಲೇ ಉದ್ಯೋಗ ಸಿಕ್ಕರೆ ಆರ್ಥಿಕವಾಗಿ ಬಹಳ ಸಧೃಡರಾಗುತ್ತಾರೆ. ಅಂತಹ ಮಹಿಳೆಯರಿಗಾಗಿ ಈ ಕೈಗಾರಿಕೆ ಉದ್ಘಾಟಿಸಿದ್ದು ಖುಷಿ ನೀಡಿದ್ದು ಎಲ್ಲರಿಗೂ ಒಳ್ಳೆಯದಾಗಲಿ ಎಂದರು. ಈ ಸಂದರ್ಭದಲ್ಲಿ ಮಡಕಶಿರಾ ಮಾಜಿ ಶಾಸಕ ಸುಧಾಕರ್, ಕೈಗಾರಿಕೆ ಸಲಹೆಗಾರ ಸೋಮಶೇಖರ್ ಸ್ವಾಮಿ, ಶ್ರೀರಾಮ ರೆಡ್ಡಿ ಹಾಗೂ ಗೋವಿಂದರೆಡ್ಡಿ ಕುಟುಂಬ, ಕೈಗಾರಿಕೋದ್ಯಮಿಗಳಾದ ಜಗದೀಶ್, ಉಮಾ ಬಾಲಕೃಷ್ಣ, ದಿಲೀಪ್, ಎಐಸಿಸಿ ಸದಸ್ಯ ಶ್ರೀಧರ, ರಾಜಣ್ಣ, ಮಲ್ಲಿಕಾರ್ಜುನಯ್ಯ, ಕೃಷ್ಣ, ಪುರಸಭೆ ಮಾಜಿ ಸದಸ್ಯ ಶ್ರೀನಿವಾಸ್, ಹೊಸಕೆರೆ ದೇವರಾಜು, ವೇಣು, ಕೃಷ್ಣ ಗ್ರಾಮಸ್ಥರು ಹಾಜರಿದ್ದರು.