ಕನ್ನಡಪ್ರಭ ವಾರ್ತೆ ಅರಸೀಕೆರೆಭಾರತದ ಇತಿಹಾಸದಲ್ಲಿ ಅನೇಕ ಮಹನೀಯರು ಮಾನವ ಸಮಾಜಕ್ಕೆ ದಾರಿದೀಪರಾಗಿದ್ದಾರೆ. ಇಂದಿನ ವಿಜ್ಞಾನ ಪ್ರಗತಿಯ ನಡುವೆಯೂ ಜಗತ್ತಿನಲ್ಲಿ ಅಶಾಂತಿ ಮತ್ತು ಯುದ್ಧ ಪರಿಸ್ಥಿತಿಗಳು ಮುಂದುವರಿದಿರುವ ಸಂದರ್ಭದಲ್ಲಿಯೂ, ಇಂತಹ ಮಹಾನ್ ಪುರುಷರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮನುಷ್ಯ ನಿಜವಾದ ನೆಮ್ಮದಿಯನ್ನು ಪಡೆಯಲು ಸಾಧ್ಯವೆಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ತಾಲೂಕು ಆಡಳಿತ ಕಚೇರಿ ಪಕ್ಕದ ಕಂದಾಯ ಭವನದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿ ಹಾಗೂ ಶ್ರೀ ಯೋಗಿ ನಾರಾಯಣ (ಕೈವಾರ ತಾತಯ್ಯ) ಜಯಂತಿ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡ, ರೇಣುಕಾಚಾರ್ಯರು ಮಾನವೀಯ ಮೌಲ್ಯಗಳು, ಸಮಾನತೆ ಹಾಗೂ ವೀರಶೈವ ಪರಂಪರೆಯ ಶಾಶ್ವತ ಸಿದ್ಧಾಂತಗಳನ್ನು ಸಾರಿದ ಮಹಾನ್ ಚಿಂತಕರು ಎಂದು ಹೇಳಿದರು. ರೇಣುಕಾಚಾರ್ಯರು ಸಮಾಜದಲ್ಲಿ ಧರ್ಮ, ನೀತಿ ಮತ್ತು ನೈತಿಕತೆ ಸ್ಥಾಪನೆಗಾಗಿ ಶ್ರಮಿಸಿದ ಮಹನೀಯರು. ಎಲ್ಲಾ ವರ್ಣಗಳು ಸಮಾನವೆಂಬ ತತ್ವವನ್ನು ಪ್ರತಿಪಾದಿಸಿ ಸಮಾಜದ ಏಕತೆಗೆ ಪೂರಕವಾದ ಸಂದೇಶವನ್ನು ನೀಡಿದ್ದಾರೆ. ಅವರ ಜಯಂತಿ ಆಚರಣೆ ಕೇವಲ ಆಚರಣೆಯಾಗಿ ಸೀಮಿತವಾಗದೇ, ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು ಎಂದು ತಿಳಿಸಿದರು.ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಶ್ರೀ ರೇಣುಕಾಚಾರ್ಯರು ಮತ್ತು ಕೈವಾರ ತಾತಯ್ಯನವರ ತತ್ವ, ಸಿದ್ಧಾಂತಗಳು ಇಂದಿನ ಸಮಾಜಕ್ಕೂ ಸಮಾನವಾಗಿ ಪ್ರಸ್ತುತವಾಗಿವೆ ಎಂದು ಹೇಳಿದರು. ರೇಣುಕಾಚಾರ್ಯರು ಸಮಾನತೆ, ಮಾನವೀಯತೆ ಮತ್ತು ಧಾರ್ಮಿಕ ಶುದ್ಧತೆಯ ಸಂದೇಶವನ್ನು ಸಾರಿದ ಮಹನೀಯರಾಗಿದ್ದು, ಸಮಾಜದಲ್ಲಿ ಅಂತರಗಳ ನಿವಾರಣೆಗಾಗಿ ಶ್ರಮಿಸಿದವರು ಎಂದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತರಾದ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಧರ್ಮಶೇಖರ್, ಗಂಜಿಗೆರೆ ಚಂದ್ರಶೇಖರ್, ಮುರುಂಡಿ ಶಿವಯ್ಯ, ವಿರೂಪಾಕ್ಷಯ್ಯ, ಮಂಜು, ಬಲಿಜ ಸಮಾಜದ ಅಧ್ಯಕ್ಷ ರಾಮು, ಸತ್ಯನಾರಾಯಣ, ನಾಗಭೂಷಣ, ಅವಿನಾಶ್ ನಾಯ್ಡು,ನಿರಂಜನ್, ರವಿಸ್ವಾಮಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಬಂಧುಗಳು ಭಾಗವಹಿಸಿದ್ದರು.