ಸಾರಾಂಶ
ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನದಲ್ಲಿ ವಿವಿಧ ಜಿಲ್ಲೆಗಳಿಂದ 60 ರೀತಿಯ ಶ್ವಾನದ ತಳಿಗಳು ಆಗಮಿಸಿದ್ದವು. ಸುಮಾರು 260 ಶ್ವಾನಗಳು ನೋಂದಾಯಿಸಲ್ಪಟ್ಟವು
ಹುಬ್ಬಳ್ಳಿ:ಎಲ್ಲರೂ ಪ್ರಾಣಿಗಳನ್ನು ಪ್ರೀತಿಸುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಪ್ರಾಣಿ ಸಂಕುಲ ಉಳಿಸಿ, ಬೆಳೆಸೋಣ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಭಾನುವಾರ ಇಲ್ಲಿನ ಇಂದಿರಾ ಗಾಜಿನ ಮನೆಯ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಾಣಿ ಕಲ್ಯಾಣ ಅರಿವು ಮೂಡಿಸುವ ಶಿಬಿರ ಹಾಗೂ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ಪ್ರದರ್ಶನದಿಂದ ಜನರಿಗೆ ವಿವಿಧ ತಳಿಗಳ ಬಗ್ಗೆ ಮಾಹಿತಿ ನೀಡಬಹುದು. ಮುಂದಿನ ದಿನಗಳಲ್ಲಿ ಪ್ರಾಣಿಗಳನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚಾಗಲಿ ಮತ್ತು ಹೆಚ್ಚು ಹೆಚ್ಚು ಪ್ರಾಣಿಗಳನ್ನು ಸಾಕುವಂತಾಗಲಿ ಎಂದರು.
ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನದಲ್ಲಿ ವಿವಿಧ ಜಿಲ್ಲೆಗಳಿಂದ 60 ರೀತಿಯ ಶ್ವಾನದ ತಳಿಗಳು ಆಗಮಿಸಿದ್ದವು. ಸುಮಾರು 260 ಶ್ವಾನಗಳು ನೋಂದಾಯಿಸಲ್ಪಟ್ಟಿದ್ದವು. ಅವುಗಳ ಜೊತೆ ಗಿಡ್ಡ ತಳಿಯ ಆಕಳುಗಳು ಕೂಡಾ ಅಗಮಿಸಿದ್ದವು. ಶ್ವಾನ ಪ್ರದರ್ಶನದಲ್ಲಿ ಸ್ಪರ್ಧೆ ಏರ್ಪಡಿಸಿ, ವಿಜೇತ ಶ್ವಾನಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಹು-ಧಾ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಬಿರಾದಾರ, ಕೆ.ಸಿ.ಐ. ನ್ಯಾಯಾಧೀಶ ಸ್ಟೀವ್ ಅಲ್ಬೇಡಾ, ಕೆಎಂಎಫ್ ನ ಜಂಟಿ ನಿರ್ದೇಶಕ ರಾಜಶೇಖರ ಪಾಟೀಲ, ಜಿಲ್ಲಾ ಪಾಲಿಕ್ಲಿನಿಕ್ ಉಪ ನಿರ್ದೇಶಕ ಡಾ. ಪ್ರಮೋದ ಮೂಡಲಗಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು, ಇತರರು ಪಾಲ್ಗೊಂಡಿದ್ದರು.