ಕನ್ನಡ ಭಾಷೆ, ನೆಲ-ಜಲ ರಕ್ಷಣೆಗೆ ಕಟಿಬದ್ಧರಾಗೋಣ: ಶಾಸಕ ಶಿವರಾಮ ಹೆಬ್ಬಾರ

| Published : Nov 02 2025, 03:30 AM IST

ಕನ್ನಡ ಭಾಷೆ, ನೆಲ-ಜಲ ರಕ್ಷಣೆಗೆ ಕಟಿಬದ್ಧರಾಗೋಣ: ಶಾಸಕ ಶಿವರಾಮ ಹೆಬ್ಬಾರ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಇತಿಹಾಸದಲ್ಲೇ ಕನ್ನಡದ ಎಂಟು ಸಾಧಕರಿಗೆ ಜ್ಞಾನಪೀಠ ಲಭಿಸಿದೆ. ಆ ನೆಲೆಯಲ್ಲಿ ನಾವು ಅಗ್ರ ಪಂಕ್ತಿಯಲ್ಲಿದ್ದೇವೆ. ಆದಿಪಂಪನ ಬನವಾಸಿ ಇಂದೂ ಶೋಭಾಯಮಾನವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಯಲ್ಲಾಪುರ: ಕನ್ನಡ ಭಾಷಿಕರಾದ ನಾವು ಮಾತೃ ಭಾಷೆಯ ಬಗ್ಗೆ ಅಭಿಮಾನ ಹೊಂದಿ ಉಳಿದೆಲ್ಲ ಭಾಷೆಯನ್ನು ಗೌರವಿಸುವ ಸಂಸ್ಕೃತಿ ಹೊಂದಿದ್ದೇವೆ. ಅದೇ ಆಂಧ್ರ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ಹಲವು ಭಾಷಿಗರಲ್ಲಿ ಬೇರೆ ಭಾಷೆಯನ್ನು ಗೌರವಿಸುವ ಸಂಸ್ಕೃತಿ ಕಾಣುವುದು ಕಷ್ಟ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು

ದೇಶದ ಇತಿಹಾಸದಲ್ಲೇ ಕನ್ನಡದ ಎಂಟು ಸಾಧಕರಿಗೆ ಜ್ಞಾನಪೀಠ ಲಭಿಸಿದೆ. ಆ ನೆಲೆಯಲ್ಲಿ ನಾವು ಅಗ್ರ ಪಂಕ್ತಿಯಲ್ಲಿದ್ದೇವೆ. ಆದಿಪಂಪನ ಬನವಾಸಿ ಇಂದೂ ಶೋಭಾಯಮಾನವಾಗಿದೆ. ಅಂತಹ ಕನ್ನಡ ಭಾಷೆ, ನೆಲ, ಜಲದ ರಕ್ಷಣೆಗಾಗಿ ನಾವೆಲ್ಲರೂ ಕಟಿಬದ್ಧರಾಗಿರಬೇಕು. ಎಲ್ಲರನ್ನೂ ಗೌರವಿಸುವ ಸಂಸ್ಕೃತಿ ಕನ್ನಡ ಭಾಷೆಗೆ ಮಾತ್ರ ಇದೆ ಎಂದರು.

ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ ಮಾತನಾಡಿ, ಕನ್ನಡ ರಾಜ್ಯ ಉದಯವಾದಂದಿನಿಂದಲೂ ನಾವು ಕನ್ನಡ ಸಾರ್ವಭೌಮತ್ವ ಕಾಪಾಡಿಕೊಂಡು ಬಂದಿದ್ದೇವೆ. ಆದರಿಂದು ಕನ್ನಡದ ಉತ್ಸವಗಳು ಸಾಂಕೇತಿಕವಾಗುತ್ತಿದೆಯೇ ವಿನಃ ಅದೊಂದು ಎಲ್ಲರ ಹಬ್ಬವಾಗಿ ಆಚರಣೆಯಾಗುತ್ತಿಲ್ಲ. ನಮ್ಮ ಭಾಷೆ ಕೇವಲ ಕೆಲವು ಪ್ರದೇಶಕ್ಕೆ ಸೀಮಿತಗೊಳ್ಳದೇ ವಿಶ್ವವನ್ನೇ ಆವರಿಸಿದೆ. ಸ್ವಾಭಿಮಾನದ ಕನ್ನಡದ ಕಾರ್ಯದಲ್ಲಿ ನಾವೆಲ್ಲ ತೊಡಗಿಕೊಳ್ಳಬೇಕು ಎಂದರು.

ಪಪಂ ಉಪಾಧ್ಯಕ್ಷ ಅಮಿತ ಅಂಗಡಿ, ಗ್ಯಾರಂಟಿ ಸಮಿತಿಯ ತಾಲೂಕಾಧ್ಯಕ್ಷ ದೇವಿದಾಸ ಶಾನಭಾಗ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ಧನವಾಡಕರ, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ, ನೌಕರರ ಸಂಘದ ತಾಲೂಕಾಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಉಪಸ್ಥಿತರಿದ್ದರು.ಮೊರಾರ್ಜಿ ವಸತಿ ಶಾಲಾ ಮಕ್ಕಳು ನಾಡಗೀತೆ ಮತ್ತು ರೈತಗೀತೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ಚಂದ್ರಹಾಸ ನಾಯ್ಕ, ಪ್ರಶಾಂತ ಪಟಗಾರ ನಿರ್ವಹಿಸಿದರು. ಶಿಕ್ಷಣ ಸಂಯೋಜಕ ಪ್ರಶಾಂತ ಜಿ.ಎನ್. ವಂದಿಸಿದರು. ನಂತರ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು.