ಸಿದ್ದರಾಮೇಶ್ವರರ ಕಾಯಕ ತತ್ವ ಪಾಲಿಸೋಣ: ಮೇಯರ್ ಮುಲ್ಲಂಗಿ ನಂದೀಶ್

| Published : Jan 15 2025, 12:45 AM IST

ಸಿದ್ದರಾಮೇಶ್ವರರ ಕಾಯಕ ತತ್ವ ಪಾಲಿಸೋಣ: ಮೇಯರ್ ಮುಲ್ಲಂಗಿ ನಂದೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಶಿವಯೋಗಿ ಸಿದ್ಧರಾಮೇಶ್ವರ 853ನೇ ಜಯಂತಿ ಆಚರಿಸಲಾಯಿತು.

ಬಳ್ಳಾರಿ: 12ನೇ ಶತಮಾನದ ವಚನ ಸಾಹಿತ್ಯದ ವಚನಕಾರರಲ್ಲಿ ಒಬ್ಬರಾದ ಶಿವಯೋಗಿ ಶರಣ ಸಿದ್ದರಾಮೇಶ್ವರರ ಕಾಯಕ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಮಹಾನಗರ ಪಾಲಿಕೆಯ ಮಹಾಪೌರ ಮುಲ್ಲಂಗಿ ನಂದೀಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ 853ನೇ ಜಯಂತಿ ಕಾರ್ಯಕ್ರಮವನ್ನು ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಿದ್ದರಾಮೇಶ್ವರರ ತತ್ವ ಮನುಕುಲದ ಸೇವೆ, ಶಿವಯೋಗದ ಮಾರ್ಗವಾಗಿತ್ತು. ವಚನ ಸಾಹಿತ್ಯವನ್ನು ವಿನಾಶದಿಂದ ಪಾರು ಮಾಡುವಲ್ಲಿ ಸಿದ್ದರಾಮೇಶ್ವರರೂ ಒಬ್ಬರಾಗಿದ್ದರು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್. ಝುಬೇರ್ ಮಾತನಾಡಿ, ಸಿದ್ದರಾಮೇಶ್ವರರು ಜಾತಿ ಮತ್ತು ಲಿಂಗ ತಾರತಮ್ಯದ ಕುರುಡು ಸಂಪ್ರದಾಯಗಳನ್ನು ತಿರಸ್ಕರಿಸಿದ್ದರು. ವೈಯಕ್ತಿಕ ಅನುಭವದ ಮೂಲಕ ಸಾಕ್ಷರತೆಗೆ ಒತ್ತು ನೀಡಿದ್ದರು. ಸಮ ಸಮಾಜ ಕಟ್ಟುವ ಕನಸು ಕಂಡಿದ್ದವರು ಎಂದು ಹೇಳಿದರು.

ಸಿದ್ದರಾಮೇಶ್ವರರು 12ನೇ ಶತಮಾನದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಅವರಂತಹ ವಚನ ಸಾಹಿತ್ಯಕಾರರ ಸಾಲಿನಲ್ಲಿ ಪ್ರಬುದ್ಧ ವಚನಕಾರರಾಗಿದ್ದರು ಎಂದು ತಿಳಿಸಿದರು.

ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಗಾದೆಪ್ಪ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಸಿದ್ದರಾಮೇಶ್ವರರು ಕ್ರಿ.ಶ 12ನೇ ಶತಮಾನದ ಸುಪ್ರಸಿದ್ದ ಶರಣ ಪರಂಪರೆಯಲ್ಲಿ ಗುರುತಿಸಿಕೊಂಡವರು. ತನ್ನ ಸ್ವಂತ ಕಾಯಕದ ಮೂಲಕ ಅಪ್ರತಿಮ ಶರಣನಾಗಿ ರೂಪಗೊಂಡವರು ಎಂದರು.

ಸಿದ್ದರಾಮೇಶ್ವರರು ಸೊನ್ನಲಿಗೆ ಎಂಬ ಪುಟ್ಟ ಹಳ್ಳಿಯಲ್ಲಿ (ಮಹಾರಾಷ್ಟçದ ಸೊಲ್ಲಾಪುರ) ಜನಿಸಿದವರು. ಅವರ ತಂದೆ ಮುದ್ದುಗೌಡ, ತಾಯಿ ಸುಗ್ಗವ್ವ. ಸಿದ್ಧರಾಮೇಶ್ವರರು ವಚನಗಳನ್ನು ರಚಿಸಿರುವುದು ಮಾತ್ರವಲ್ಲದೆ, ವಚನ ಸಂರಕ್ಷಣೆಯೂ ಮಾಡಿದ್ದಾರೆ. ಕೆರೆ, ಕಟ್ಟೆ ಕಟ್ಟಿಸಿ ಜನೋಪಯೋಗಿ ಕಾರ್ಯ ಕೈಗೊಂಡರು. ಶರಣತತ್ವದ ಪರಿಪಾಲಕರಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ರಾಘವೇಂದ್ರ ಗುಡುದೂರು ತಂಡ ಭಕ್ತಿ ಸಂಗೀತ ಕಾರ್ಯಕ್ರಮ ನೆರವೇರಿಸಿಕೊಟ್ಟಿತು.ಮೆರವಣಿಗೆ:

ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಅವರು ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಚಾಲನೆ ನೀಡಿದರು.

ಡೊಳ್ಳು ವಾದ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ನಗರದ ಡಾ. ರಾಜ್ ಕುಮಾರ್ ರಸ್ತೆಯ ಮುನ್ಸಿಪಾಲ್ ಕಾಲೇಜು ಮೈದಾನದಿಂದ ಮೆರವಣಿಗೆ ಆರಂಭಗೊಂಡು ಗಡಿಗೆ ಚೆನ್ನಪ್ಪ ವೃತದಿಂದ ಬೆಂಗಳೂರು ರಸ್ತೆ, ತೇರು ಬೀದಿ, ಜೈನ್ ಮಾರ್ಕೆಟ್, ಹೆಚ್.ಆರ್. ಗವಿಯಪ್ಪ ವೃತದ ಮಾರ್ಗವಾಗಿ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವರೆಗೆ ತಲುಪಿ ಸಂಪನ್ನಗೊಂಡಿತು.

ಸಹಾಯಕ ಆಯುಕ್ತ ಪ್ರಮೋದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ, ಜಿಲ್ಲಾ ಭೋವಿ ಸಂಘ ಅಧ್ಯಕ್ಷ ವಿ. ರಾಮಾಂಜನೇಯ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸಮುದಾಯದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.