ಮುಂದಿನ ಪೀಳಿಗೆಗೆ ಸಂಸ್ಕಾರ, ಸಂಸ್ಕೃತಿ ಅರಿವು ಮೂಡಿಸೋಣ: ಎಚ್.ಆರ್. ಗವಿಯಪ್ಪ

| Published : Mar 03 2024, 01:30 AM IST

ಮುಂದಿನ ಪೀಳಿಗೆಗೆ ಸಂಸ್ಕಾರ, ಸಂಸ್ಕೃತಿ ಅರಿವು ಮೂಡಿಸೋಣ: ಎಚ್.ಆರ್. ಗವಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಪೇಟೆ ನಗರದ 34ನೇ ವಾರ್ಡ್‌ನ ಗ್ರಾಮದೇವತೆ ಊರಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಏ. 2 ಮತ್ತು 3ರಂದು ಆಯೋಜಿಸಲಾಗಿದೆ. ಮಾ. 26ರಿಂದ ಏಪ್ರಿಲ್‌ 1ರ ವರೆಗೆ ದೇವಸ್ಥಾನದಲ್ಲಿ ವಿವಿಧ ಬಗೆಯ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ.

ಹೊಸಪೇಟೆ: ಮುಂದಿನ ಪೀಳಿಗೆಗೆ ಸಂಸ್ಕಾರ, ಸಂಸ್ಕೃತಿ ಅರಿವು ಮೂಡಿಸಬೇಕಿದೆ. ಹಾಗಾಗಿ ನಗರದಲ್ಲೂ ಊರಮ್ಮ ದೇವಿ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸೋಣ. ಜಾತ್ರೆಗೆ ವೈಯಕ್ತಿಕವಾಗಿ ₹10 ಲಕ್ಷ ದೇಣಿಗೆ ನೀಡುವೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.

ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಶನಿವಾರ ಗ್ರಾಮ ದೇವತೆ ಊರಮ್ಮ ದೇವಿಯ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಮ್ಮ ಸಂಸ್ಕಾರ, ಸಂಸ್ಕೃತಿ ಜಾಗತೀಕರಣದ ಹೊಡೆತಕ್ಕೆ ಕಾಣೆಯಾಗುತ್ತಿವೆ. ಈ ಹಬ್ಬಗಳ ಮೂಲಕ ಮುಂದಿನ ಪೀಳಿಗೆಗೆ ಆಚಾರ-ವಿಚಾರಗಳ ಪರಿಚಯಿಸಬೇಕಿದೆ. ಊರಮ್ಮ ದೇವಿಯ ಜಾತ್ರೆಯನ್ನು ಅರ್ಥ ಪೂರ್ಣವಾಗಿ ಆಚರಿಸಬೇಕಿದೆ ಎಂದರು.

ಕೊಟ್ಟೂರು ಸಂಸ್ಥಾನ ಮಠದ ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮ ವ್ಯಕ್ತಿ, ಜಾತಿ ಪರವಾದ ಧರ್ಮ ಅಲ್ಲ. ಮಾನವೀಯತೆಯ ಸಂಸ್ಕೃತಿಯನ್ನು ಸಾರುವ ಮಾನವ ಧರ್ಮವೇ ಹಿಂದೂ ಧರ್ಮ. ಧರ್ಮದ ಬಗ್ಗೆ ಅರಿವಿಲ್ಲದವನಿಗೆ ಉಳಿವಿಲ್ಲ. ಧರ್ಮವೆಂದರೆ ಆಚರಣೆಯಲ್ಲಿರಬೇಕು. ಹಿಂದೂ ಎಂದರೆ ಹಿಂಸೆಯಿಂದ ಹಿಂದೆ ಸರಿಯುವವನು. ಮಾನವಧರ್ಮ ನಶಿಸುತ್ತಿರುವ ಈ ದಿನಗಳಲ್ಲಿ ಪುನಃ ಮಾನವವೀಯತೆಯೆಡೆಗೆ ಸೆಳೆಯುವುದೇ ಸರ್ವಧರ್ಮವಾಗಿದೆ. ಆದ್ದರಿಂದ ಊರಮ್ಮ ದೇವಿ ಜಾತ್ರೆಯನ್ನು ಸರ್ವಧರ್ಮ ಜಾತ್ರೆಯಾಗಿ ಆಚರಿಸಬೇಕಿದೆ ಎಂದರು.

ಮುಖಂಡ ಎಚ್.ಎನ್.ಎಫ್. ಇಮಾಮ್ ನಿಯಾಜಿ ಮಾತನಾಡಿ, ಧರ್ಮಗಳು ಮಾನವನ ರಕ್ಷಣೆ ಮಾಡುತ್ತಿದೆ. ನಮ್ಮ ಹಿರಿಯರ ಪದ್ಧತಿಯನ್ನು ನಾವು ಆಚರಿಸುವುದು ನಮ್ಮ ಕರ್ತವ್ಯ. ಎಲ್ಲ ಜನಾಂಗದವರು ಆಚರಿಸುವ ಹಬ್ಬವಾಗಿದೆ. ಜಾತಿ, ಧರ್ಮವನ್ನು ಬಿಟ್ಟು ಈ ಹಬ್ಬದಲ್ಲಿ ಪಾಲ್ಗೊಂಡು ಮುಂದಿನ ಪೀಳಿಗೆಗೆ ಶಾಂತಿ ಸಂದೇಶ ನೀಡಬೇಕಿದೆ ಎಂದರು.

ದೇವಸ್ಥಾನದ ಜೀರ್ಣೋದ್ಧಾರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಂಡೆ ಶ್ರೀನಿವಾಸ್ ಮಾತನಾಡಿ, ನಗರದ 34ನೇ ವಾರ್ಡ್‌ನ ಗ್ರಾಮದೇವತೆ ಊರಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಏ. 2 ಮತ್ತು 3ರಂದು ಆಯೋಜಿಸಲಾಗಿದೆ. ಆದ್ದರಿಂದ ಮಾ. 26ರಿಂದ ಏಪ್ರಿಲ್‌ 1ರ ವರೆಗೆ ದೇವಸ್ಥಾನದಲ್ಲಿ ವಿವಿಧ ಬಗೆಯ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಆದ್ದರಿಂದ ದೇವಿಯ ಜಾತ್ರೆಯನ್ನು ಜಾತಿ ಧರ್ಮಕ್ಕೆ ಸೀಮಿತಗೊಳಿಸದೆ, ತನು-ಮನ-ಧನದಿಂದ ಗ್ರಾಮ ದೇವತೆ ಆರಾಧನೆ ಮಾಡಬೇಕಿದೆ ಎಂದರು. ವಿವಿಧ ಸಮಾಜಗಳ ಮುಖಂಡರು ಇದ್ದರು.