ಗ್ರಂಥಾಲಯಗಳು ಜ್ಞಾನ ದೇಗುಲವಿದ್ದಂತೆ: ಟಿ.ಆರ್.ಸೋಮಶೇಖರಯ್ಯ

ಕನ್ನಡಪ್ರಭ ವಾರ್ತೆ, ತರೀಕೆರೆ

ವಿದ್ಯಾರ್ಥಿಗಳಿಗೆ ವಿದ್ಯೆ ಜೊತೆಗೆ ಪಠ್ಯೇತರ ವಿಷಯದ ಬಗ್ಗೆ ಹಾಗೂ ಮಕ್ಕಳು ಉತ್ತಮ ಭವಿಷ್ಯ ರೂಪಿಸಿ ಕೊಳ್ಳಲು ಗ್ರಂಥಾಲಯ ಜ್ಞಾನ ದೇಗುಲ ಇದ್ದಂತೆ. ಮಕ್ಕಳು ಹೆಚ್ಚು ಓದುವ ಅಭಿರುಚಿ ಬೆಳೆಸಿ ಕೊಳ್ಳಬೇಕೆಂದು ಎಂದು ಪಟ್ಟಣದ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಹೇಳಿದ್ದಾರೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಸಹಯೋಗದಲ್ಲಿ ಶನಿವಾರ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಪ್ರಗತಿಯಾದಾಗ ಮಾತ್ರ ದೇಶ ಸದೃಢವಾಗಿ ಬೆಳೆಯುತ್ತದೆ ಪುಸ್ತಕಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿ ಸಮಾಜದ ಅಸ್ತಿಯನ್ನಾಗಿ ರೂಪಿಸುವ ಕಾರ್ಯ ಮಾಡುತ್ತದೆ. ಓದುವವರು ಉದ್ಯೋಗಕ್ಕಾಗಿ ಪುಸ್ತಕ ಓದಬಾರದು, ಬದಲಾಗಿ ತಮ್ಮನ್ನು ತಾವು ಅರ್ಥಮಾಡಿಕೊಳ್ಳುವ ಮಾರ್ಗವನ್ನಾಗಿ ಅಭ್ಯಾಸ ಮಾಡಬೇಕು, ಆಗ ಮಾತ್ರ ಅಕ್ಷರ ಸಂಸ್ಕೃತಿಯಿಂದ ಜೀವನ ಸಂಸ್ಕೃತಿ ಅರ್ಥ ಮಾಡಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟರು.

ಸಾರ್ವಜನಿಕ ಗ್ರಂಥಾಲಯ ಸಹಾಯಕ ಆರ್. ಸುನಿಲ್ ಮಾತನಾಡಿ ಗ್ರಂಥಾಲಯದ ಪಿತಾಮಹರಾದ ಎಸ್. ಆರ್. ರಂಗನಾಥ್ ಸಾಧನೆ ಹಾಗೂ ಗ್ರಂಥಾಲಯದ ಮಹತ್ವ ತಿಳಿಸಿದ ಅವರು ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು. ಜ್ಞಾನಾರ್ಜನೆಗೆ ಗ್ರಂಥಾಲಯವನ್ನು ಹೆಚ್ಚಿನದಾಗಿ ವಿದ್ಯಾರ್ಥಿಗಳು ಬಳಸಿ ಕೊಳ್ಳ ಕೊಳ್ಳಬೇಕೆಂದು ತಿಳಿಸಿದರು

ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಜೊತೆ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು ಮಕ್ಕಳು ಶಿಸ್ತು, ಸಂಸ್ಕಾರ ಹಾಗೂ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಅನೂಪ್ ಮಾತನಾಡಿ ಓದುವಿಕೆ ವಿದ್ಯಾರ್ಥಿಗಳಿಗೆ ಅಳವಾದ ಅರಿವು ಮತ್ತು ಜ್ಞಾನ ನೀಡುತ್ತದೆ. ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಎಂದಾದರೊಂದು ದಿನ ಫಲ ನೀಡುತ್ತದೆ ಎಂಬ ಮಾತಿನಂತೆ ವಿದ್ಯಾರ್ಥಿಗಳು ಓದಿನತ್ತ ಮುಖ ಮಾಡಬೇಕೆಂದು ತಿಳಿಸಿದರು.

ಶಾಲೆ ಶಿಕ್ಷಕಿ ರಮ್ಯಾ ಮಾತನಾಡಿ ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆ ಗಳಿಗೆ ಅದ್ಯತೆ ನೀಡಬೇಕು. ಪುಸ್ತಕಗಳನ್ನು ಓದುವ ವಿದ್ಯಾರ್ಥಿಗಳು ಅರ್ಥ ಮಾಡಿ ಕೊಳ್ಳುವ ಮಾರ್ಗದಲ್ಲಿ ಅಭ್ಯಾಸ ಮಾಡಬೇಕೆಂದು ತಿಳಿಸಿದರು.

ಶಾಲೆಯ ವಿದ್ಯಾರ್ಥಿ ಪ್ರಜ್ಞಾ ಮಾತನಾಡಿ ಇಂದಿನ ವಿದ್ಯಾರ್ಥಿಗಳಾದ ನಾವು ಮೊಬೈಲ್ ಟಿವಿಗಳಿಗೆ ಮಾರು ಹೋಗದೆ ಗ್ರಂಥಾಲಯದಲ್ಲಿ ಓದುವ ಅಭಿರುಚಿ ಬೆಳೆಸಿ ಕೊಳ್ಳಬೇಕೆಂದು ತಿಳಿಸಿದರು.

ಶಿಕ್ಷಕಿ ನಿವೇದಿತಾ ಮಾತನಾಡಿದರು. ಶ್ರೀ ಪ್ರಹಷಿ೯ತ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು, ಶಿಕ್ಷಕಿಯರು, ಹಾಗೂ ಆಡಳಿತ ಮಂಡಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.18ಕೆಟಿಆರ್.ಕೆ.02

ತರೀಕೆರೆಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ, ಸಾರ್ವಜನಿಕ ಗ್ರಂಥಾಲಯದ ಸಹಾಯಕರಾದ ಸುನೀಲ್ ಮತ್ತಿತರರು ಇದ್ದಾರೆ.