ಕನ್ನಡಪ್ರಭ ವಾರ್ತೆ ಮದ್ದೂರು
ಗ್ರಂಥಾಲಯಗಳು ಜ್ಞಾನದ ಬಂಡಾರ ಮತ್ತು ನಾಗರಿಕತೆಯ ಪ್ರಮುಖ ಆಧಾರ ಸ್ತಂಭಗಳಾಗಿವೆ. ವ್ಯಕ್ತಿ ವಿಕಸನ, ಶಿಕ್ಷಣದ ಪ್ರಗತಿ ಮತ್ತು ಸಂಸ್ಕೃತಿಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು.ತಾಲೂಕಿನ ಕೊಪ್ಪ ಹೋಬಳಿ ಯಡವನಹಳ್ಳಿಯ ರೈತ ಕವಿ ಸಿ.ಎಂ.ಕ್ರಾಂತಿ ಸಿಂಹ ನಿವಾಸದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಹಯೋಗದಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪ್ರತಿ ಮನೆ ಮನೆಗಳಲ್ಲೂ ಗ್ರಂಥಾಲಯ ಅವಶ್ಯಕವಾಗಿದೆ. ಇದರಿಂದ ಸಮಾಜದಲ್ಲಿ ನಮಗೊಂದು ಘನತೆ, ಗೌರವ ತಂದು ಕೊಡುತ್ತದೆ. ನಾಡಿನ ಪ್ರತಿಯೊಂದು ಮನೆಯಲ್ಲಿಯೂ ಗ್ರಂಥಾಲಯ ಸ್ಥಾಪಿಸಬೇಕೆಂಬ ನನ್ನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕ್ರಾಂತಿ ಸಿಂಹ ತಮ್ಮ ನಿವಾಸದಲ್ಲಿ ಗ್ರಂಥಾಲಯ ಸ್ಥಾಪಿಸುವುದರೊಂದಿಗೆ ಮುನ್ನುಡಿ ಬರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮೇಲುಕೋಟೆ ಪುತಿನ ಟ್ರಸ್ಟ್ನ ಸದಸ್ಯ ಕುಮಾರ್ ಕೊಪ್ಪ ಮಾತನಾಡಿ, ಕ್ರಾಂತಿ ಸಿಂಹ ರಚಿಸಿರುವ ಅರಿವಿನ ನಡೆ ಕವನ ಸಂಕಲನದಲ್ಲಿ ಉತ್ತಮವಾಗಿದೆ. ಮಾನವೀಯ ಮೌಲ್ಯಗಳ ಜೊತೆಗೆ ಹೋರಾಟ ಮತ್ತು ಜಾತ್ಯಾತೀತ ಪರವಾಗಿದೆ. ಸಾಹಿತ್ , ಸಂಘಟನೆ , ಪತ್ರಿಕೋದ್ಯಮ, ಸಹಕಾರ, ಕೃಷಿ, ಹೋರಾಟ ಕ್ಷೇತ್ರ ಸೇರಿದಂತೆ ಪ್ರತಿಯೊಂದು ವಿಷಯಗಳು ಪುಸ್ತಕದಲ್ಲಿ ಜಾತ್ಯಾತೀತ ಪರವಾಗಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರ ಗುರು ಕರ ಪತ್ರ ಬಿಡುಗಡೆ ಮಾಡಿದರು. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಚೆನ್ನಮ್ಮ, ಜಾಗೃತಿ ಸಮಿತಿ ಸದಸ್ಯ ಚಿಕ್ಕ ಸ್ವಾಮಿ, ಆಬಲವಾಡಿ ಅನಿಲ್ ಕುಮಾರ್, ದಳವಾಯಿ ಕೋಡಿಹಳ್ಳಿ ಚಂದ್ರಶೇಖರ್, ಉಮೇಶ್, ಟಿ. ಎಂ. ರಾಜಶೇಖರ,ನವೀನ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.