ಸಾರಾಂಶ
ಪುಸ್ತಕಗಳು ಬದುಕುವುದನ್ನು ಮತ್ತು ವಿಚಾರ ಮಾಡುವುದನ್ನು ಕಲಿಸುತ್ತವೆ.
ಕನ್ನಡಪ್ರಭ ವಾರ್ತೆ ಮೈಸೂರು
ಪುಸ್ತಕಗಳು ನಮಗೆ ಅತ್ಯುತ್ತಮ ಸ್ನೇಹಿತರು, ಮಾರ್ಗದರ್ಶಕರು ಹಾಗೂ ಉತ್ತಮ ಒಡನಾಡಿಗಳಿದ್ದಂತೆ. ಪುಸ್ತಕಗಳು ಸಾಮಾನ್ಯ ವ್ಯಕ್ತಿಯನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡುತ್ತವೆ ಎಂದು ಜೆಎಸ್ಎಸ್ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹೊನ್ನಶೆಟ್ಟಿ ತಿಳಿಸಿದರು.ನಗರದ ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ದಿನದ ಅಂಗವಾಗಿ ಬುಧವಾರ ಆಯೋಜಿಸಿದ್ದ ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕಗಳು ಬದುಕುವುದನ್ನು ಮತ್ತು ವಿಚಾರ ಮಾಡುವುದನ್ನು ಕಲಿಸುತ್ತವೆ. ಜಗತ್ತನ್ನು ಬೆಳಗಲು ಸೂರ್ಯನಿದ್ದಂತೆ, ನಮ್ಮ ಬದುಕನ್ನು ಬೆಳಗಿ ನಮ್ಮ ಸಾಧನೆಗೆ ದಾರಿದೀಪವಾಗುತ್ತವೆ. ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ ಎಂದರು.
ಪುಸ್ತಕಗಳು ಅಂಬೇಡ್ಕರ್, ಮಹಾತ್ಮ ಗಾಂಧಿ, ಅಬ್ದುಲ್ ಕಲಾಂ, ಸರ್ ಸಿ.ವಿ. ರಾಮನ್ ಮುಂತಾದ ಮಹನೀಯರ ಮೇಲೆ ಬೀರಿದ ಪ್ರಭಾವ ಅಪಾರ. ಪುಸ್ತಕಗಳ ಪ್ರಭಾವದಿಂದಲೇ ಇವರು ಮಹಾನ್ ಸಾಧಕರಾಗಲು ಸಾಧ್ಯವಾಯಿತು. ಆದ್ದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಹೆಚ್ಚು ಹೆಚ್ಚು ರೂಢಿಸಿಕೊಂಡು ಉತ್ತಮ ಸಾಧಕರಾಗಬೇಕು ಎಂದು ಅವರು ಹೇಳಿದರು.ನವಕರ್ನಾಟಕದಿಂದ ಪುಸ್ತಕ ಪ್ರದರ್ಶನ ಮತ್ತು ರಿಯಾಯಿತಿ ದರದ ಮಾರಾಟ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೂ ಮುನ್ನ ಪುಸ್ತಕ ಪ್ರದರ್ಶನವನ್ನು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಉದ್ಘಾಟಿಸಿದರು. ಪ್ರಾಂಶಪಾಲ ಡಾ. ರೇಚಣ್ಣ ಅಧ್ಯಕ್ಷತೆ ವಹಿಸಿದ್ದರು. ಜೆಎಸ್ಎಸ್ ಮಹಾವಿದ್ಯಾಪೀಠದ ಅಭಿವೃದ್ಧಿ ವಿಭಾಗದ ನಿರ್ದೇಶಕ ಕೆ.ಎಲ್. ರೇವಣ್ಣಸ್ವಾಮಿ, ನವಕರ್ನಾಟಕ ಪ್ರಕಾಶನದ ಮೈಸೂರು ಶಾಖೆಯ ವ್ಯವಸ್ಥಾಪಕ ಸತ್ಯನಾರಾಯಣ ಇದ್ದರು. ಗ್ರಂಥಪಾಲಕ ಎಚ್.ಎನ್. ಮಂಜುನಾಥ್ ಸ್ವಾಗತಿಸಿದರು.