ಈ ಭೂಮಿಯಲ್ಲಿ 84 ಲಕ್ಷ ಜೀವರಾಶಿಗಳು ಬದುಕಿವೆ. ಅವುಗಳಿಗೆ ಕೊಡದೆ ಇರುವ ಅದ್ಭುತ ಶಕ್ತಿ ಮನುಷ್ಯನಿಗೆ ದೊರಕಿದೆ. ಅದೇ ಅರಿವಿನ ಶಕ್ತಿ. ಅದನ್ನು ಮನುಷ್ಯ ಜನ್ಮಕ್ಕೆ ಮಾತ್ರ ನೀಡಿದ್ದಾನೆ. ಅರಿವಿನ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು.
ಗದಗ: ಒಂದು ದಿನ ಹುಟ್ಟು ಒಂದು ದಿನ ಸಾವು ನಿಶ್ಚಿತ. ಹುಟ್ಟಿದ ಪ್ರತಿ ಜೀವಿಯು ಸಾಯುವುದು ಪ್ರಕೃತಿಯ ನಿಯಮವಾಗಿದೆ ಎಂದು ಹೊಸಳ್ಳಿ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಸ್ವಾಮಿಗಳು ಹೇಳಿದರು.
ನಗರದ ಒಕ್ಕಲಗೇರಿ ಓಣೆಯಲ್ಲಿ ಗ್ರಾಮದೇವತೆಗಳಾದ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರ ಹರಿ ಜಾತ್ರೆ ಮಹೋತ್ಸವದ ಮೊದಲನೇ ದಿನದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಈ ಭೂಮಿಯಲ್ಲಿ 84 ಲಕ್ಷ ಜೀವರಾಶಿಗಳು ಬದುಕಿವೆ. ಅವುಗಳಿಗೆ ಕೊಡದೆ ಇರುವ ಅದ್ಭುತ ಶಕ್ತಿ ಮನುಷ್ಯನಿಗೆ ದೊರಕಿದೆ. ಅದೇ ಅರಿವಿನ ಶಕ್ತಿ. ಅದನ್ನು ಮನುಷ್ಯ ಜನ್ಮಕ್ಕೆ ಮಾತ್ರ ನೀಡಿದ್ದಾನೆ. ಅರಿವಿನ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು. ಮನುಷ್ಯ ಜನ್ಮ ಸಾರ್ಥಕವನ್ನು ಮಾಡಿಕೊಳ್ಳಬೇಕಾದರೆ ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು, ಮಾನ ಮುಚ್ಚಿಕೊಳ್ಳಲು ಬಟ್ಟೆ ನೀಡಿ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.
ನನ್ನನ್ನು ಪ್ರೀತಿಸಿದಂತೆ ಮತ್ತೊಬ್ಬರನ್ನು ನಾವು ಪ್ರೀತಿಸಬೇಕು. ಕಷ್ಟದಲ್ಲಿ ನೀನು ಮಾಡಿದ ಧರ್ಮ ಮಾತ್ರ ನಿಮ್ಮನ್ನು ಕಾಯುತ್ತದೆ. ಆದ್ದರಿಂದ ಧರ್ಮವಂತರಾಗಿ ಬಾಳಬೇಕು. ಮತ್ತೊಬ್ಬರ ಕಷ್ಟದಲ್ಲಿ ನೆರವಾಗಬೇಕು. ಧರ್ಮವಂತರಾಗಿ ಬಾಳಿದರೆ ಧರ್ಮ ನಿನ್ನನ್ನು ಕಾಯುತ್ತದೆ. ದುಷ್ಟ ಆಲೋಚನೆಗಳನ್ನು ದೂರ ಮಾಡಿ ಪ್ರವಚನ ಕೇಳಿದರೆ ಹರಿ ಜಾತ್ರೆ ಸಾರ್ಥಕವಾಗುತ್ತದೆ ಎಂದರು.ಹಿರೇಮಠದ ಡಾ. ಸಿದ್ಧವೀರ ಸ್ವಾಮಿಗಳು ಮಾತನಾಡಿ, ನಗರದ ಗ್ರಾಮದೇವತೆಯರಾದ ದ್ಯಾಮವ್ವ ಮತ್ತು ದುರ್ಗಮ್ಮ ದೇವಿಯರ ಹರಿ ಜಾತ್ರಾ ಮಹೋತ್ಸವ ಹರಕೆ ಕೂಡಿದ ದಿವಸವಾಗಿದೆ. ರಕ್ತ ಬೀಜಾಸುರನ ಸಂಹಾರ ಮಾಡಿ ಶ್ರೀದೇವಿ ಜಗಜ್ಜನನಿಯಾಗಿದ್ದಾಳೆ ಎಂದರು.
ಈ ವೇಳೆ ಆಧ್ಯಾತ್ಮಿಕ ವಿದ್ಯಾಶ್ರಮದ ಶಿವಶರಣೆ ನೀಲಮ್ಮತಾಯಿ ಅಸುಂಡಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ, ಫಕೀರಪ್ಪ ಹೆಬಸೂರ, ನೀಲಮ್ಮ ಬೋಳನವರ, ಮಂಜುನಾಥ ಅಬ್ಬಿಗೇರಿ, ಕಿಶನ ಮೆಹರವಾಡೆ, ಲಕ್ಷ್ಮೀ ಸಿದ್ದಮ್ಮನಹಳ್ಳಿ, ಮಾಧೂಸಾ ಮೆಹರವಾಡೆ, ಶಕುಂತಲಾ ಅಕ್ಕಿ, ಲಕ್ಷ್ಮೀ ಕಾಕಿ ಸೇರಿದಂತೆ ಮುಂತಾದವರು ಇದ್ದರು.ಗೀತಾಂಜಲಿ ಗೌಡರ ಪ್ರಾರ್ಥಿಸಿದರು. ಬಾಹುಬಲಿ ಜೈನರ ನಿರೂಪಿಸಿದರು. ಪಂಚಾಕ್ಷರಿ ಅಂಗಡಿ ವಂದಿಸಿದರು. ನಂತರ ಮಂಡ್ಯ ಹಾಗೂ ಮೈಸೂರಿನ ಸವಿತಾ ಪೂಜಾ ಕುಣಿತ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.