ಸಾರಾಂಶ
ಶಿರಸಿ: ಭಗವದ್ಗೀತೆ ಜೀವನದ ಉನ್ನತಿಯ ಮಾರ್ಗವನ್ನೂ ಮತ್ತು ಅವನತಿಯ ಮಾರ್ಗವನ್ನೂ ತೋರಿಸಿದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಸ್ವರ್ಣವಲ್ಲೀ ಮಠದಲ್ಲಿ ಸಂಕಲ್ಪಿತ ತಮ್ಮ ೩೪ನೇ ಹಾಗೂ ಕಿರಿಯ ಸ್ವಾಮೀಜಿ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯವರ ಪ್ರಥಮ ಚಾತುರ್ಮಾಸ ವ್ರತದಲ್ಲಿ ಕರೂರು ಸೀಮೆಯ ಶಿಷ್ಯರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.ರಾಮಾಯಣದಲ್ಲಿ ರಾವಣನ ಕಥೆಯೂ ಮತ್ತು ರಾಮನ ಕಥೆಯೂ ಬರುತ್ತದೆ. ರಾಮನ ಕಥೆಯು ಅವನನ್ನು ಅನುಸರಿಸಲು, ರಾವಣನ ಕಥೆ ಹಾಗೆ ಹೋಗಬೇಡಿ ಎನ್ನುವುದಕ್ಕೆ ಅದೇ ರೀತಿ ಭಗವದ್ಗೀತೆಯಲ್ಲೂ ಎರಡು ಮಾರ್ಗಗಳು. ಉನ್ನತಿಯ ಮಾರ್ಗವನ್ನು ಆಯ್ಕೆಮಾಡಿಕೊಳ್ಳುವುದಕ್ಕೆ ಮತ್ತು ಅವನತಿಯ ಮಾರ್ಗವು ಈ ದಾರಿಯಲ್ಲಿ ಹೋಗದೆ ಅದನ್ನು ಬಿಡಬೇಕು ಎನ್ನುವುದಕ್ಕೆ. ಎರಡನ್ನೂ ತಿಳಿದುಕೊಳ್ಳಬೇಕು. ಉನ್ನತಿಯ ಮಾರ್ಗವನ್ನು ಅನುಸರಿಸಿ ಅವನತಿಯ ಮಾರ್ಗವನ್ನು ಬಿಡಬೇಕು. ಉನ್ನತಿಯ ಮಾರ್ಗಗಳನ್ನು ಭಗವಂತನು ಇಡೀ ಭಗವದ್ಗೀತೆಯಲ್ಲಿ ಕೊಟ್ಟಿದ್ದಾನೆ ಎಂದರು.ಕರೂರು ಸೀಮಾ ವತಿಯಿಂದ ನಡೆದ ಉಭಯ ಶ್ರೀಗಳ ಭಿಕ್ಷಾ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ನೆರವೇರಿತು. ಛಾಯಾಚಿತ್ರದ ಚಿತ್ರೀಕರಣದಲ್ಲಿ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ನಾಗೇಂದ್ರ ಮುತ್ಮುರುಡು ಹಾಗೂ ಹವ್ಯಕರ ಹಳೆ ಹಾಡುಗಳ ಪುಸ್ತಕಗಳ ಸಂಗ್ರಹ ಮಾಡಿದ ಗಂಗಾ ಹೆಗಡೆ ಕಾನಸೂರು ಅವರಿಗೆ ನೀಡಿದರು. ಉಮಾಪತಿ ಭಟ್ಟ, ವಿ.ಎಂ. ಹೆಗಡೆ, ಎಂ.ಆರ್. ಹೆಗಡೆ, ಆರ್.ಎಸ್. ಹೆಗಡೆ ಇತರರು ಇದ್ದರು.