ಸತ್ಕಾರ್ಯಗಳಿಂದ ಬದುಕು ಸಮೃದ್ಧ: ರಂಭಾಪುರಿ ಶ್ರೀ

| Published : Jul 30 2025, 12:46 AM IST

ಸತ್ಕಾರ್ಯಗಳಿಂದ ಬದುಕು ಸಮೃದ್ಧ: ರಂಭಾಪುರಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವ ಜೀವನ ದೇವರು ಕೊಟ್ಟ ಉದಾತ್ತ ಕೊಡುಗೆ. ಯೌವನ ಸಂಪತ್ತು ಆಯುಷ್ಯ ಶ್ವತವಲ್ಲ. ನಾವು ಮಾಡುವ ಸತ್ಕಾರ್ಯಗಳ ಸಾಧನೆಯಿಂದ ಬದುಕು ಸಮೃದ್ಧಗೊಳ್ಳುವುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಮಾನವ ಜೀವನ ದೇವರು ಕೊಟ್ಟ ಉದಾತ್ತ ಕೊಡುಗೆ. ಯೌವನ ಸಂಪತ್ತು ಆಯುಷ್ಯ ಶ್ವತವಲ್ಲ. ನಾವು ಮಾಡುವ ಸತ್ಕಾರ್ಯಗಳ ಸಾಧನೆಯಿಂದ ಬದುಕು ಸಮೃದ್ಧಗೊಳ್ಳುವುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಇಲ್ಲಿಯ ರಂಭಾಪುರಿ ಪೀಠದಲ್ಲಿ ಲಿಂ. ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಸೋಮವಾರ ನಡೆದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನೋಡುವ ಕಣ್ಣು ಕೇಳುವ ಕಿವಿ ನುಡಿಯುವ ನಾಲಿಗೆ ಒಳ್ಳೆಯದನ್ನೇ ನುಡಿಯಬೇಕು. ಹಂಚಿ ತಿನ್ನುವ ಗುಣ ಅತ್ಯಂತ ಶ್ರೇಷ್ಠ. ಹಂಚಿ ಉಂಡರೆ ಪ್ರಸಾದ ಆಗುತ್ತದೆ. ಮುಚ್ಚಿಟ್ಟುಕೊಂಡು ತಿಂದರೆ ಆಹಾರವಾಗುತ್ತದೆ. ಜೀವನ ವಿಕಸನಗೊಳ್ಳಲು ಧರ್ಮ ಹಲವು. ದಾರಿ ಹಲವು. ಆದರೆ ಮೂಲ ಗುರಿ ಒಂದೇ. ಒಂದು ಧರ್ಮ ಇನ್ನೊಂದು ಧರ್ಮದ ಸತ್ಯವನ್ನು ಪರಿಗಣಿಸದಿದ್ದರೂ ಆ ಸತ್ಯ ಬದಲಾಗದು. ಸತ್ಯ ಸಂಸ್ಕೃತಿ ಗೌರವಿಸದೇ ಹೋದರೆ ಜೀವನ ನಾಶಗೊಳ್ಳುತ್ತದೆ ಎಂದರು.

ವಸ್ತು ಒಡವೆಗಳ ಹೊರ ರೂಪ ಬದಲಾಗಬಹುದು. ಆದರೆ ಒಳಗಿರುವ ಮೂಲ ಸತ್ಯ ಬದಲಾಗುವುದಿಲ್ಲ. ಪರಿಶ್ರಮ ಮತ್ತು ಸಾಧನೆಯಿಂದ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯವಾಗುತ್ತದೆ. ಲಿಂ. ಶ್ರೀ ಶಿವಾನಂದ ಜಗದ್ಗುರುಗಳವರು ಶ್ರೀ ರಂಭಾಪುರಿ ಪೀಠದ ನವ ನಿರ್ಮಾಣ ಶಿಲ್ಪಿಯೆಂದು ಪ್ರಸಿದ್ಧರಾಗಿದ್ದಾರೆ. ಅವರ ಜೀವನಾದರ್ಶಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾ ಕಿರಣವಾಗಿವೆ ಎಂದರು.

ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶ್ರೀಗಳು, ಹುಡಗಿ ಹಿರೇಮಠದ ಸೋಮೇಶ್ವರ ಶ್ರೀಗಳು, ಸಿದ್ಧರಬೆಟ್ಟದ ವೀರಭದ್ರ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಹಲವಾರು ಗಣ್ಯರಿಗೆ ಹಾಗೂ ಧರ್ಮಾಭಿಮಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಶುಭ ಹಾರೈಸಿದರು. ಚಿಕ್ಕಮಗಳೂರಿನ ಯು.ಎಂ.ಬಸವರಾಜ, ಬಾಸಾಪುರ ಬಿ.ಎಂ.ಭೋಜೇಗೌಡ, ಪರದೇಶಪ್ಪ ಮಠದ ಮಧುಸೂಧನ್, ಶಿವಶಂಕರ ಬೆಳಗೊಳ, ಪ್ರಭುದೇವ ಕಲ್ಮಠ, ಪ್ರಭು ಅಣ್ಣಿಗೇರಿ, ಲೆಕ್ಕಾಧಿಕಾರಿ ಸಂಕಪ್ಪ, ಶಶಿ ಸುರಗಿಮಠ ಇದ್ದರು.

ಪ್ರಾತಃಕಾಲ ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ ಮಹಾಪೂಜೆ ನೆರವೇರಿತು. ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಖಾಂಡ್ಯ ಮತ್ತು ಜಾಗರ ಹೋಬಳಿ ಶಿಷ್ಯ ಸದ್ಭಕ್ತರಿಂದ ಅನ್ನ ದಾಸೋಹ ನಡೆಯಿತು.