ಸಾರಾಂಶ
ಸಂಸ್ಕೃತಿ, ಸಂಸ್ಕಾರವನ್ನು ಅಳವಡಿಸಿಕೊಂಡಾಗ ಜೀವನಕ್ಕೆ ಮಹತ್ವ ಬರುತ್ತದೆ.
ಸಿದ್ದಾಪುರ: ಹಣ, ಆಸ್ತಿ, ಅಂತಸ್ತುಗಳೇ ಬದುಕಿನಲ್ಲಿ ಮುಖ್ಯವಲ್ಲ. ಸಂಸ್ಕೃತಿ, ಸಂಸ್ಕಾರವನ್ನು ಅಳವಡಿಸಿಕೊಂಡಾಗ ಜೀವನಕ್ಕೆ ಮಹತ್ವ ಬರುತ್ತದೆ. ಆದರೆ ಇಂದು ಸಂಸೃತಿ, ಸಂಸ್ಕಾರ ದೂರವಾಗುತ್ತಿದೆ ಎಂದು ಆನಂದಪುರದ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಹಾಗೂ ಶಿವಮೊಗ್ಗ ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀ ಹೇಳಿದರು.
ತಾಲೂಕಿನ ಹೆಗ್ಗೋಡಮನೆಯಲ್ಲಿ ನೂರು ವಸಂತಗಳನ್ನು ಪೂರೈಸಿದ ಆಸರೆ ಶತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ನಂತರ ಆಸರೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಶ್ರೀಗಳು ಆಶೀರ್ವಚನ ನೀಡಿ, ಒಂದು ಕುಟುಂಬ ಉತ್ತುಂಗ ಸ್ಥಾನಕ್ಕೇರಬೇಕಾದರೆ ಕುಟುಂಬದ ಪ್ರತಿಯೊಬ್ಬರ ಶ್ರಮ ಇರುತ್ತದೆ. ಅದರಲ್ಲಿಯೂ ಮಹಿಳೆಯರ ಪಾತ್ರವೂ ಮುಖ್ಯವಾಗಿರುತ್ತದೆ. ಹೆಗ್ಗೋಡಮನೆ ಕುಟುಂಬದವರು ಸಮಾಜದ ಎಲ್ಲ ವಿಭಾಗದಲ್ಲಿಯೂ ತಮ್ಮ ಸೇವೆ ಸಲ್ಲಿಸುತ್ತಿರುವುದು ಮಾದರಿ ಆಗಿದೆ.ನೂರು ವಸಂತಗಳನ್ನು ಪೂರೈಸಿರುವ ಹೆಗ್ಗೋಡಮನೆ ಒಂದು ಐತಿಹಾಸಿಕ ದಾಖಲೆ ನಿರ್ಮಿಸಿದೆ ಎಂದು ಶ್ರೀಗಳು ನುಡಿದರು.ಸೊರಬ ತಾಲೂಕಿನ ಜಡೆ ಸಂಸ್ಥಾನಮಠದ ಡಾ.ಮಹಾಂತ ಸ್ವಾಮಿಗಳು ಆಶೀರ್ವಚನ ನೀಡಿ, ಹೆಗ್ಗೋಡಮನೆ ಎನ್ನುವುದು ಹೆಗ್ಗಳಿಕೆ ಆಗಿದೆ. ಸಮಾಜಕ್ಕೆ ಪೂರಕವಾದ ಕೆಲಸಕಾರ್ಯಗಳನ್ನು ಮಾಡುತ್ತ ಶ್ರೇಷ್ಠತೆಯನ್ನು ಗಳಿಸಿಕೊಂಡು ಸಮಾಜದ ಗೌರವಕ್ಕೆ ಹೆಗ್ಗೋಡಮನೆ ಕಾರಣವಾಗಿದೆ. ಇಂತಹ ಕುಟುಂಬ ಮಲೆನಾಡಿನಲ್ಲಿ ಅಪರೂಪ ಎಂದರು.ಕಾನಳ್ಳಿ ಮಠದ ಪರಮೇಶ್ವರಯ್ಯ ಹೆಗ್ಗೋಡಮನೆಯ ಇತಿಹಾಸವನ್ನು ವಿವರಿಸಿದರು.
ಕುಟುಂಬದ ಹಿರಿಯರಾದ ಎಂ.ಎಸ್.ಗೌಡರ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ಪೂರ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.
ಕೆಳದಿ ರಾಜಗುರು ಮಹಾಮತ್ತಿನ ಭುವನಗಿರಿ ದುರ್ಗ ಸಂಸ್ಥಾನಮಠದ ಪಟ್ಟಾಧ್ಯಕ್ಷರಾದ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಮನೆಯ ಹೆಣ್ಣುಮಕ್ಕಳಿಗೆ ಅರಿಶಿಣ ಕುಂಕುಮ ಭಾಗೀನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಹೆಗ್ಗೋಡಮನೆ ಕುಟುಂಬದ ಸದಸ್ಯರುಗಳಿದ್ದರು.ಸಿದ್ದಾಪುರ ತಾಲೂಕಿನ ಹೆಗ್ಗೋಡುಮನೆಯಲ್ಲಿ ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.